ಅಗ್ನಿಪಥ ವಿರುದ್ಧ ಪ್ರತಿಭಟನೆಯಿಂದ ರೈಲ್ವೆ ಇಲಾಖೆಗೆ 260 ಕೋಟಿ ರೂಪಾಯಿ ನಷ್ಟ!

By Suvarna NewsFirst Published Jul 22, 2022, 4:56 PM IST
Highlights

ಕೇಂದ್ರ ಸರ್ಕಾರ ಸೇನಾ ನೇಮಕಾತಿಗೆ ಅಗ್ನಿಪಥ ಯೋಜನೆ ಜಾರಿ ಮಾಡಿದೆ. ಆದರೆ ಈ ಯೋಜನೆ ಘೋಷಣೆ ಬೆನ್ನಲ್ಲೇ ದೇಶದ ಕೆಲ ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ರೈಲಿಗೆ ಬೆಂಕಿ ಹಚ್ಚಲಾಗಿದ್ದು, ರೈಲು ನಿಲ್ದಾಣಗಳನ್ನು ಧ್ವಂಸಗೊಳಿಸಲಾಗಿತ್ತು. ಇದೀಗ ಈ ಹೋರಾಟದಿಂದ ರೈಲ್ವೆ ಇಲಾಖೆ ಅನುಭವಿಸಿದ ನಷ್ಟದ ವಿವರ ಬಹಿರಂಗವಾಗಿದೆ.

ನವದೆಹಲಿ(ಜು.22): ಭಾರತೀಯ ಸೇನಾ ನೇಮಕಾತಿಗೆ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಘೋಷಿಸಿದೆ. ಆದರೆ ಈ ಯೋಜನೆಗೆ ವಿರೋಧವೂ ವ್ಯಕ್ತವಾಗಿತ್ತು. ದೇಶದ ಹಲವೆಡೆ ಭಾರಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ರೈಲುಗಳನ್ನೇ ಟಾರ್ಗೆಟ್ ಮಾಡಲಾಗಿತ್ತು. ಹಲವು ರೈಲು ನಿಲ್ದಾಣಗಳು ಧ್ವಂಸಗೊಂಡಿತ್ತು. ರೈಲಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಯೋಜನೆ ವಿರುದ್ಧ ಶಾಂತಿಯುತ ಪ್ರತಿಭಟನೆ ಬದಲು ಗಲಭೆ ಸೃಷ್ಟಿಸಿ ರೈಲುಗಳನ್ನು ಟಾರ್ಗೆಟ್ ಮಾಡಿದ ಕಾರಣ ಭಾರತೀಯ ರೈಲ್ವೆ ಇಲಾಖೆ 259.44 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ. ಭಾರಿ ಪ್ರತಿಭಟನೆಯಿಂದ ಹಲವು ರೈಲು ಪ್ರಯಾಣ ರದ್ದಾಗಿದೆ. ದಿಢೀರ್ ಸಂಚಾರ ರದ್ದು ಮಾಡಿದ ಕಾರಣ ಒಟ್ಟು 102.96 ಕೋಟಿ ರೂಪಾಯಿ ಟಿಕೆಟ್ ಹಣವನ್ನು ಹಿಂತಿರುಗಿಸಲಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ. ಜೂನ್ 14 ರಿಂದ ಜೂನ್ 30ರ ವರೆಗಿನ ಟಿಕೆಟ್ ಬುಕಿಂಗ್ ಹಣ ಹಿಂತಿರುಗಿಸಲಾಗಿದೆ ಎಂದಿದ್ದಾರೆ.

ಅಗ್ನಿಪಥ ಯೋಜನೆ(Agnipath Yojana) ವಿರೋಧಿಸಿ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿತ್ತು. ಕಾಂಗ್ರೆಸ್ ಈ ಪ್ರತಿಭಟನೆಗೆ(Congress Protest) ಸಂಪೂರ್ಣ ಬೆಂಬಲ ನೀಡಿತ್ತು. ಇನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿತ್ತು.  ಬಿಹಾರ, ಉತ್ತರ ಪ್ರದೇಶ, ತೆಲಂಗಾಣ ಸೇರಿದಂತೆ ಕಲ ರಾಜ್ಯಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಬಿಹಾರದಲ್ಲಿ  ನವದೆಹಲಿ-ಭಾಗಲ್ಪುರ ವಿಕ್ರಮಶಿಲಾ ಎಕ್ಸ್‌ಪ್ರೆಸ್‌ ಅನ್ನು ಲಖೀಸರಾಯ್‌ನಲ್ಲಿ, ನವದೆಹಲಿ-ದರ್ಭಾಂಗ್‌ ಬಿಹಾರ ಸಂಪರ್ಕಕ್ರಾಂತಿ ಎಕ್ಸ್‌ಪ್ರೆಸ್‌ ರೈಲನ್ನು ಸುಡಲಾಗಿತ್ತು.

ಉತ್ತರ ಪ್ರದೇಶದ ಬಲಿಯಾ, ವಾರಾಣಸಿ, ಫಿರೋಜ್‌ಪುರ, ಅಮೇಠಿಯಲ್ಲಿ ಪ್ರತಿಭಟನೆಗಳು ಹಿಂಸಾರೂಪ ಪಡೆದಿವೆ. ಬಲಿಯಾದಲ್ಲಿ ಖಾಲಿ ರೈಲೊಂದಕ್ಕೆ ಬೆಂಕಿ ಹಚ್ಚಲಾಗಿದೆ. ಜನರನ್ನು ಚದುರಿಸಲು ಲಾಠಿಪ್ರಹಾರ ನಡೆಸಲಾಗಿದೆ. ವಾರಾಣಸಿ, ಫಿರೋಜ್‌ಪುರ ಹಾಗೂ ಅಮೇಠಿಯಲ್ಲಿ ಬಸ್ಸುಗಳ ಮೇಲೆ ಕಲ್ಲು ತೂರಿ, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮಾಡಲಾಗಿದೆ.ಮಧ್ಯಪ್ರದೇಶದ ವಾಣಿಜ್ಯ ರಾಜಧಾನಿ ಇಂದೋರ್‌ನಲ್ಲಿ 600 ಯುವಕರು ರೈಲು ತಡೆ ನಡೆಸಿ ಕಲ್ಲು ತೂರಿದ್ದಾರೆ. ಹರ್ಯಾಣದ ಜಿಂದ್‌-ಬಠಿಂಡಾ ರೈಲು ಮಾರ್ಗ ಹಾಗೂ ನರ್ವಾಣಾ ಎಂಬಲ್ಲಿ ಪ್ರತಿಭಟನಾಕಾರರು ಹಳಿಗಳ ಮೇಲೆ ಟೈರ್‌ ಇಟ್ಟು ಬೆಂಕಿ ಹಚ್ಚಲಾಗಿತ್ತು.

ಕಾಂಗ್ರೆಸ್‌ಗೆ ತೀವ್ರ ಮುಜುಗರ, ಅಗ್ನಿಪಥ ವಿರುದ್ಧದ ಪ್ರತಿಭಟನಾ ಪತ್ರಕ್ಕೆ ಸಹಿ ಹಾಕಲು ಮನೀಶ್ ತಿವಾರಿ ನಕಾರ!

ಈ ಪ್ರತಿಭಟನೆಯಿಂದ(Army Recruitment) ರೈಲ್ವೆ ಇಲಾಖೆ ತೀವ್ರ ನಷ್ಟ ಅನುಭವಿಸಿದೆ.  ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ ರೈಲ್ವೆ ಸಚಿವರು ಈ ಹಿಂದಿನ ವರ್ಷಗಳಲ್ಲಿ ಪ್ರತಿಭಟನೆ ಕಾರಣಕ್ಕೆ ರೈಲುಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. 2019-20ರ ಸಾಲಿನಲ್ಲಿ ಪ್ರತಿಭಟನೆ ಕಿಚ್ಚಿಗೆ ರೈಲ್ವೆ ಇಲಾಖೆಗೆ 151 ಕೋಟಿ ರೂಪಾಯಿ ನಷ್ಟವಾಗಿದೆ. ಇನ್ನು 2020-21ರ ಸಾಲಿನಲ್ಲಿ 904 ಕೋಟಿ ರೂಪಾಯಿ ನಷ್ಟವಾಗಿದ್ದರೆ, 2021-22ರ ಸಾಲಿನಲ್ಲಿ 62 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರತಿಭಟನೆ ಹೆಸರಿನಲ್ಲಿ ರೈಲಿಗೆ ಹಾನಿ, ರೈಲು ನಿಲ್ದಾಣಕ್ಕೆ ಹಾನಿ ಮಾಡಿದವರ ವಿರುದ್ಧ 2019ರಲ್ಲಿ 95 ಪ್ರಕರಣ ದಾಖಲಾಗಿದೆ. ಇನ್ನು 2020ರಲ್ಲಿ 30 ಪ್ರಕರಣ ದಾಖಲಾಗಿದೆ. ಇನ್ನು 2021ರಲ್ಲಿ 34 ಪ್ರಕರಣ ದಾಖಲಾಗಿದೆ.

ಅಗ್ನಿಪಥ್‌ ಬೆಂಕಿಗೆ ಹಳಿತಪ್ಪಿದ 539 ರೈಲುಗಳು, ನಿಲ್ದಾಣಗಳಲ್ಲಿ ಪ್ರಯಾಣಿಕರ ಪರದಾಟ!
 

click me!