
ನವದೆಹಲಿ (ಜೂ. 28): ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವ ರಾಜೀವ್ ಗಾಂಧಿ ಪ್ರತಿಷ್ಠಾನದ ವಿರುದ್ಧ ಹಣಕಾಸು ಅವ್ಯವಹಾರದ ಬಗ್ಗೆ ಗಂಭೀರ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಇದೀಗ ಇನ್ನೊಂದು ತೀಕ್ಷ್ಣ ಆರೋಪ ಮಾಡಿದೆ. 11 ಸಾವಿರ ಕೋಟಿ ರು. ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾಗಿರುವ ದೇಶಭ್ರಷ್ಟಉದ್ಯಮಿ ಮೆಹುಲ್ ಚೋಕ್ಸಿಯಿಂದಲೂ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ದೇಣಿಗೆ ಬಂದಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಆರೋಪಿಸಿದ್ದಾರೆ.
14000 ಕೋಟಿ ಬ್ಯಾಂಕಿಂಗ್ ಹಗರಣ; ಇಡಿ ಕತ್ತರಿಯಲ್ಲಿ ಸೋನಿಯಾ ಆಪ್ತ
‘2014-15ನೇ ಸಾಲಿನಲ್ಲಿ ಮೆಹುಲ್ ಚೋಕ್ಸಿ ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ದೇಣಿಗೆ ನೀಡಿದ್ದಾರೆ. ಅದಕ್ಕೇ ಚೋಕ್ಸಿಯನ್ನು ಕಾಂಗ್ರೆಸ್ ರಕ್ಷಿಸುತ್ತಿದೆ. 2015ರಲ್ಲಿ ಕರ್ನಾಟಕದಲ್ಲಿ ಆತನ ವಿರುದ್ಧ ಕೇಸು ದಾಖಲಾಗಿದ್ದರೂ ಅಂದಿನ ಸರ್ಕಾರ ಆರೋಪಪಟ್ಟಿದಾಖಲಿಸಲಿಲ್ಲ. ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ನೀಡುವ ಹಣ ಒತ್ತೆ ಹಣವೇ?’ ಎಂದು ಮಾಳವೀಯ ಟ್ವೀಟ್ ಮಾಡಿದ್ದಾರೆ.
ಮೆಹುಲ್ ಚೋಕ್ಸಿ ನಿರ್ದೇಶಕರಾಗಿರುವ ನವಿರಾಜ್ ಎಸ್ಟೇಟ್ಸ್ ಪ್ರೈ.ಲಿ. ಕಂಪನಿಯಿಂದ ರಾಜೀವ್ ಪ್ರತಿಷ್ಠಾನಕ್ಕೆ ದೇಣಿಗೆ ನೀಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ದೇಶಕ್ಕೆ ಕಾಂಗ್ರೆಸ್ ವಿಶ್ವಾಸಘಾತ-ನಡ್ಡಾ:
ಇನ್ನು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಚೀನಾದಿಂದ ರಾಜೀವ್ ಪ್ರತಿಷ್ಠಾನಕ್ಕೆ ಹಣ ಯಾಕೆ ಬಂದಿದೆ? ಚೀನಾ ಪರವಾಗಿ ಭಾರತದ ವಿರುದ್ಧ ಕಾಂಗ್ರೆಸ್ ಪಕ್ಷ ವಿಶ್ವಾಸಘಾತ ಎಸಗಿದೆ. ಕೊರೋನಾ ಅಥವಾ ಚೀನಾ ಜೊತೆಗಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ವಿಷಯವನ್ನು ಸೋನಿಯಾ ಗಾಂಧಿ ಮುಚ್ಚಿಡುವ ಪ್ರಯಾಸ ಮಾಡಬಾರದು. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ದೇಶಕ್ಕೆ ಏನೇನು ವಿಶ್ವಾಸಘಾತ ಮಾಡಿದೆ ಎಂಬುದನ್ನು ತಿಳಿದುಕೊಳ್ಳಲು 130 ಕೋಟಿ ಜನ ಬಯಸುತ್ತಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಭಾರತದ ಕೃಷಿಕರು ಹಾಗೂ ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗೆ ವಿರುದ್ಧವಾಗಿರುವ ಆರ್ಸಿಇಪಿ ಒಪ್ಪಂದವನ್ನು ಯುಪಿಎ ಸರ್ಕಾರ ಚೀನಾದೊಂದಿಗೆ ಮಾಡಿಕೊಳ್ಳಲು ಮುಂದಾಗಿತ್ತು ಎಂದು ಈ ಹಿಂದೆ ನಡ್ಡಾ ಆರೋಪಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ