
ನವದೆಹಲಿ[ಫೆ.16]: ದಿಲ್ಲಿ ಮುಖ್ಯಮಂತ್ರಿಯಾಗಿ ಸತತ 3ನೇ ಅವಧಿಗೆ ಆಮ್ ಆದ್ಮಿ ಪಾರ್ಟಿ (ಆಪ್) ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರ ಜತೆಗೆ ಈ ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 6 ಮಂದಿ ಕೂಡ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ದೆಹಲಿಯ ಜನರಿಗೆಲ್ಲ ಸಮಾರಂಭಕ್ಕೆ ಮುಕ್ತ ಆಹ್ವಾನವಿದೆ. ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆಯಾದರೂ ಅವರು ವಾರಾಣಸಿಗೆ ತೆರಳುವ ಕಾರಣ, ಭಾಗವಹಿಸುವ ಸಾಧ್ಯತೆ ಇಲ್ಲ. ಆದರೆ 8 ಬಿಜೆಪಿ ಶಾಸಕರು ಸಮಾರಂಭಕ್ಕೆ ತೆರಳಲಿದ್ದಾರೆ.
ಈ ನಡುವೆ, ಕೇಜ್ರಿವಾಲ್ ಅವರು ಪ್ರಮಾಣವಚನ ಸ್ವೀಕರಿಸುವ ವೇಳೆ, ‘ದಿಲ್ಲಿ ನಿರ್ಮಾಣ’ಕ್ಕೆ ಕಾರಣರಾದ 50 ಜನರನ್ನು ವೇದಿಕೆಯ ಮೇಲೆ ಕೂರಿಸಲಾಗುತ್ತದೆ. ಇವರಲ್ಲಿ ಸರ್ಕಾರಿ ಶಿಕ್ಷಕರು, ಮೊಹಲ್ಲಾ ಕ್ಲಿನಿಕ್ ವೈದ್ಯರು, ಪೌರಕಾರ್ಮಿಕರು, ಜವಾನರು, ಬೈಕ್ ಆ್ಯಂಬುಲೆನ್ಸ್ ಡ್ರೈವರ್ಗಳು, ಪೊಲೀಸರು, ಯೋಧರು. ಬಸ್ ಕಂಡಕ್ಟರ್ಗಳು, ಆಟೋ ಚಾಲಕರು, ಮೆಟ್ರೋ ಚಾಲಕರು, ವಾಸ್ತುಶಿಲ್ಪಿಗಳು, ಡೆಲಿವರಿ ಬಾಯ್ಗಳು, ಎಂಜಿನಿಯರ್ಗಳೂ ಇರಲಿದ್ದಾರೆ.
ಶಿಕ್ಷಕರ ಕಡ್ಡಾಯ ಹಾಜರಾತಿಗೆ ವಿರೋಧ:
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ದಿಲ್ಲಿಯ ಸರ್ಕಾರಿ ಶಾಲಾ ಶಿಕ್ಷಕರು ಕಡ್ಡಾಯವಾಗಿ ಬರಬೇಕು ಎಂದು ಹೊರಡಿಸಲಾದ ಸುತ್ತೋಲೆ ವಿವಾದಕ್ಕೆ ಕಾರಣವಾಗಿದೆ. ಸುತ್ತೋಲೆಯನ್ನು ಬಿಜೆಪಿ ಮುಖಂಡ ವಿಜೇಂದರ್ ಗುಪ್ತಾ ವಿರೋಧಿಸಿದ್ದಾರೆ.
‘ಇದು ಸರ್ವಾಧಿಕಾರ ಮನೋಭಾವದ ತುಘಲಕ್ ರೀತಿಯ ಸುತ್ತೋಲೆ. ಇದನ್ನು ಹಿಂಪಡೆಯಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ