7 ವರ್ಷವಿದ್ದಾಗ ಕಿಡ್ನಾಪ್, 17 ವರ್ಷದ ಬಳಿಕ ವಕೀಲನಾಗಿ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿ!

By Chethan KumarFirst Published Sep 24, 2024, 7:25 PM IST
Highlights

7 ವರ್ಷದ ಬಾಲಕನಿದ್ದಾಗ ಕಿಡ್ನಾಪ್ ಆಗಿದ್ದ. ರಕ್ಷಿಸಲು ಬಂದ ತಂದೆಗೆ ಗುಂಡಿಕ್ಕಿದ್ದ ಕಿಡ್ನಾಪರ್ಸ್ 55 ಲಕ್ಷ ರೂಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಪೊಲೀಸರ ನೆರವಿನಿಂದ ಬಾಲಕನ ರಕ್ಷಿಸಲಾಗಿತ್ತು. ಇದೀಗ ಅದೇ ಬಾಲಕ 17 ವರ್ಷದ ಬಳಿಕ ವಕೀಲನಾಗಿ ತನ್ನ ಅಪಹರಣ ಕೇಸ್ ವಾದಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡುವಲ್ಲಿ ಯಶಸ್ವಿಯಾಗಿದ್ದಾನೆ.

ಆಗ್ರ(ಸೆ.24) ಅದೊಂದು ಘಟನೆ ಬಾಲಕನನ್ನು ವಕೀಲನಾಗಿ ಮಾಡಿತ್ತು. ಇಷ್ಟೇ ಅಲ್ಲ ತನ್ನದೇ ಅಪಹರಣ ಕಿಡ್ನಾಪ್ ಪ್ರಕರಣವನ್ನು ಕೋರ್ಟ್‌ನಲ್ಲಿ ಸಮರ್ಥ ದಾಖಲೆ, ಸಾಕ್ಷಿಗಳೊಂದಿಗೆ ವಾದಿಸಿ, ಬರೋಬ್ಬರಿ 17 ವರ್ಷದ ಬಳಿಕ ಆರೋಪಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ರೋಚಕ ಘಟನೆ ಆಗ್ರಾದಲ್ಲಿ ನಡೆದಿದೆ. ಹರ್ಷ್ ಗರ್ಗ್ 7 ವರ್ಷದ ಬಾಲಕನಿದ್ದಾಗ ಕಿಡ್ನಾಪ್ ಆಗಿದ್ದ. ಅಪಹರಣಕಾರರಿಂದ ಮಗನ ರಕ್ಷಿಸಲು ಮುಂದಾದ ತಂದೆಗೆ ಕಿಡ್ನಾಪರ್ಸ್ ಗುಂಡಿಕ್ಕಿದ್ದರು. ಇದೇ ಬಾಲಕ ಇದೀಗ ವಕೀಲನಾಗಿ ತನ್ನ ಕಿಡ್ನಾಪ್ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾನೆ.

2007ರಲ್ಲಿ ನಡೆದ  ಕಿಡ್ನಾಪ್ ಘಟನೆ. ಫೆಬ್ರವರಿ 10, 2007ರಲ್ಲಿ ತಂದೆ ರವಿ ಕುಮಾರ್ ಗರ್ಗ್ ಜೊತೆ ಸಾಗುತ್ತಿದ್ದ 7 ವರ್ಷದ ಬಾಲಕ ಹರ್ಷ್ ಗರ್ಗ್ ಅಪಹರಣಕ್ಕೆ ಹೊಂಚುಹಾಕಿದ್ದ ಕಿರಾತರು ಏಕಾಏಕಿ ದಾಳಿ ಮಾಡಿದ್ದರು. ಉದ್ಯಮಿ ತಂದೆ ರವಿ ಕುಮಾರ್ ಮಗನ ಕಾಪಾಡಲು ಯತ್ನಿಸಿದ್ದಾರೆ. ಆದರೆ ಕಿಡ್ನಾಪರ್ಸ್ ರವಿ ಕುಮಾರ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಈ ಘಟನೆ ಪೊಲೀಸರ ತಲೆನೋವಿಗೆ ಕಾರಣವಾಗಿತ್ತು. ಬಾಲಕನ ಒತ್ತೆಯಾಳಾಗಿಟ್ಟುಕೊಂಡು ಅಪಹರಣಕಾರರು, ಬಿಡುಗಡೆಗೆ 55 ಲಕ್ಷ ರೂಪಾಯಿ ಹಣ ಕೇಳಿದ್ದರು.

Latest Videos

ಬದುಕಿನ ಹಾದಿ ತೋರಿಸಿದ ಶಿಕ್ಷಕನ ಕೈಯಲ್ಲಿ ಮತ್ತೆ ಏಟು ತಿಂದ ಡಿಸಿ, ಲಾಯರ್, ಪೊಲೀಸ್: ವೀಡಿಯೋ ವೈರಲ್

ಪೊಲೀಸರು ಮಧ್ಯಪ್ರವೇಶಿದರೆ ಬಾಲಕನ ಹತ್ಯೆ ಮಾಡುವುದಾಗಿ ಬೆದರಿಸಿದ್ದರು. ಇತ್ತ ಪೊಲೀಸರು ಚಾಣಾಕ್ಷತನದಿಂದ 27 ದಿನಗಳ ಬಳಿಕ ಮಧ್ಯಪ್ರದೇಶದ ಶಿವಪುರಿಯಿಂದ ರಕ್ಷಣೆ ಮಾಡಲಾಗಿತ್ತು. ಅಪಹರಣ, ಕಣ್ಣ ಮುಂದೆ ತಂದೆ ಮೇಲೆ ನಡೆದ ದಾಳಿಯಿಂದ ಹರ್ಷ್ ಗರ್ಗ್ ಜರ್ಝರಿತನಾಗಿದ್ದ.ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಗುದ್ದನ್ ಕಚ್ಚಿ, ರಾಜೇಶ್ ಶರ್ಮಾ, ರಾಜ್‌ಕುಮಾರ್, ಫತೇಹ್ ಸಿಂಗ್ ಅಲಿಯಾಸ್ ಚಿಗಾ, ಅಮರ್ ಸಿಂಗ್, ರಾಂಪ್ರಕಾಶ್, ಭೀಮಾ ಅಲಿಯಾಸ ಭಿಕಾರಿ ಸೇರಿ 12 ಮಂದಿಯನ್ನು ಬಂಧಿಸಿದ್ದರು. ಆದರೆ ತಾನು ಶಾಲಾ ಕಾಲೇಜಿಗೆ ತೆರಳಿದರೂ ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗಲೇ ಇಲ್ಲ. ಇದು ಹರ್ಷ್ ಗರ್ಗ್ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ತಾನೇ ವಕೀಲನಾಗಿ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ನಿರ್ಧರಿಸಿದ್ದ.

17 ವರ್ಷದ ಬಳಿಕ ಇದೀಗ ಹರ್ಷ್ ಗರ್ಗ್‌ಗೆ 24 ವಯಸ್ಸು. 2022ರಲ್ಲಿ ಕಾನೂನು ಪದವಿ ಪಡೆದ ಹರ್ಷ ಗರ್ಗ್ ವಕೀಲ ವೃತ್ತಿ ಅಭ್ಯಾಸ ಆರಂಭಿಸಿದ್ದಾನೆ. ಇದೀಗ ಯುವ ವಕೀಲನಾಗಿರುವ ಹರ್ಷ್ ಗರ್ಗ್ ತನ್ನದೇ ಅಪಹರಣ ಪ್ರಕರಣವನ್ನು ಸಾಕ್ಷಿ, ದಾಖಲೆ ಸಮೇತ ಕೋರ್ಟ್‌ನಲ್ಲಿ ವಾದಿಸಿದ್ದಾನೆ. ಸುದೀರ್ಘ ವಿಚಾರಣೆ ಬಳಿಕ ಕೋರ್ಟ್ ಇದೀಗ 8 ಆರೋಪಿಗಳ ಮೇಲಿನ ಆರೋಪ ಸಾಬೀತಾಗಿತ್ತು. ಅಪರಾಧಿಗಳಿಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.ಇನ್ನುಳಿದ ನಾಲ್ವರು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರ ಕೊರತೆಯಿಂದ ಆರೋಪದಿಂದ ಖುಲಾಸೆಗೊಳಿಸಲಾಗಿದೆ.

8 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇತ್ತ ತಲಾ ಒಂದೊಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಕೋರ್ಟ್ ಶಿಕ್ಷೆ ಪ್ರಕಟ ಕುರಿತು ಹರ್ಷ ಗರ್ಗ್ ಸಂತಸ ವ್ಯಕ್ತಪಡಿಸಿದ್ದಾನೆ. ನ್ಯಾಯಾಂಗ ವ್ಯವಸ್ಥೆ ಮೇಲಿಟ್ಟಿದ್ದ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಕೊನೆಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಈ ಪ್ರಕರಣದಲ್ಲಿ ನಾನೇ ಸಂತ್ರಸ್ತ. ನನ್ನ ಪೋಷಕರು, ಕುಟುಂಬಸ್ಥರು ಸಂತ್ರಸ್ತರು. ಇಡೀ ಘಟನೆಯ ಇಂಚಿಂಚು ಮಾಹಿತಿ ನನಗೆ ಗೊತ್ತಿದೆ.ಇದಕ್ಕೆ ಪೂರಕ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇನೆ. ಪ್ರತಿ ವಿಚಾರಣೆಗೆ ಖುದ್ದು ಹಾಜರಾಗಿದ್ದೇನೆ ಎಂದು ಹರ್ಷ್ ಗರ್ಗ್ ಹೇಳಿದ್ದಾನೆ.

ಪಿಒಕೆ ನಮ್ಮದಲ್ಲ: ಹೈಕೋರ್ಟ್‌ಗೆಪಾಕ್‌ ವಕೀಲರ ಅಚ್ಚರಿ ಮಾಹಿತಿ

click me!