
ಶ್ರೀನಗರ (ಜೂ.16): ದೇಶದ ಗಡಿ ಭಾಗಗಳಲ್ಲಿ ಹದ್ದಿನ ಕಣ್ಣಿಟ್ಟಿರುವ ಭಾರತೀಯ ಸೇನೆ, ಶುಕ್ರವಾರ ಮುಂಜಾನೆಯೇ ಕುಪ್ವಾರದಲ್ಲಿ ಭರ್ಜರಿ ಭೇಟೆ ನಡೆಸಿದೆ. ದೇಶಕ್ಕೆ ನುಸುಳಲು ಯತ್ನಿಸಿದ ಐವರು ಪಾಕ್ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಸೇನೆ ಹಾಗೂ ಪಾಕ್ ನೆಲದ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಐವರು ಉಗ್ರರನ್ನು ಸೇನೆ ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. ಅದರ ಬೆನ್ನಲ್ಲಿಯೇ ಇಡೀ ಪ್ರದೇಶದಲ್ಲಿ ಭಾರತೀಯ ಸೇನೆ ಶೋಧ ಕಾರ್ಯ ನಡೆಸಿದ್ದು ಯಾವ ಕಾರಣಕ್ಕಾಗಿ ಭಾರತಕ್ಕೆ ಒಳನುಸುಳಲು ಪ್ರಯತ್ನ ಮಾಡುತ್ತಿದ್ದರು ಎನ್ನುವುದನ್ನು ತಿಳಿಯುವ ಗುರಿಯಲ್ಲಿದೆ. 'ಐವರು ವಿದೇಶಿ ಭಯೋತ್ಪಾದಕರನ್ನು ಎನ್ಕೌಂಟರ್ನಲ್ಲಿ ಸಾಯಿಸಲಾಗಿದೆ. ಅದರೊಂದಿಗೆ ಶೋಧ ಕಾರ್ಯ ನಡೆಯುತ್ತಿದೆ' ಎಂದು ಜಮ್ಮು ಕಾಶ್ಮೀರ ಪೊಲೀಸ್ನ ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಕುಪ್ವಾರ ವಲಯದ ಪೊಲೀಸ್, 'ಭಯೋತ್ಪಾದಕರು ಹಾಗೂ ಸೇನೆ-ಪೊಲೀಸ್ ತಂಡಗಳ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಕುಪ್ವಾರ ಜಿಲ್ಲೆಯ ಜುಮಾಗುಂಡ್ ಪ್ರದೇಶದ ಎಲ್ಓಸಿ ಬಳಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಇದ್ದ ಬೆನ್ನಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬರಬೇಕಿದೆ' ಎಂದು ತಿಳಿಸಿತ್ತು.
ಜೂನ್ 13 ರಂದು ಜಮ್ಮು ಕಾಶ್ಮೀರ ಪೊಲೀಸ್ ಹಾಗೂ ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು. ಆ ಎನ್ಕೌಂಟರ್ ಕೂಡ ಕುಪ್ವಾರ ಜಿಲ್ಲೆಯಲ್ಲಿಯೇ ನಡೆದಿತ್ತು. ಇಲ್ಲಿನ ಎಲ್ಓಸಿ ಭಾಗದ ದೋಬ್ನಾರ್ ಮಚ್ಚಾಲ್ ಪ್ರದೇಶದಲ್ಲಿ ಈ ಚಕಮಕಿ ನಡೆದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ