ಮಹಾತ್ಮಾ ಗಾಂಧಿ ಪುಣ್ಯತಿಥಿ ದಿನವೇ ಭಾರತೀಯರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಇದಕ್ಕೆ ಕಾರಣ ಮಹತ್ಮಾ ಗಾಂಧಿ ಪ್ರತಿಮೆ ಧ್ವಂಸ ಪ್ರಕರಣ.
ಕ್ಯಾಲಿಫೋರ್ನಿಯಾ(ಜ.30): ದೇಶ ಮಹಾತ್ಮಾ ಗಾಂಧಿ ಪುಣ್ಯತಿಥಿಯಲ್ಲಿ ಮುಳುಗಿತ್ತು. ಈ ವೇಳೆ ಕಹಿ ಸುದ್ದಿಯೊಂದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್ನಲ್ಲಿದ್ದ ಮಹತ್ಮಾ ಗಾಂಧಿ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.
'ಅದೊಂದು ವಿಚಾರದಲ್ಲಿ ಗಾಂಧೀಜಿ ಹಾಗೆ ಮಾಡಬಾರದಿತ್ತು'
ಜನವರಿ 28 ರಂದು ಕಿಡಿಗೇಡಿಗಳು ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಶಾಂತಿಧೂತ, ಅಹಿಂಸಾ ಕರ್ಮಿಯ ಪ್ರತಿಮೆಯನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಘಟನೆಯನ್ನು ಖಂಡಿಸಿತ್ತು. ಕಠಿಣ ಕ್ರಮಕ್ಕೆ ಆಗ್ರಹಿಸಿದೆ.
ಅಮೇರಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಪ್ರಕರಣದ ತನಿಖೆಗೆ ಆಗ್ರಹಿಸಿದೆ. ಇಷ್ಟೇ ಅಲ್ಲ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದೆ. ಮಹತ್ಮಾ ಗಾಂಧಿ ಪ್ರತಿಮೆ ಧ್ವಂಸ ಘಟನೆಗೆ ಡೇವಿಸ್ ನಗರದ ಮೇಯರ್ ವಿಷಾದ ವ್ಯಕ್ತಪಡಿಸಿದ್ದಾರೆ. ಮಹತ್ಮಾ ಗಾಂಧಿ ಪ್ರತಿಮೆ ಧ್ವಂಸವನ್ನು ಒಪ್ಪಲು ಸಾಧ್ಯವಿಲ್ಲ. ಈ ಕುರಿತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
2016ರಲ್ಲಿ ಭಾರತ ಸರ್ಕಾರ ಈ ಮಹತ್ಮಾ ಗಾಂಧಿ ಪ್ರತಿಮೆಯನ್ನು ಅಮೆರಿಕಕ್ಕೆ ಉಡುಗೊರೆಯಾಗಿ ನೀಡಿತ್ತು. ಅಮೆರಿಕ ಈ ಪ್ರತಿಮೆಯನ್ನು ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಡೇವಿಸ್ ನಗರದಲ್ಲಿರುವ ಸೆಂಟ್ರಲ್ ಪಾರ್ಕ್ನಲ್ಲಿ ಇಟ್ಟಿತ್ತು.