'ಹಕ್ಕಿ ಜ್ವರದಿಂದ ಕಾಗೆ, ವಲಸೆ ಹಕ್ಕಿಗಳು ಸತ್ತಿಲ್ಲ'

By Suvarna NewsFirst Published Jan 9, 2021, 9:23 AM IST
Highlights

ಹಕ್ಕಿಜ್ವರದಿಂದ ಕಾಗೆ, ವಲಸೆ ಹಕ್ಕಿಗಳು ಸತ್ತಿಲ್ಲ| ಹೆಬ್ಬಾಳ ಪಶು ವಿವಿ ಲ್ಯಾಬ್‌ ವರದಿ ಬಂದಿದೆ| ಆತಂಕ ಬೇಡ: ಪಶುಸಂಗೋಪನಾ ಇಲಾಖೆ

ಬೆಂಗಳೂರು(ಜ.09): ಮಂಗಳೂರಿನಲ್ಲಿ ಕಾಗೆಗಳು ಹಾಗೂ ಚಿಕ್ಕಬಳ್ಳಾಪುರದ ಅಮಾನಿ ಕೆರೆಯಲ್ಲಿ ವಲಸೆ ಹಕ್ಕಿಗಳ ಸಾವಿಗೆ ಹಕ್ಕಿ ಜ್ವರ ಕಾರಣವಲ್ಲ ಎಂದು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಪ್ರಯೋಗಾಲಯ ವರದಿ ನೀಡಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ಪಶುಸಂಗೋಪನಾ ಇಲಾಖೆ ಹೇಳಿದೆ.

ಶಿವಮೊಗ್ಗದಲ್ಲಿ ಅತಿ ಮಳೆಯಿಂದಾಗಿ ಹಲವು ವಲಸೆ ಹಕ್ಕಿಗಳು ಮೃತಪಟ್ಟಿದ್ದವು. ಆದರೂ ಅವುಗಳ ಅವಶೇಷಗಳನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದು, ವರದಿ ನಿರೀಕ್ಷಿಸಲಾಗುತ್ತಿದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪಶುಸಂಗೋಪನಾ ಇಲಾಖೆ ಆಯುಕ್ತ ಎಚ್‌. ಬಸವರಾಜೇಂದ್ರ, ಹಕ್ಕಿಜ್ವರ ರಾಜ್ಯಕ್ಕೆ ಬರದಂತೆ ಸಾಕಷ್ಟುಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಕೇರಳ ಗಡಿಗಳ ಚೆಕ್‌ಪೋಸ್ಟ್‌ಗಳಲ್ಲಿ ದಿನದ 24 ತಾಸು ಸಿಬ್ಬಂದಿ ನಿಯೋಜಿಸಿದ್ದು ಕಟ್ಟೆಚ್ಚರ ವಹಿಸಲಾಗುತ್ತಿದೆ. ಜೊತೆಗೆ, ಕೋಳಿ ಮತ್ತು ಕೋಳಿ ಉತ್ಪನ್ನಗಳು ರಾಜ್ಯಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲಿ ಸಂಪೂರ್ಣ ಸ್ಯಾನಿಟೈಜ್‌ ಮಾಡಲಾಗುತ್ತಿದೆ ಎಂದು ಹೇಳಿದರು.

click me!