ಈಶ್ವರ ದೇವಾಲಯ ಆವರಣದಲ್ಲಿ ನಿಧಿ ಪತ್ತೆ: ಸರ್ಕಾರದ ಪಾಲಾದ ಚಿನ್ನದ ನಾಣ್ಯ, ಸರ, ಮಾಲೆಗಳು

First Published Nov 13, 2023, 8:22 PM IST

ಕೊಡಗು (ನ.13): ಕೊಡಗು ಜಿಲ್ಲೆಯಲ್ಲಿ ಈಶ್ವರ ದೇವಾಲಯದ ಕಾಮಗಾರಿ ವೇಳೆ ಭೂಮಿಯಲ್ಲಿ ಚಿನ್ನವನ್ನು ಹೋಲುವ ಪ್ರಾಚೀನ ಕಾಲದ ಆಭರಣಗಳು ಪತ್ತೆಯಾಗಿವೆ. ಇದರಲ್ಲಿ ಪತ್ತೆಯಾದ ನಾಣ್ಯಗಳು, ಕೈ ಕಡಗ, ಸರಗಳು, ಮಾಲೆಗಳು, ಆಭರಣಗಳನ್ನು ಕಂದಾಯ ಇಲಾಖೆ ಸುಪರ್ದಿಗೆ ಒಪ್ಪಿಸಲಾಗಿದೆ.

ವಿರಾಜಪೇಟೆ ತಾಲ್ಲೂಕಿನ ಅಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆನಂದಪುರದಲ್ಲಿ ಈಶ್ವರ ದೇವಾಲಯದ ಕಾಮಗಾರಿ ಮಾಡುತ್ತಿದ್ದಾಗ ಚಿನ್ನವನ್ನು ಹೋಲುವ 1.1 ಕೆ.ಜಿ. ಯಷ್ಟು ಲೋಹದ ವಸ್ತುಗಳು ಪತ್ತೆಯಾಗಿದೆ.

ಆನಂದಪುರದಲ್ಲಿರುವ ಟಾಟಾ ಸಂಸ್ಥೆಯ ತೋಟದ ವ್ಯಾಪ್ತಿಯಲ್ಲಿರುವ ದೇವಾಲಯದ ತಡೆಗೋಡೆ ಕಾಮಗಾರಿ ಮಾಡಲಾಗುತಿತ್ತು. ಕಾರ್ಮಿಕರಾದ ಸುಬ್ರಮಣಿ ಮತ್ತು ಇತರರು ಕೆಲಸ ಮಾಡುತ್ತಿದ್ದರು. 

ಈ ವೇಳೆ ಮಣ್ಣಿ ಅಡಿಯಲ್ಲಿ ಎರಡು ಚಿಕ್ಕ ಚಿಕ್ಕ ಪೆಟ್ಟಿಗೆಗಳು ಪತ್ತೆಯಾಗಿವೆ. ಕಾರ್ಮಿಕರು ಕೂಡಲೇ ಅದನ್ನು ಅಲ್ಲಿನ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ವ್ಯವಸ್ಥಾಪಕರು ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಸಿದ್ದಾಪುರ ಪಿಎಸ್ಐ ರಾಘವೇಂದ್ರ ಮತ್ತು ತಂಡ ಪರಿಶೀಲಿಸಿ ನಂತರ ಕಂದಾಯ ಇಲಾಖೆ ಅಧಿಕಾರಿ ಅನಿಲ್ ಕುಮಾರ್ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. 

ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದಾಗ ಎರಡು ಪೆಟ್ಟಿಗೆಗಳಲ್ಲಿ ಚಿನ್ನವನ್ನು ಹೋಲುವ ಪ್ರಾಚೀನ ಕಾಲದ 1 ಕೆ.ಜಿ. 150 ಮಿಲಿ ತೂಕ ಲೋಹದ ವಸ್ತುಗಳು ಪತ್ತೆಯಾಗಿವೆ. 

ನಂತರ ಅಧಿಕಾರಿಗಳು ಇವುಗಳನ್ನು ತಾಲ್ಲೂಕು ಖಜಾನೆಗೆ ರವಾನಿಸಿದ್ದಾರೆ. ಸದ್ಯ ಇವುಗಳನ್ನು ಪುರಾತತ್ವ ಇಲಾಖೆ ಮೂಲಕ ಜಿಲ್ಲಾಧಿಕಾರಿ ಅವರಿಗೆ ತಲುಪಿಸಲಾಗುವುದು ಎಂದು ವಿರಾಜಪೇಟೆ ತಹಶೀಲ್ದಾರ್ ಪ್ರದೀಪ್ ಅವರು ತಿಳಿಸಿದ್ದಾರೆ.

click me!