
ನವದೆಹಲಿ(ಮಾ.03): ನೂತನ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೊಶಗೊಂಡಿರುವ ರೈತ ಹೋರಾಟಗಾರರು, ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕರೆ ನೀಡುವುದಾಗಿ ಗುಡುಗಿದ್ದಾರೆ. ಏತನ್ಮಧ್ಯೆ, ವಿವಿಧ ಬೆಳೆಗಳಿಗೆ 1000 ರು.ಗಿಂತ ಕಡಿಮೆ ಬೆಂಬಲ ಬೆಲೆ ನೀಡುತ್ತಿರುವ ಕರ್ನಾಟಕಕ್ಕೂ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು ಭೇಟಿ ನೀಡಿ, ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ಕೆಎಂ) ಮುಖಂಡ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ಮಾತನಾಡಿದ ಎಸ್ಕೆಎಂ ಮುಖಂಡ ರಾಜೇವಾಲ್, ‘ಚುನಾವಣೆ ನಿಗದಿಯಾಗಿರುವ 5 ರಾಜ್ಯಗಳಿಗೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸುತ್ತೇವೆ. ಆದರೆ ನಾವು ಇಂಥದ್ದೇ ಪಕ್ಷಕ್ಕೆ ಮತ ಹಾಕುವಂತೆ ರೈತರಿಗೆ ಕೋರಿಕೊಳ್ಳಲ್ಲ. ಬದಲಾಗಿ ಬಿಜೆಪಿಯನ್ನು ಸೋಲಿಸಲು ಸಮರ್ಥವಿರುವ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಕೇಳಿಕೊಳ್ಳುತ್ತೇವೆ. ತನ್ಮೂಲಕ ರೈತರಿಗೆ ಮರಣ ಶಾಸನವಾಗಲಿರುವ ನೂತನ 3 ಕೃಷಿ ಕಾಯ್ದೆ ಹಿಂಪಡೆಯದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸುವುದಾಗಿ’ ಹೇಳಿದ್ದಾರೆ.
ದಿಲ್ಲಿ ಗಡಿಗಳಲ್ಲಿ ರೈತರ ಪ್ರತಿಭಟನೆಗೆ 100 ದಿನ ತುಂಬಲಿರುವ ಕಾರಣ ಮಾ.6ರಂದು ಕೆಎಂಪಿ ಹೆದ್ದಾರಿಯನ್ನು 5 ಗಂಟೆಗಳ ಕಾಲ ತಡೆಯಲಾಗುತ್ತದೆ. ಮಹಿಳಾ ದಿನಾಚರಣೆಯಾದ ಮಾ.8ರಂದು ಮಹಿಳಾ ಪ್ರತಿಭಟನಾಕಾರರೇ ದಿಲ್ಲಿ ಗಡಿಗಳಲ್ಲಿ ಪ್ರತಿಭಟನೆ ನೇತೃತ್ವ ವಹಿಸಲಿದ್ದಾರೆ. ಮಾ.12ರಂದು ರೈತ ಮುಖಂಡರು ಕೋಲ್ಕತಾಗೆ ತೆರಳಿ ಬಿಜೆಪಿ ಮತ ಹಾಕದಂತೆ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ