
ನವದೆಹಲಿ(ಫೆ.08): ಸರ್ಕಾರದ ಮೌಲ್ಯಮಾಪನದ ಪ್ರಕಾರ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿಯ(Asaduddin Owaisi) ಮೇಲೆ ಮತ್ತೆ ದಾಳಿ(Attack) ನಡೆಯುವ ಸಾಧ್ಯತೆಗಳಿರುವುದರಿಂದ ಝಡ್ ಭದ್ರತೆಗೆ(Security) ಒಪ್ಪಿಕೊಳ್ಳಿ ಎಂದು ಗೃಹ ಸಚಿವ ಅಮಿತ್ ಶಾ(Amit Shah) ಸೋಮವಾರ ರಾಜ್ಯಸಭೆಯಲ್ಲಿ ಮನವಿ ಮಾಡಿದ್ದಾರೆ. ಗುಂಡು ಹಾರಿಸಿದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಓವೈಸಿಯ ಮೇಲೆ ಮತ್ತೆ ದಾಳಿಯಾಗುವ ಸಾಧ್ಯತೆಯಿರುವುದರಿಂದ ಝಡ್ ಭದ್ರತೆಗೆ ಒಪ್ಪಿಕೊಳ್ಳಬೇಕೆಂದು ಶಾ ವಿನಂತಿಸಿಕೊಂಡರು. ಫೆ.3 ರಂದು ಉತ್ತರಪ್ರದೇಶದಲ್ಲಿ ಚುನಾವಣಾ(Uttar Pradesh Election) ಪ್ರಚಾರಕ್ಕೆ ತೆರಳಿದ ವೇಳೆ ಒವೈಸಿ ಕಾರಿನ ಮೇಲೆ ಗುಂಡು ಹಾರಿಸಲಾಗಿತ್ತು. ಬಳಿಕ ಸರ್ಕಾರ ಅವರಿಗೆ ‘ಝಡ್’ ಭದ್ರತೆ ಪ್ರಕಟಿಸಿದ್ದರೂ ಅದನ್ನವರು ನಿರಾಕರಿಸಿದ್ದರು.
ಝಡ್ ಪ್ಲಸ್ ಭದ್ರತೆಗೆ ಒವೈಸಿ ನಕಾರ
ಕಾರಿನ ಮೇಲೆ(Car attack) ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಕೇಂದ್ರ ಸರ್ಕಾರ ಝಡ್ ಕ್ಯಾಟಗರಿ ಭದ್ರತೆ ಒದಗಿಸಿದ್ದು, ಸಿಆರ್ಪಿಎಫ್(CRPF) ಕಮಾಂಡೋಗಳು 24 ಗಂಟೆಯೂ ರಕ್ಷಣೆ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಕೇಂದ್ರ ಸರ್ಕಾರ ತಮಗೆ ನೀಡಿದ ಝಡ್ ಕ್ಯಾಟಗರಿ ಭದ್ರತೆಯನ್ನು ಓವೈಸಿ ಅವರು ತಿರಸ್ಕರಿಸಿದ್ದಾರೆ.
Attack On Owaisi : ಓವೈಸಿ ದೀರ್ಘ ಆಯಸ್ಸಿಗಾಗಿ 101 ಮೇಕೆಗಳ ಬಲಿಕೊಟ್ಟ ಉದ್ಯಮಿ!
ಸರ್ಕಾರ ಭದ್ರತೆ ಒದಗಿಸುತ್ತಿದೆ ಎಂಬ ಮಾಹಿತಿ ಬೆನ್ನಲ್ಲೇ ಶುಕ್ರವಾರ ಲೋಕಸಭೆ ಕಲಾಪದಲ್ಲಿ ಮಾತನಾಡಿದ ಅವರು, ‘ನನಗೆ ಝಡ್ ಭದ್ರತೆ ಬೇಕಾಗಿಲ್ಲ. ಆದರೆ ನನ್ನ ಮೇಲೆ ದಾಳಿಗೆ ಯತ್ನಿಸಿದವರು ಬುಲೆಟ್ ಮೇಲೆ ನಂಬಿಕೆ ಇರಿಸಿದ್ದಾರೆ. ಅವರಿಗೆ ಬ್ಯಾಲೆಟ್ ಮೂಲಕ ಉತ್ತರಪ್ರದೇಶ ಜನರು ಉತ್ತರಿಸಲಿದ್ದಾರೆ. ತೀವ್ರವಾದಿ ಮತ್ತು ದ್ವೇಷ ಹರಡುತ್ತಿರುವವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಕೇಸ್ ದಾಖಲಿಸಬೇಕು’ ಎಂದು ಒತ್ತಾಯಿಸಿದರು.
ಗುರುವಾರ ಉತ್ತರ ಪ್ರದೇಶದಿಂದ ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ಹಾಪುರ ಟೋಲ್ ಪ್ಲಾಜಾ ಬಳಿ ಓವೈಸಿ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಘಟನೆ ಬಗ್ಗೆ ವರದಿ ಪಡೆದು ಪರಿಶೀಲಿಸಿದ ಕೇಂದ್ರ ಸರ್ಕಾರ ಝಡ್ ಕೆಟಗರಿ ಭದ್ರತೆ ಒದಗಿಸಲು ನಿರ್ಧರಿಸಿದೆ. 16-20 ಶಸ್ತ್ರ ಸಜ್ಜಿತ ಕಮಾಂಡೋಗಳು ರಾತ್ರಿಹಗಲು ಭದ್ರತೆ ನೀಡಲಿದ್ದಾರೆ. ಅಲ್ಲದೆ ರಸ್ತೆ ಮಾರ್ಗದಲ್ಲಿ ಸಂಚರಿಸುವಾಗ ಬೆಂಗಾವಲು ಮತ್ತು ಪೈಲಟ್ ವಾಹನವನ್ನು ನೀಡಲಾಗುತ್ತದೆ ಎಂದು ಮೂಲಗಳು ಹೇಳಿದ್ದವು.
Attack On Owaisi: ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ!
ಕೊಲ್ಲಲೆಂದೇ ದಾಳಿ, ಕೆಳಗೆ ಬಗ್ಗಿದ್ದಕ್ಕೆ ಓವೈಸಿ ಬಚಾವ್: ಆರೋಪಿ ಹೇಳಿಕೆ
ಕೊಲ್ಲುವ ಉದ್ದೇಶದಿಂದಲೇ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿಯ ಮೇಲೆ ಗುಂಡು ಹಾರಿಸಲಾಗಿತ್ತು. ಆದರೆ ಗುಂಡು ಹಾರಿಸಿದಾಗ ಓವೈಸಿ ಕೆಳಗೆ ಬಗ್ಗಿದ್ದ ಕಾರಣ ಅವರು ಪ್ರಾಣಾಪಾಯದಿಂದ ಪಾರಾದರು ಎಂದು ಗುಂಡು ಹಾರಿಸಿದ ಆರೋಪಿ ಪೊಲೀಸ್ ವಿಚಾರಣೆಯ ವೇಳೆಯಲ್ಲಿ ಹೇಳಿದ್ದಾನೆ. ಆರೋಪಿ ಸಚಿನ್, ‘ಒಂದು ಧರ್ಮವನ್ನು ವಿರೋಧಿಸಿ ಓವೈಸಿ ಭಾಷಣ ಮಾಡಿದ್ದು ನೋವು ತಂದಿತ್ತು. ಹೀಗಾಗಿ ಗೆಳೆಯ ಶುಭಂನೊಂದಿಗೆ ಸೇರಿ ಓವೈಸಿಯನ್ನು ಕೊಲ್ಲಲು ಸಂಚು ಹೂಡಿದೆ ಎಂದು ಒಪ್ಪಿಕೊಂಡಿದ್ದಾನೆ.
‘ಸಾಮಾಜಿಕ ಜಾಲತಾಣಗಳ ಮುಖಾಂತರ ಹಲವಾರು ದಿನಗಳಿಂದ ಓವೈಸಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದೆ. ಅವರು ಪಾಲ್ಗೊಳ್ಳುವ ಹಲವಾರು ಸಭೆಯಲ್ಲೂ ದಾಳಿ ನಡೆಸುವ ಉದ್ದೇಶದಿಂದ ಹೋಗಿದ್ದೆ. ಆದರೆ ಜನರು ಭಾರೀ ಪ್ರಮಾಣದಲ್ಲಿ ಸೇರಿರುತ್ತಿದ್ದ ಕಾರಣ ಸರಿಯಾದ ಅವಕಾಶ ಸಿಕ್ಕಿರಲಿಲ್ಲ. ಅವರು ಮೀರತ್ನಿಂದ ದೆಹಲಿ ಹೋಗುತ್ತಿದ್ದಾರೆ ಎಂಬುದು ತಿಳಿದಿದ್ದೇ ಟೋಲ್ ಗೇಟ್ ಬಳಿ ದಾಳಿ ನಡೆಸಲು ಸಜ್ಜಾದೆ. ಒವೈಸಿಯನ್ನು ಕಂಡು ಗುಂಡು ಹಾರಿಸಿದೆ. ಅವರು ಕೆಳಗೆ ಬಗ್ಗಿದ್ದಕ್ಕೆ ಮತ್ತೊಮ್ಮೆ ಕಾರಿನ ಕೆಳಭಾಗದಲ್ಲಿ ಗುಂಡು ಹಾರಿಸಿದೆ. ಅವರು ಗುಂಡಿಗೆ ಬಲಿಯಾಗಿರಬಹುದೆಂದು ತಿಳಿದು ಪರಾರಿಯಾದೆ’ ಎಂದಿದ್ದಾನೆ. ಪೊಲೀಸರು ದಾಳಿ ನಡೆಸಿದ ಸಚಿನ್, ಶುಭಂ ಇಬ್ಬರನ್ನೂ ಬಂಧಿಸಿದ್ದು, ಅವರಿಂದ ದಾಳಿಗೆ ಬಳಸಲಾದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ