ಹಾಥ್ರಸ್ (ಉ.ಪ್ರ): ಉತ್ತರ ಪ್ರದೇಶದ ಹತ್ರಾಸ್ನಲ್ಲಿ ನಡೆದ ಧಾರ್ಮಿಕ ಸಭೆಯೊಂದರಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 121ಕ್ಕೆ ಏರಿದೆ. ಅನೇಕರು ಗಾಯಗೊಂಡಿದ್ದಾರೆ. ಈ ಪೈಕಿ ಗಾಯಗೊಂಡ ನೂರಾರು ಜನರನ್ನು ಸಮೀಪದ ಎಟಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ, ಗಾಯಾಳುಗಳನ್ನು ಹಾಗೂ ಶವಗಳನ್ನು ಎಟಾ ಆಸ್ಪತ್ರೆಗೆ ಟ್ರಕ್ ಹಾಗೂ ಟೆಂಪೋಗಳಲ್ಲಿ ತರಲಾಗಿದೆ. ಆಸ್ಪತ್ರೆಯಲ್ಲಿ ಪುಟ್ಟ ಬಾಲಕರು ಸೇರಿ ಹಲವರ ಶವಗಳನ್ನು ಕೋಣೆಯೊಂದರಲ್ಲಿ ನೆಲದ ಮೇಲೆ ಮಲಗಿಸಲಾಗಿದ್ದು, ಅದರ ಸುತ್ತ ಜನರು ರೋದಿಸುತ್ತಿರುವ ದೃಶ್ಯಗಳು ಹೃದಯ ಕಲಕುವಂತಿವೆ.
ಹಾಥ್ರಸ್ ಕಾಲ್ತುಳಿತಕ್ಕೆ ಮೋದಿ. ಯೋಗಿ ಆಘಾತ
ನವದೆಹಲಿ: ಹಾಥ್ರಸ್ ಭೋಲೆಬಾಬಾ ಸತ್ಸಂಗ್ ಕಾಲ್ತುಳಿತ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿನ ತಮ್ಮ ಭಾಷಣದ ವೇಳೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಮೋದಿ ತಲಾ 2 ಲಕ್ಷ ರು. ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಲಾ 2 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಘಟನೆಯ ಬಗ್ಗೆ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
ಯಾರು ಈ ಬಾಬಾ?
ಕಾಲ್ತುಳಿತಕ್ಕೆ ಕಾರಣವಾದ ಸತ್ಸಂಗ ಹಮ್ಮಿಕೊಂಡವರು ಬಾಬಾ ನಾರಾಯಣ ಸಾಕರ್ ಹರಿ ಅಲಿಯಾಸ್ ಭೋಲೆ ಬಾಬಾ. ಇವರು ಉತ್ತರ ಪ್ರದೇಶದ ಎಟಾದವರು. ತಾವು ಗುಪ್ತಚರ ದಳದಲ್ಲಿ ಉದ್ಯೋಗಿ ಆಗಿದ್ದೆ ಎಂದು ಹೇಳುವ ಅವರು 26 ವರ್ಷಗಳ ಹಿಂದೆ ತಮ್ಮ ಸರ್ಕಾರಿ ಕೆಲಸ ತೊರೆದು ಧಾರ್ಮಿಕ ಪ್ರವಚನ ನೀಡಲು ಪ್ರಾರಂಭಿಸಿದ್ದರು. ಪಶ್ಚಿಮ ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ, ದೆಹಲಿ ಸೇರಿದಂತೆ ದೇಶಾದ್ಯಂತ ಭೋಲೆ ಬಾಬಾಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ