ಉಚಿತ ಸ್ಕೀಂಗೆ ಹಣವಿದೆ, ಚರಂಡಿ ನಿರ್ಮಾಣಕ್ಕೆ ಇಲ್ಲವೆ? ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

By Kannadaprabha NewsFirst Published Aug 1, 2024, 10:10 AM IST
Highlights

ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಪ್ರವಾಹ ನೀರಿನಲ್ಲಿ ಮುಳುಗಿ ಮೂವರು ಐಎಎಸ್‌ ಆಕಾಂಕ್ಷಿತ ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್, ದೆಹಲಿ ಸರ್ಕಾರ ಮತ್ತು ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ.

ನವದೆಹಲಿ : ದೆಹಲಿಯ ಕೋಚಿಂಗ್ ಸೆಂಟರ್‌ನಲ್ಲಿ ಪ್ರವಾಹ ನೀರಿನಲ್ಲಿ ಮುಳುಗಿ ಮೂವರು ಐಎಎಸ್‌ ಆಕಾಂಕ್ಷಿತ ವಿದ್ಯಾರ್ಥಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್, ದೆಹಲಿ ಸರ್ಕಾರ ಮತ್ತು ಮಹಾನಗರ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ಸೂಕ್ತ ತನಿಖೆ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿರುವ ನ್ಯಾಯಾಲಯ, ಆಪ್‌ ಸರ್ಕಾರದ ಉಚಿತ ಯೋಜನಗೆಳ ವಿರುದ್ಧವೂ ಕಿಡಿ ಕಾರಿದೆ. ಉಚಿತ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಕಾರಣ ಚರಂಡಿ ನಿರ್ಮಿಸಲು ಹಣ ಇಲ್ಲವೇ ಎಂದು ಪ್ರಶ್ನಿಸಿದೆ.

ಪಿಐಎಲ್‌ ಅರ್ಜಿ ನಡೆಸಿದ ಹೈಕೋರ್ಟ್‌ನ ದ್ವೀಸದಸ್ಯ ಪೀಠ, ರಾಜೀಂದ್ರ ನಗರದಲ್ಲಿ ಅನಾಹುತ ನಡೆದ ತರಬೇತಿ ಕೇಂದ್ರ, ಮಹಾನಗರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಬದಲು, ಕೋಚಿಂಗ್ ಸೆಂಟರ್‌ನ ಹೊರಗಡೆ ಕಾರು ಚಲಾಯಿಸಿದ ವ್ಯಕ್ತಿಯನ್ನು ಬಂಧಿಸಿರುವುದಕ್ಕೆ ಗರಂ ಆಗಿದೆ.

Latest Videos

ದೆಹಲಿ ದುರಂತ: ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದ ಮೂವರ ಜೀವಕ್ಕೆ ಕಟ್ಟಡ ನಿಯಮ ಉಲ್ಲಂಘನೆ ಕುತ್ತು!

‘ದೆಹಲಿ ಪೊಲೀಸರು ಏನು ಮಾಡುತ್ತಿದ್ದಾರೆ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇದು ಮುಚ್ಚಿಹಾಕುವ ಪ್ರಯತ್ನವೇ? ಈ ಘಟನೆಗೆ ಇದುವರೆಗೆ ಕೆಲ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆಯೇ? ಒಮ್ಮೆ ಅಧಿಕಾರಿಗಳಿಗೆ ಹೊಣೆ ವಹಿಸಿದರೆ ಮತ್ತೆ ಇಂಥ ಘಟನೆ ನಡೆಯಲ್ಲ.+ ಇದು ಗಂಭೀರವಾದ ವಿಚಾರ. ನಗರದಲ್ಲಿ ಅತಿದೊಡ್ಡ ಮಟ್ಟಿಗೆ ಮೂಲಭೂತ ಸೌಲಭ್ಯಗಳ ಕೊರತೆಯಾಗಿದೆ’ ಎಂದು ಪೀಠ ಹೇಳಿದೆ.

ಇದೇ ಸಂದರ್ಭದಲ್ಲಿ ನ್ಯಾಯಾಲಯ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದ್ದು, ‘ಉಚಿತ ಯೋಜನೆಗಳಿಗೆ ಹಣ ಖರ್ಚು ಮಾಡುತ್ತಿದ್ದೀರಿ. ಹೀಗಾಗಿ ಚರಂಡಿ ಅಭಿವೃದ್ಧಿಗೆ ಹಣವಿಲ್ಲವೇ?’ ಎಂದು ತರಾಟೆಗೆ ತೆಗೆದುಕೊಂಡಿದೆ. ‘ನಿಮ್ಮ ಅಧಿಕಾರಿಗಳು ದಿವಾಳಿಯಾಗಿದ್ದಾರೆ. ನಿಮ್ಮಲ್ಲಿ ಸಂಬಳ ಕೊಡಲು ಹಣವಿಲ್ಲದಿದ್ದಾಗ, ಮೂಲಭೂತ ಸೌಲಭ್ಯಗಳನ್ನು ಹೇಗೆ ಅಭಿವೃದ್ಧಿ ಪಡಿಸುತ್ತೀರಿ? ನಿಮಗೆ ಉಚಿತ ಯೋಜನೆ ಸಂಸ್ಕೃತಿ ಬೇಕು. ಆದರೆ ತೆರಿಗೆ ಸಂಗ್ರಹ ಬೇಕಿಲ್ಲ. ನೀವು ಯಾವುದೇ ಹಣವನ್ನು ಸಂಗ್ರಹಿಸಲ್ಲ, ಹಾಗಾಗಿ ಹಣವನ್ನು ಖರ್ಚು ಮಾಡಲ್ಲ. ಹೀಗಾಗಿ ಇಂತಹ ದುರಂತಗಳು ನಡೆಯುತ್ತದೆ’ ಎಂದು ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದೆ.

ದೆಹಲಿಯ ಐಎಎಸ್ ಕೋಚಿಂಗ್ ಸೆಂಟರ್‌ನಲ್ಲಿ ಇದ್ದಕ್ಕಿದ್ದಂತೆ ನೀರು ತುಂಬಿಕೊಂಡಿದ್ದೇಗೆ? ಮೂವರ ಸಾವಿಗೆ ಕಾರಣವಾಯ್ತಾ AAP?

ಈ ಪ್ರಕರಣದ ವಿಚಾರಣೆ ನಡೆಸುವಂತೆ ಕೇಂದ್ರೀಯ ಸಂಸ್ಥೆಗೆ ಸೂಚಿಸಿರುವ ದೆಹಲಿ ಹೈಕೋರ್ಟ್‌ ದೆಹಲಿ ಮಹಾನಗರ ಪಾಲಿಕೆಯ ಕಮಿಷನರ್‌, ಪೊಲೀಸ್ ಉಪ ಆಯುಕ್ತರು ಹಾಗೂ ತನಿಖಾಧಿಕಾರಿಯನ್ನು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

click me!