ಕನ್ನಡತಿ ಜ| ನಾಗರತ್ನ ಸೇರಿ 9 ಮಂದಿ ಸುಪ್ರೀಂ ಕೋರ್ಟ್ ಜಡ್ಜ್‌ ಆಗಿ ಪ್ರಮಾಣವಚನ!

By Suvarna NewsFirst Published Aug 31, 2021, 1:46 PM IST
Highlights

* ಸುಪ್ರಿಂಕೋರ್ಟ್‌ ಇತಿಹಾಸದಲ್ಲೇ ಮೊದಲ ಬಾರಿ 9 ಜನ ನ್ಯಾಯಾಧೀಶರ ಪ್ರಮಾಣವಚನ

* ನಾಗರತ್ನ ಬಿ. ವಿ ಸೇರಿದಂತೆ ದೇಶದ 9 ಮಂದಿ ಮಂದಿ ಸುಪ್ರೀಂ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ

* ದೆಹಲಿಯ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮ

ನವದೆಹಲಿ(ಆ.31): ಕೆಲ ದಿನಗಳ ಹಿಂದಷ್ಟೇ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದ ಕನ್ನಡತಿ ಜಸ್ಟೀಸ್ ನಾಗರತ್ನ ಬಿ. ವಿ ಸೇರಿದಂತೆ ದೇಶದ 9 ನ್ಯಾಯಾಮೂರ್ತಿಗಳು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಇಂದು, ಮಂಗಳವಾರ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಪ್ರಮಾಣವಚನ ಸ್ವೀಕರಿಸಿದ ನ್ಯಾಯಮೂರ್ತಿಗಳಲ್ಲಿ ಮೂವರು ಮಹಿಳೆಯರು ಎಂಬುವುದು ಉಲ್ಲೇಖನೀಯ.

ಸುಪ್ರಿಂಕೋರ್ಟ್‌ ಇತಿಹಾಸದಲ್ಲೇ ಮೊದಲ ಬಾರಿ 9 ಜನ ನ್ಯಾಯಾಧೀಶರು ಒಂದೇ ದಿನ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಕರ್ನಾಟಕದ ಜಸ್ಟೀಸ್ ನಾಗರತ್ನ ಬಿ. ವಿ ಜೊತೆ ಜ| ಎ.ಎಸ್. ಓಕಾ, ಜ| ವಿಕ್ರಮ್ ನಾಥ್, ಜ| ಜೆ.ಕೆ. ಮಹೇಶ್ವರಿ, ಜ| ಹಿಮಾ ಕೊಹ್ಲಿ, ಜ|  ಸಿ.ಟಿ. ರವೀಂದ್ರಕುಮಾರ್, ಜ| ಎಂ.ಎಂ. ಸುಂದರೇಶ್, ಜ| ಬೇಲಾ ತ್ರಿವೇದಿ ಮತ್ತು ಜ| ಪಿ.ಎಸ್. ನರಸಿಂಹ ಪ್ರಮಾಣವಚನ ಸ್ವೀಕರಿಸಿದ್ದಾರೆ.

Delhi: Nine judges -- Justices AS Oka, Vikram Nath, JK Maheshwari, Hima Kohli, BV Nagarathna, CT Ravikumar, MM Sundresh, Bela M Trivedi & PS Narasimha -- take oath as Supreme Court judges

(Photo - Supreme Court) pic.twitter.com/fWeB4HIJF9

— ANI (@ANI)

ದೆಹಲಿಯ ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಿಜೆಐ ಎನ್.ವಿ. ರಮಣ ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು. ಈ ಪ್ರಮಾಣವಚನದ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.

ಕನ್ನಡತಿ ಜ| ನಾಗರತ್ನ

ಹೈಕೋರ್ಟ್‌ ಜಡ್ಜ್‌ಗಳ ನಿವೃತ್ತಿ ವಯಸ್ಸು 62 ವರ್ಷವಾದರೆ ಸುಪ್ರೀಂಕೋರ್ಟ್‌ ಜಡ್ಜ್‌ಗಳ ನಿವೃತ್ತಿ ವಯಸ್ಸು 65. ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ಇ.ಎಸ್‌.ವೆಂಕಟರಾಮಯ್ಯ ಅವರ ಪುತ್ರಿಯಾಗಿರುವ ನ್ಯಾ| ನಾಗರತ್ನ 1962ರಲ್ಲಿ ಜನಿಸಿದ್ದಾರೆ. 1987ರಲ್ಲಿ ವಕೀಲೆಯಾಗಿ ನ್ಯಾಯಾಂಗ ವೃತ್ತಿ ಆರಂಭಿಸಿದ ಅವರು ಸಂವಿಧಾನ, ವಾಣಿಜ್ಯ, ವಿಮೆ ಮತ್ತು ಸೇವಾ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಪರಿಣತಿ ಪಡೆದಿದ್ದಾರೆ. 2008ರಲ್ಲಿ ಅವರು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ, 2020ರಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 

ನ್ಯಾ.ನಾಗರತ್ನಗೆ ಸಿಜೆಐ ಹುದ್ದೆ?:

ಕೇಂದ್ರ ಸರ್ಕಾರವು ನ್ಯಾ.ನಾಗರತ್ನ ಪದೋನ್ನತಿಗೆ ಒಪ್ಪಿದರೆ ಅವರು 2027ರಲ್ಲಿ ಭಾರತದ ಮುಖ್ಯ ನ್ಯಾಯಾಧೀಶೆ ಆಗುವ ಸಾಧ್ಯತೆ ಇದೆ. ನ್ಯಾ.ಸೂರ್ಯಕಾಂತ್‌ ಅವರ ಉತ್ತರಾಧಿಕಾರಿಯಾಗಿ 2027ರ ಅಕ್ಟೋಬರ್‌ನಲ್ಲಿ ಅವರು ಅಧಿಕಾರ ಸ್ವೀಕರಿಸಬಹುದು. ಆಗ 2027ರ ಅಕ್ಟೋಬರ್‌ 29ರವರೆಗೆ ನ್ಯಾ.ನಾಗರತ್ನ ಈ ಹುದ್ದೆಯಲ್ಲಿ ಇರಲಿದ್ದಾರೆ.

ನೇಮಕ ಸಾಧ್ಯತೆ ಹೇಗೆ?

ಹಾಲಿ ಸಿಜೆಐ ಬಳಿಕ ಹಿರಿತನದ ಆಧಾರದಲ್ಲಿ ನ್ಯಾ.ಯು.ಯು.ಲಲಿತ್‌, ನ್ಯಾ.ಚಂದ್ರಚೂಡ್‌, ನ್ಯಾ.ಸಂಜೀವ್‌ ಖನ್ನಾ, ನ್ಯಾ.ಸೂರ್ಯಕಾಂತ್‌ ಅವರು ಮುಂದಿನ ಸಿಜೆಐ ಆಗುವ ಅವಕಾಶ ಹೊಂದಿದ್ದಾರೆ. ಈ ಪೈಕಿ ಕಡೆಯವರಾದ ನ್ಯಾ.ಸೂರ್ಯಕಾಂತ್‌ ಅವಧಿ 2027ರ ಫೆಬ್ರವರಿಗೆ ಮುಗಿಯಲಿದೆ. ಆ ಹಂತದಲ್ಲಿ ಹಿರಿತನ ಪಡೆಯುವವರ ಪೈಕಿ ನ್ಯಾ.ನಾಗರತ್ನ ಮುಂಚೂಣಿಗೆ ಬಂದು ಸಿಜೆಐ ಆಗುವ ಸಾಧ್ಯತೆಯಿದೆ.

click me!