* ಕಾಂಗ್ರೆಸ್ ಸಂಸದೀಯ ಸಮಿತಿ ಪುನರ್ರಚನೆ
* ಸ್ಥಾನ ಉಳಿಸಿಕೊಂಡ ಅಧೀರ್ ರಂಜನ್, ಜಿ-23 ನಾಯಕರಿಗೂ ಸ್ಥಾನ
* ಅಧೀರ್ ರಂಜನ್ ಕುರ್ಚಿಗೆ ಕುತ್ತಿಲ್ಲ
ನವದೆಹಲಿ(ಜು.19): ಲೋಕಸಭೆಯ ಮುಂಗಾರು ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್ ನಾಯಕಿ ಸೋನಿಯಾ ಅವರು ಸಂಸದೀಯ ಸಮಿತಿ ಪುನರ್ ರಚಿಸಿದ್ದಾರೆ. ಇನ್ನೇನು ಲೋಕಸಭೆಯಲ್ಲಿನ ವಿಪಕ್ಷ ನಾಯಕನ ಸ್ಥಾನ ಕಳೆದುಕೊಂಡರು ಎಂದೇ ಹೇಳಲಾಗಿದ್ದ ಅಧೀರ್ ರಂಜನ್ ಚೌಧಶರಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಕಳೆದ ವರ್ಷ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ 23 ಭಿನ್ನಮತೀಯ ನಾಯಕರ ಪೈಕಿ ಹಲವರು ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ.
ಬಂಗಾಳ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜನ್ ಚೌದರಿ ಸೇರಿದಂತೆ ಶಶಿ ತರೂರ್, ಮನೀಶ್ ತಿವಾರಿ ಅವರು 7 ಮಂದಿಯ ಲೋಸಕಭಾ ಸಮಿತಿಯ ಭಾಗವಾಗಲಿದ್ದಾರೆ. ಕಳೆದ ವರ್ಷ ಪಕ್ಷದ ನಾಯಕತ್ವದ ವಿರುದ್ಧ ಆಕ್ಷೇಪಗಳು ಕೇಳಿ ಬಂದ ಬಳಿಕ ಚೌದರಿ ಅವರು ತನ್ನ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಅವರನ್ನು ಪಕ್ಷ ಅದೇ ಸ್ಥಾನದಲ್ಲಿ ಉಳಿಸಿಕೊಂಡಿದೆ.
ತರುಣ್ ಗೊಗೊಯಿ ಅವರ ಪುತ್ರ ಗೌರವ್ ಗೊಗೊಯ್ ಅವರು ಲೋಕಸಭೆಯ ಉಪನಾಯಕನಾಗಿ ಮುಂದುವರಿಯಲಿದ್ದಾರೆ. ಕೆ. ಸುರೇಶ್ ಅವರು ಲೋಕಸಭೆಯ ಮುಖ್ಯಸಚೇತಕ ಸ್ಥಾನದಲ್ಲಿ ಮುಂದುವರಿಯಲಿದ್ದು, ರವನೀತ್ ಸಿಂಗ್ ಬಿಟ್ಟು ಹಾಗೂ ಮಾಣಿಕ್ಯಂ ಟಾಗೋರ್ ಅವರು 7 ಮಂದಿಯ ತಂಡದಲ್ಲಿ ಸಚೇತಕರಾಗಿ ಸ್ಥಾನ ಪಡೆದಿದ್ದಾರೆ. ಇನ್ನು ರಾಜ್ಯಸಭೆಯ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಮುಂದುವರೆಯಲಿದ್ದಾರೆ.