* 12 ತಾಸು ಸತತ ವಿಚಾರಣೆ ಬಳಿಕ ಅಜಯ್ ಮಿಶ್ರಾ ಮಗನ ಬಂಧನ
* 4 ರೈತರ ಬಲಿ ಪಡೆದ ಲಖೀಂಪುರ ಪ್ರಕರಣ
* ಕಡೆಗೂ ಆಶಿಷ್ ವಿಚಾರಣೆಗೆ ಹಾಜರು
* ಘಟನೆ ವೇಳೆ ಎಲ್ಲಿದ್ದೆ? ಎಂಬ ಪೊಲೀಸ್ ಪ್ರಶ್ನೆಗೆ ಹಾರಿಕೆ ಉತ್ತರ
ಲಖೀಂಪುರ ಖೇರಿ(ಅ.10): ನಾಲ್ವರು ರೈತರು ಸೇರಿ 8 ಮಂದಿ ಸಾವಿಗೆ ಕಾರಣವಾಗಿರುವ ಲಖೀಂಪುರ ಹಿಂಸಾಚಾರಕ್ಕೆ(Lakhimpur Kheri) ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್(Supreme Court) ಚಾಟಿ ಬೀಸಿದ ಬೆನ್ನಲ್ಲೇ, ಈ ಪ್ರಕರಣದ ಪ್ರಮುಖ ಆರೋಪಿಯಾದ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ(Ajay Kumar Mishra) ಅವರ ಪುತ್ರ ಆಶಿಷ್ ಮಿಶ್ರಾನನ್ನು(Ashish Mishra) ಶನಿವಾರ ತಡರಾತ್ರಿ ಬಂಧಿಸಲಾಗಿದೆ.
‘ಘಟನೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಕೆಲವು ದಾಖಲೆಗಳೊಂದಿಗೆ ಅವರು 12 ತಾಸಿನ ವಿಚಾರಣೆ ವೇಳೆ ಸ್ಪಷ್ಟನೆ ನೀಡಲು ಯತ್ನಿಸಿದರು. ಆದರೆ ಪೊಲೀಸರ ಕೆಲ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲರಾಗಿ ಅಸಹಕಾರ ತೋರಿದರು. ಹೀಗಾಗಿ ಅವರನ್ನು ಬಂಧಿಸಲಾಯಿತು. ಅವರನ್ನು ಕೋರ್ಟ್ಗೆ ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತೇವೆ’ ಎಂದು ಸಹಾರನ್ಪುರ ಡಿಐಜಿ ಉಪೇಂದ್ರ ಅಗರ್ವಾಲ್ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಘಟನೆ ನಡೆದ ಅ.3ರ ಮಧ್ಯಾಹ್ನ 2.30ರಿಂದ 3.30ರ ನಡುವೆ ತಾನು ಎಲ್ಲಿ ಇದ್ದೆ ಎಂಬುದನ್ನು ಹೇಳಲು ಆಶಿಷ್ ವಿಫಲರಾದರು. ಇದೇ ಅವರ ಬಂಧನಕ್ಕೆ ಕಾರಣವಾಯಿತು.
ಇದರೊಂದಿಗೆ ಆಶಿಷ್ ಬಂಧನ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದ ರೈತ ಸಂಘಟನೆಗಳು(Farmer Unions) ಹಾಗೂ ವಿಪಕ್ಷಗಳ ಪ್ರಮುಖ ಬೇಡಿಕೆ ಈಡೇರಿದಂತಾಗಿದೆ. ಜತೆಗೆ, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 3ಕ್ಕೇರಿದೆ. ಈ ಮುನ್ನ ಇಬ್ಬರು ಆಶಿಷ್ ಆಪ್ತರನ್ನು ಬಂಧಿಸಲಾಗಿತ್ತು.
ಶುಕ್ರವಾರ ವಿಚಾರಣೆಗೆ ಆಶಿಷ್ರನ್ನು ಕರೆದಿತ್ತಾದರೂ ಅವರು ಬಂದಿರಲಿಲ್ಲ. ಆದರೆ, ಘಟನೆ ನಡೆದು ಸುಮಾರು 1 ವಾರದ ಬಳಿಕ ಶನಿವಾರ ಬೆಳಗ್ಗೆ 10.30ಕ್ಕೆ ಲಖೀಂಪುರ ಕ್ರೈಮ್ ಬ್ರಾಂಚ್ ಪೊಲೀಸರೆದುರು(Lakhimpur Crime Branch Police) ಆಶಿಷ್ ಹಾಜರಾದರು. ಡಿಐಜಿ ಅಗರ್ವಾಲ್ ನೇತೃತ್ವದ 11 ಜನರ ಎಸ್ಐಟಿ ತಂಡ ತಡರಾತ್ರಿ 11ರವರೆಗೆ ವಿಚಾರಣೆ ನಡೆಸಿತು.
ಮಿಶ್ರಾ ಹೇಳಿಕೆಯೇನು?:
ವಿಚಾರಣೆ ವೇಳೆ ಆಶಿಷ್ ಮಿಶ್ರಾ, ‘ಅ.3ರಂದು ಲಖೀಂಪುರ ಸನಿಹ ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ನಾವು ಆಯೋಜಿಸಿದ್ದ ಸಮಾರಂಭಕ್ಕೆ ಬರುತ್ತಿದ್ದರು. ನಾನು ಸಮಾರಂಭದಲ್ಲಿ ಇದ್ದ ಕಾರಣ, ಮೌರ್ಯ ಅವರನ್ನು ಕರೆತರಲು ನಮ್ಮ ಬೆಂಬಲಿಗ ಕಾರ್ಯಕರ್ತರು ನಮ್ಮದೇ ಕಾರಿನಲ್ಲಿ ಹೋಗಿದ್ದರು. ಆಗ ರೈತರು ನಮ್ಮ ಕಾರಿನ ಮೇಲೆ ದಾಳಿ ನಡೆಸಿದರು. ಈ ವೇಳೆ ರೈತರನ್ನು ನಮ್ಮ ಕಾರು ಗುದ್ದಿಕೊಂಡು ಹೋಗಿದೆ. ಕಾರಿನಲ್ಲಿ ನಾನು ಇರಲಿಲ್ಲ. ಅದೇ ವೇಳೆ ನನ್ನ ಗ್ರಾಮದಲ್ಲಿ ಸಮಾರಂಭ ನಡೆಯುತ್ತಿತ್ತು ಹಾಗೂ ನಾನು ಕುಸ್ತಿ ನಡೆಯುತ್ತಿದ್ದ ಸ್ಥಳದಲ್ಲಿದ್ದೆ. ಹೀಗಾಗಿ ರೈತರ ಹಿಂಸಾಚಾರ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದಿದ್ದಾನೆ ಎಂದು ಮೂಲಗಳು ಹೇಳಿವೆ.
ಇದಕ್ಕೆ ಪೂರಕವಾಗಿ ವಿಡಿಯೋಗಳು ಮತ್ತು 10 ಮಂದಿಯ ಅಫಿಡವಿಟ್ಗಳನ್ನು ತನಿಖಾಧಿಕಾರಿಗಳಿಗೆ ಆಶಿಷ್ ಸಾಕ್ಷ್ಯಗಳನ್ನಾಗಿ ನೀಡಿದ್ದಾನೆ ಎನ್ನಲಾಗಿದೆ. ಆದಾಗ್ಯೂ ಪೊಲೀಸರು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿದಾಗ ಉತ್ತರಿಸಲು ವಿಫಲರಾಗಿ ತನಿಖೆಗೆ ಅಸಹಕಾರ ತೋರಿದ್ದಾನೆ. ಅವನ ಮೊಬೈಲ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ತನಿಖೆಗೆ ಅಸಹಕಾರ ನಾನು ಇರಲೇ ಇಲ್ಲ!
1. ಅ.3ಕ್ಕೆ ಲಖೀಂಪುರ ಸಮೀಪ ಕಾರ್ಯಕ್ರಮ ಒಂದನ್ನು ಆಯೋಜಿಸಿದ್ದೆವು
2. ಅದಕ್ಕೆ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಬರುವವರಿದ್ದರು
3. ನಾನು ಸಮಾರಂಭದಲ್ಲಿದ್ದ ಕಾರಣ ಬೆಂಬಲಿಗರು ನಮ್ಮ ಕಾರಲ್ಲಿ ಹೋಗಿದ್ದರು
4. ನಮ್ಮ ಕಾರಿಗೆ ರೈತರು ದಾಳಿ ನಡೆಸಿದಾಗ ಅವರನ್ನು ಗುದ್ದಿಕೊಂಡು ಹೋಗಿದೆ
5. ನಾನು ನನ್ನ ಗ್ರಾಮದಲ್ಲಿದ್ದೆ. ಘಟನೆಗೂ, ನನಗೂ ಸಂಬಂಧವಿಲ್ಲ: ಸಚಿವರ ಪುತ್ರ