3ನೇ ಬಾರಿ ಸಿಎಂ ಆಗಿ ಕೇಜ್ರಿ ಶಪಥ: ಚಾಲಕರು, ಯೋಧರು, ಪೌರಕಾರ್ಮಿಕರಿಗೆ ಆಹ್ವಾನ!

By Kannadaprabha NewsFirst Published Feb 16, 2020, 9:46 AM IST
Highlights

ದಿಲ್ಲಿ ಮುಖ್ಯಮಂತ್ರಿಯಾಗಿ ಸತತ 3ನೇ ಅವಧಿಗೆ ಆಮ್‌ ಆದ್ಮಿ ಪಾರ್ಟಿ (ಆಪ್‌) ಸಂಚಾಲಕ ಅರವಿಂದ ಕೇಜ್ರಿವಾಲ್‌| ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿರುವ ಕೇಜ್ರಿ

ನವದೆಹಲಿ[ಫೆ.16]: ದಿಲ್ಲಿ ಮುಖ್ಯಮಂತ್ರಿಯಾಗಿ ಸತತ 3ನೇ ಅವಧಿಗೆ ಆಮ್‌ ಆದ್ಮಿ ಪಾರ್ಟಿ (ಆಪ್‌) ಸಂಚಾಲಕ ಅರವಿಂದ ಕೇಜ್ರಿವಾಲ್‌ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ ಈ ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೇರಿದಂತೆ 6 ಮಂದಿ ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ದೆಹಲಿಯ ಜನರಿಗೆಲ್ಲ ಸಮಾರಂಭಕ್ಕೆ ಮುಕ್ತ ಆಹ್ವಾನವಿದೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆಯಾದರೂ ಅವರು ವಾರಾಣಸಿಗೆ ತೆರಳುವ ಕಾರಣ, ಭಾಗವಹಿಸುವ ಸಾಧ್ಯತೆ ಇಲ್ಲ. ಆದರೆ 8 ಬಿಜೆಪಿ ಶಾಸಕರು ಸಮಾರಂಭಕ್ಕೆ ತೆರಳಲಿದ್ದಾರೆ.

ಈ ನಡುವೆ, ಕೇಜ್ರಿವಾಲ್‌ ಅವರು ಪ್ರಮಾಣವಚನ ಸ್ವೀಕರಿಸುವ ವೇಳೆ, ‘ದಿಲ್ಲಿ ನಿರ್ಮಾಣ’ಕ್ಕೆ ಕಾರಣರಾದ 50 ಜನರನ್ನು ವೇದಿಕೆಯ ಮೇಲೆ ಕೂರಿಸಲಾಗುತ್ತದೆ. ಇವರಲ್ಲಿ ಸರ್ಕಾರಿ ಶಿಕ್ಷಕರು, ಮೊಹಲ್ಲಾ ಕ್ಲಿನಿಕ್‌ ವೈದ್ಯರು, ಪೌರಕಾರ್ಮಿಕರು, ಜವಾನರು, ಬೈಕ್‌ ಆ್ಯಂಬುಲೆನ್ಸ್‌ ಡ್ರೈವರ್‌ಗಳು, ಪೊಲೀಸರು, ಯೋಧರು. ಬಸ್‌ ಕಂಡಕ್ಟರ್‌ಗಳು, ಆಟೋ ಚಾಲಕರು, ಮೆಟ್ರೋ ಚಾಲಕರು, ವಾಸ್ತುಶಿಲ್ಪಿಗಳು, ಡೆಲಿವರಿ ಬಾಯ್‌ಗಳು, ಎಂಜಿನಿಯರ್‌ಗಳೂ ಇರಲಿದ್ದಾರೆ.

ಶಿಕ್ಷಕರ ಕಡ್ಡಾಯ ಹಾಜರಾತಿಗೆ ವಿರೋಧ:

ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದಿಲ್ಲಿಯ ಸರ್ಕಾರಿ ಶಾಲಾ ಶಿಕ್ಷಕರು ಕಡ್ಡಾಯವಾಗಿ ಬರಬೇಕು ಎಂದು ಹೊರಡಿಸಲಾದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ. ಸುತ್ತೋಲೆಯನ್ನು ಬಿಜೆಪಿ ಮುಖಂಡ ವಿಜೇಂದರ್‌ ಗುಪ್ತಾ ವಿರೋಧಿಸಿದ್ದಾರೆ.

‘ಇದು ಸರ್ವಾಧಿಕಾರ ಮನೋಭಾವದ ತುಘಲಕ್‌ ರೀತಿಯ ಸುತ್ತೋಲೆ. ಇದನ್ನು ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

click me!