4 ಗೋಡೆ ನಡುವೆ ಪರಿಶಿಷ್ಟರಿಗೆ ನಿಂದನೆ ಅಪರಾಧವಲ್ಲ: ಸುಪ್ರೀಂ!

By Kannadaprabha NewsFirst Published Nov 7, 2020, 9:45 AM IST
Highlights

4 ಗೋಡೆ ನಡುವೆ ಪರಿಶಿಷ್ಟರಿಗೆ ನಿಂದನೆ ಅಪರಾಧವಲ್ಲ: ಸುಪ್ರೀಂ ತೀರ್ಪು| ಸಾಕ್ಷಿಗಳ ಅನುಪಸ್ಥಿತಿ ಇದ್ದರೆ ಕೇಸು ಸಾಬೀತಾಗಲ್ಲ

ನವದೆಹಲಿ(ನ.07): ‘ನಾಲ್ಕು ಗೋಡೆಗಳ ಮಧ್ಯೆ ಪರಿಶಿಷ್ಟಜಾತಿ ಹಾಗೂ ಪಂಗಡಗಳ (ಎಸ್‌ಸಿ-ಎಸ್‌ಟಿ) ಜನರಿಗೆ ಯಾವುದೇ ಸಾಕ್ಷಿಯ ಅನುಪಸ್ಥಿತಿಯಲ್ಲಿ ನಿಂದಿಸಿದ್ದರೆ ಅದು ಅದು ಅಪರಾಧ ಎನ್ನಿಸಿಕೊಳ್ಳುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಉತ್ತರಾಖಂಡದ ಹಿತೇಶ್‌ ವರ್ಮಾ ಎಂಬ ವ್ಯಕ್ತಿಯು, ಮಹಿಳೆಯೊಬ್ಬಳನ್ನು ಕಟ್ಟಡವೊಂದರ ಒಳಗೆ ನಿಂದಿಸಿದ್ದ ಎಂದು ಆರೋಪಿಸಿ ಪ್ರಕರಣವೊಂದನ್ನು ದಾಖಲಿಸಲಾಗಿತ್ತು. ಈತನ ವಿರುದ್ಧ ಆರೋಪಪಟ್ಟಿಕೂಡ ಹೊರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಆತ ಉತ್ತರಾಖಂಡ ಹೈಕೋರ್ಟ್‌ ಮೊರೆ ಹೋಗಿದ್ದರೂ, ಅದನ್ನು ಹೈಕೋರ್ಟ್‌ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ.

ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ, ‘ಘಟನೆಯು ಮಹಿಳೆಗೆ ಸೇರಿದ ಮನೆಯ ನಾಲ್ಕು ಗೋಡೆಗಳ ಮಧ್ಯೆ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಸಾರ್ವಜನಿಕರಾಗಲಿ ಅಥವಾ ಬಂಧುಗಳು ಅಥವಾ ಸ್ನೇಹಿತರಾಗಲಿ ಇರಲಿಲ್ಲ. ಚಾಜ್‌ರ್‍ಶೀಟ್‌ನಲ್ಲಿ ಕೆಲವು ಸಾಕ್ಷಿಗಳನ್ನು ಹೆಸರಿಸಲಾಗಿದೆ. ಆದರೆ ಅವರು ಘಟನೆ ನಡೆದ ನಾಲ್ಕು ಗೋಡೆಗಳ ಮಧ್ಯೆ ಇದ್ದರು ಎಂದು ಹೇಳಲಾಗದು’ ಎಂದು ಹೇಳಿತು ಹಾಗೂ ವರ್ಮಾ ವಿರುದ್ಧದ ಪ್ರಕರಣ ರದ್ದುಗೊಳಿಸಿತು.

‘ವ್ಯಕ್ತಿಯೊಬ್ಬ ತುಳಿತಕ್ಕೆ ಒಳಗಾದ ವರ್ಗಕ್ಕೆ ಸಾರ್ವಜನಿಕರಿಗೆ ಕಾಣುವಂತೆ ನಿಂದಿಸಿದರೆ ಅದನ್ನು ಎಸ್‌ಸಿ/ಎಸ್‌ಟಿ ಕಾಯಿದೆಯ ಅಡಿ ಅಪರಾಧ ಎಂದು ಹೇಳಬಹುದು’ ಎಂದು ಕೋರ್ಟ್‌ ಸ್ಪಷ್ಟಪಡಿಸಿತು. ‘ಮನೆಯ ಅಂಗಳದಲ್ಲಿ ನಿಂದನೆ ನಡೆದಿದ್ದರೆ ಹಾಗೂ ಅದನ್ನು ದಾರಿಹೋಕರು ನೋಡಿದ್ದರೆ, ಅಂಥ ಪ್ರಕರಣಗಳನ್ನು ಪರಿಶೀಲಿಸಬಹುದು’ ಎಂದೂ ಕೋರ್ಟ್‌ ಹೇಳಿತು.

click me!