
ನವದೆಹಲಿ(ಮೇ.23): ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದ ಬೆನ್ನಲ್ಲೇ ಇದರಿಂದ ಸರ್ಕಾರದ ಆದಾಯಕ್ಕಾದ ನಷ್ಟವನ್ನು ಸರಿದೂಗಿಸಲು ಸುಮಾರು 1 ಲಕ್ಷ ಕೋಟಿ ರು. ಹೆಚ್ಚುವರಿ ಸಾಲವನ್ನು ಪಡೆದುಕೊಳ್ಳಲು ಮುಂದಾಗಬಹುದು ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ಬಡವರಿಗೆ ಹಾಗೂ ರೈತರಿಗೆ ಆಹಾರ ಹಾಗೂ ರಸಗೊಬ್ಬರದ ಮೇಲೆ ನೀಡುತ್ತಿರುವ ಸಹಾಯಧನದ ವೆಚ್ಚವು ಕೇಂದ್ರದ 2 ಪ್ರಮುಖ ಆದಾಯದ ಮೂಲಗಳಾದ ಸರಕು ಹಾಗೂ ಸೇವೆಗಳ ತೆರಿಗೆ ಹಾಗೂ ವೈಯಕ್ತಿಕ ಆದಾಯ ತೆರಿಗೆಯಿಂದ ಬಂದ ಆದಾಯಕ್ಕೆ ಸಮನಾಗಿದೆ. ಹೀಗಾಗಿ ಅಬಕಾರಿ ಸುಂಕದ ಕಡಿತದಿಂದಾದ ನಷ್ಟವನ್ನು ಸರಿದೂಗಿಸಿಕೊಳ್ಳಲು ಹೆಚ್ಚುವರಿ ಸಾಲವನ್ನು ಪಡೆದುಕೊಳ್ಳಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಕೇಂದ್ರ ಹೆಚ್ಚುವರಿ ಸಾಲದ ಮೊತ್ತವನ್ನು ದೇಶಿಯ ಕರೆನ್ಸಿ ರೂಪದಲ್ಲೇ ಬ್ಯಾಂಕು ಹಾಗೂ ವಿಮಾ ಕಂಪನಿಗಳಿಂದ ಸರ್ಕಾರ ಪಡೆದುಕೊಳ್ಳಲು ಮುಂದಾಗಬಹುದು ಎನ್ನಲಾಗಿದೆ. ಇದು 2022-23ರ ಆರ್ಥಿಕ ವರ್ಷದಲ್ಲಿ ದೇಶದ ವಿತ್ತೀಯ ಕೊರತೆಯ ಪ್ರಮಾಣವನ್ನು ಶೇ.6.9ಕ್ಕೆ ಏರಿಕೆ ಮಾಡಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ರಾಜ್ಯದಲ್ಲೂ ಪೆಟ್ರೋಲ್, ಡೀಸೆಲ್ ತೆರಿಗೆ ಕಟ್?
ಭಾನುವಾರ ದಾವೋಸ್ ಪ್ರವಾಸಕ್ಕೆ ತೆರಳುವ ಮುನ್ನ ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲೂ ತೆರಿಗೆ ಇಳಿಕೆ ಕುರಿತು ಪರಿಶೀಲಿಸುವ ಭರವಸೆ ನೀಡಿದರು.
ಈ ಹಿಂದೆಯೂ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕ ಕಡಿತಗೊಳಿಸಿದಾಗ ರಾಜ್ಯ ಸರ್ಕಾರ ಕೂಡ ತೆರಿಗೆ ಕಡಿತಗೊಳಿಸಿತ್ತು. ಹಾಗಾಗಿ ಮುಖ್ಯಮಂತ್ರಿಗಳ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಆದರೆ, ಮುಖ್ಯಮಂತ್ರಿಗಳು ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆಯೊ ಅಥವಾ ಅದಕ್ಕೂ ಮೊದಲೇ ಅನುಷ್ಠಾನಕ್ಕೆ ಬರುತ್ತದೆಯೊ ಎಂಬುದನ್ನು ಕಾದು ನೋಡಬೇಕು.
ರಾಜ್ಯವೂ ಕಡಿಮೆ ಮಾಡಬೇಕು- ಬಿಎಸ್ವೈ:
ಇದೇ ವೇಳೆ ಕೇಂದ್ರ ಸರ್ಕಾರವು ಮಾಡಿರುವಂತೆ ರಾಜ್ಯ ಸರ್ಕಾರವೂ ಪೆಟ್ರೋಲ್- ಡೀಸೆಲ್ ಮೇಲಿನ ಸುಂಕ ಕಡಿಮೆ ಮಾಡುವ ಮೂಲಕ ಜನರ ಮೇಲಿನ ಹೊರೆ ಮತ್ತಷ್ಟುತಗ್ಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಂಕ ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಒತ್ತಾಯಿಸಿದರು.
ಈಗಾಗಲೇ ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ತೆರಿಗೆ ಕಡಿಮೆ ಮಾಡುವ ಮೂಲಕ ಬೆಲೆ ಕಡಿಮೆ ಮಾಡಿರುವುದು ಸ್ವಾಗತಾರ್ಹ. ಪೆಟ್ರೋಲ್ 9.5 ರು., ಡೀಸೆಲ್ 8 ರು. ಕಡಿಮೆ ಆಗಿದೆ. ಇದರಿಂದ ಸಾಮಾನ್ಯ ಜನರಿಗೆ ಅನುಕೂಲ ಆಗಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಪೆಟ್ರೋಲ್- ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡುವ ಮೂಲಕ ಮತ್ತಷ್ಟುಹೊರೆ ತಗ್ಗಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಮಹಾರಾಷ್ಟ್ರ, ಓಡಿಶಾ, ಕೇರಳದಲ್ಲಿ ತೆರಿಗೆ ಇಳಿಕೆ
ನವದೆಹಲಿ: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕೇಂದ್ರ ಇಳಿಕೆ ಮಾಡಿದ ಬೆನ್ನಲ್ಲೇ ಕೇರಳ, ಓಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳು ತೆರಿಗೆ ಇಳಿಕೆ ಮಾಡಿವೆ. ಇದರಿಂದಾಗಿ ಪೆಟ್ರೋಲ್ 2 ರು.ನಷ್ಟು, ಡೀಸೆಲ್ 1 ರು.ನಷ್ಟುಅಗ್ಗವಾಗಿದೆ. ವಿವರ ಪುಟ 7
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ