
ನವದೆಹಲಿ (ಜು.04) ಭಾರತದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧಿಕಾರವದಿ ಅಂತ್ಯಗೊಳ್ಳುತ್ತಿದೆ. ಇದೀಗ ಈ ಜವಾಬ್ದಾರಿಯನ್ನು ಮಹಿಳಾ ನಾಯಕಿಗೆ ನೀಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಈ ಪೈಕಿ ನಿರ್ಮಲಾ ಸೀತಾರಾಮನ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷೆಯಾಗಿ ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಇದರ ಜೊತೆಗೆ ಇಬ್ಬರು ಮಹಿಳಾ ನಾಯಕಿರ ಹೆಸರು ಮುಂಚೂಣಿಯಲ್ಲಿದೆ. ಡಿ ಪುರಂದರೇಶ್ವರಿ ಹಾಗೂ ವನತಿ ಶ್ರೀನಿವಾಸನ್ ಹೆಸರೂ ಕೂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ.
ಮಹಿಳಾ ನಾಯಕಿ ಆಯ್ಕೆಗೆ ಆರ್ಎಸ್ಎಸ್ ಒಲವು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳಾ ನಾಯಕಿಯನ್ನು ಆಯ್ಕೆ ಮಾಡಲು ಆರ್ಎಸ್ಎಸ್ ಒಲವು ತೋರಿದೆ ಎಂದು ಹೇಳಲಾಗುತ್ತಿದೆ. ಮಹಿಳಾ ನಾಯಕಿಗೆ ಪಟ್ಟ ನೀಡುವುದು ರಾಜಕೀಯವಾಗಿ ಮಾತ್ರವಲ್ಲ, ದೇಶಕ್ಕೆ ಮಹತ್ವದ ಸಂದೇಶ ನೀಡಲು ನೆರವಾಗಲಿದೆ ಎಂದು ಆರ್ಎಸ್ಎಸ್ ಹೇಳುತ್ತಿದೆ. ಇತ್ತ ಸಾಲು ಸಾಲು ಚುನಾವಣೆ ಎದುರಾಗುತ್ತಿರುವ ಕಾರಣ ರಾಜಕೀಯವಾಗಿ ಸಮರ್ಥ ನಾಯಕರನ್ನು ಆಯ್ಕೆದೆ ಬಿಜೆಪಿ ಮುಂದಾಗಿದೆ. ರಾಷ್ಟ್ರೀಯ ಅಧ್ಯಕ್ಷರ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಮುಂಚೂಣಿಲ್ಲಿದ್ದಾರೆ.
ಹಿರಿಯ ನಾಯಕರ ಜೊತೆ ನಿರ್ಮಲಾ ಸೀತಾರಾಮನ್ ಮಹತ್ವದ ಚರ್ಚೆ
ಹಾಲಿ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಜೊತೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಿರ್ಮಲಾ ಸೀತಾರಾಮನ್ ಮಹತ್ವದ ಚರ್ಚೆ ನಡೆಸಿದ್ದಾರೆ. ಬಿಜೆಪಿ ನಾಯಕಿಯಾಗಿ, ಕೇಂದ್ರ ಹಣಕಾಸು ಸಚಿವೆಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ನಿರ್ಮಲಾ ಸೀತಾರಾಮನ್ ಹೆಸರು ಮುಂಚೂಣಿಯಲ್ಲಿರುವ ಬೆನ್ನಲ್ಲೇ ಈ ಚರ್ಚೆ ಮಹತ್ವ ಪಡೆದುಕೊಂಡಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಲು ನೆರವು
ಬಿಜೆಪಿ ಪಕ್ಷಕ್ಕೆ ದಕ್ಷಿಣದಲ್ಲಿ ಹಿಂದಿ ಪಕ್ಷ, ದಕ್ಷಿಣದ ಕಡೆಗಣನೆ ಸೇರಿದಂತೆ ಹಲವು ಆರೋಪಗಳಿವೆ. ಇದರ ಜೊತೆಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ನಿಧಾನವಾಗಿ ಬಲಗೊಳ್ಳುತ್ತಿದೆ. ನಿರ್ಮಲಾ ಸೀತಾರಾಮನ್ ಅಧ್ಯಕ್ಷರಾಗಿ ಆಯ್ಕೆಯಾದರೆ ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಅಣ್ಮಾಮಲೈ ಅಲೆಯಿಂದ ತಮಿಳುನಾಡಿನಲ್ಲಿ ಬಿಜಿಪೆ ಹೊಸ ಅಧ್ಯಾಯ ಆರಂಭಿಸಿದೆ. ಇದರ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್ಗೆ ಜವಾಬ್ದಾರಿ ನೀಡಿದರೆ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲು ನೆರವಾಗಲಿದೆ ಅನ್ನೋ ಲೆಕ್ಕಾಚಾರವೂ ಇದರ ಹಿಂದೆ ಅಡಗಿದೆ.
ಬಿಜೆಪಿ ಆಂಧ್ರ ಪ್ರದೇಶದ ಮಾಜಿ ರಾಜ್ಯಾಧ್ಯಕ್ಷೆ ಡಿ ಪುರಂದೇಶ್ವರಿ ಹೆಸರು ಕೂಡ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ಇತ್ತೀಚಿಗಿನ ಆಪರೇಶನ್ ಸಿಂದೂರ ನಿಯೋಗದಲ್ಲಿ ಪುರೇಂದೇಶ್ವರಿ ಕೂಡ ತೆರಳಿದ್ದರು. ಆಂಧ್ರ ಪ್ರದೇಶ ಬಿಜಪಿ ಮುನ್ನಡೆಸಿರುವ ಪುರಂದೇಶ್ವರಿ, ಪಾರ್ಟಿಯ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇನ್ನು ವನತಿ ಶ್ರೀನಿವಾಸನ್ ತಮಿಳುನಾಡು ಮೂಲದವರು. ವಕೀಲೆಯಾಗಿ ವೃತ್ತಿ ಆರಂಭಿಸಿ ಬಳಿಕ ರಾಜಕೀಯ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷೆ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ವನತಿ ಶ್ರೀನಿವಾಸನ್ ನಿರ್ವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ