ವರದಿ: ಆತ್ಮಭೂಷಣ್ನೈಋತ್ಯ ರೈಲ್ವೆಯು ಬೆಂಗಳೂರು-ಕೋಯಿಕ್ಕೋಡ್ ಎಕ್ಸ್ಪ್ರೆಸ್ ರೈಲಿನ ಸಮಯವನ್ನು ವಿಳಂಬಗೊಳಿಸಲು ಪ್ರಸ್ತಾಪಿಸಿದೆ, ಇದು ಪ್ರಯಾಣಿಕರಿಗೆ ಅನಾನುಕೂಲವಾಗಲಿದೆ. ಈ ಬದಲಾವಣೆಗೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರೈಲಿನ ಸಮಯ ಬದಲಾಯಿಸುವುದೇ ಸೂಕ್ತ ಎಂದಿದೆ.
ನೈಋತ್ಯ ರೈಲ್ವೆ ಪ್ರಸ್ತಾಪಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ
ಮಂಗಳೂರು: ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್ ಎಕ್ಸ್ಪ್ರೆಸ್ ರೈಲಿನ(16511) ಸಮಯವನ್ನು ವಿಳಂಬಿಸಲು ಹೊರಟಿರುವ ನೈಋತ್ಯ ರೈಲ್ವೆ ಪ್ರಸ್ತಾಪಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದರ ವಿರುದ್ಧ ಜಾಲತಾಣಗಳಲ್ಲಿ ಅಭಿಯಾನವನ್ನೇ ನಡೆಸುತ್ತಿವೆ.
ಪ್ರಸಕ್ತ ಬೆಂಗಳೂರು-ಕೋಯಿಕ್ಕೋಡ್ ರೈಲು ಬೆಳಗ್ಗೆ 7.15ಕ್ಕೆ ಮಂಗಳೂರು ಸೆಂಟ್ರಲ್ ತಲುಪುತ್ತಿದೆ. ಇದರ ಸಮಯ ಬದಲಾಯಿಸಿದರೆ ಮಂಗಳೂರು ತಲುಪುವ ಸಮಯ 8 ಗಂಟೆ ಆಗಲಿದೆ. ಮಾತ್ರವಲ್ಲ ಬೆಂಗಳೂರು-ಮುರುಡೇಶ್ವರ ಎಕ್ಸ್ಪ್ರೆಸ್ ರೈಲು ಕೂಡ ವಿಳಂಬವಾಗಿಯೇ ಮಂಗಳೂರಿಗೆ ಆಗಮಿಸಬೇಕಾಗುತ್ತದೆ. ಇದರಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವವರು ಬೇಗನೆ ಮನೆಗೆ ತಲುಪಿ ಉದ್ಯೋಗಕ್ಕೆ ತೆರಳಲು ಅನಾನುಕೂಲವಾಗಲಿದೆ ಎಂಬುದು ರೈಲ್ವೆ ಸಂಘಟನೆಗಳ ಅಭಿಪ್ರಾಯ.
27
ರಾತ್ರಿ ರೈಲುಗಳು ಗಮ್ಯ ಸ್ಥಾನ ತಲುಪುವಾಗ ನಿತ್ಯವೂ ವಿಳಂಬ
ಕಳೆದ ಎರಡು ತಿಂಗಳಿಂದ ಬೆಂಗಳೂರು-ಮಂಗಳೂರು ನಡುವಿನ ರಾತ್ರಿ ರೈಲುಗಳು ಗಮ್ಯ ಸ್ಥಾನ ತಲುಪುವಾಗ ನಿತ್ಯವೂ ವಿಳಂಬವಾಗುತ್ತಿದೆ. ಈ ಬಗ್ಗೆ ರೈಲ್ವೆ ಇಲಾಖೆ, ಸಂಸದರ ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ಕ್ರಾಸಿಂಗ್ ವಿಚಾರದಲ್ಲಿ ದಿನಪ್ರಂತಿ 30 ನಿಮಿಷದಿಂದ 1 ಗಂಟೆಗಳ ಕಾಲ ವಿಳಂಬವಾಗಿ ತಲುಪುವುದನ್ನು ಪ್ರಯಾಣಿಕರು ಅನಿವಾರ್ಯವಾಗಿ ಸಹಿಸಲೇ ಬೇಕಾಗಿದೆ ಎನ್ನುತ್ತಾರೆ ರೈಲ್ವೆ ಹೋರಾಟಗಾರರು.
37
ಯಾಕಾಗಿ ಸಮಯ ಬದಲಾವಣೆ?:
ಬೆಂಗಳೂರು-ಕಾರವಾರ ನಡುವಿನ ಪಂಚಗಂಗಾ ಎಕ್ಸ್ಪ್ರೆಸ್ ರೈಲಿಗೆ ಈ ಹಿಂದೆ 14 ಕೋಚ್ ಇತ್ತು. ಆಗ ಸಿರಿಬಾಗಿಲಿನಲ್ಲಿ ಮಧ್ಯರಾತ್ರಿ ಕ್ರಾಸಿಂಗ್ಗೆ ನಿಲ್ಲಿಸಲಾಗುತ್ತಿತ್ತು. ಪ್ರಸಕ್ತ ಈ ರೈಲು 19 ಕೋಚ್ಗಳಲ್ಲಿ ಸಂಚರಿಸುತ್ತಿದೆ. 14ಕ್ಕಿಂತ ಜಾಸ್ತಿ ಕೋಚ್ ಇದ್ದರೆ ಸಿರಿಬಾಗಿಲಿನಲ್ಲಿ ಕ್ರಾಸಿಂಗ್ಗೆ ಅವಕಾಶ ಇಲ್ಲ, ಬದಲು ಸುಬ್ರಹ್ಮಣ್ಯ ಮಾರ್ಗದಲ್ಲಿ ಕ್ರಾಸಿಂಗ್ಗೆ ನಿಲ್ಲಿಸಲಾಗುತ್ತಿದೆ. ಹೀಗಾಗಿ ಉಳಿದ ರೈಲುಗಳು ವಿಳಂಬವಾಗಿ ಸಂಚರಿಸುವಂತಾಗಿದೆ. ಇದೇ ಕಾರಣ ಮುಂದಿಟ್ಟುಕೊಂಡು ರೈಲ್ವೆ ಇಲಾಖೆ ಉಳಿದ ರೈಲುಗಳ ಸಂಚಾರವನ್ನು ತುಸು ವಿಳಂಬಿಸಲು ಮುಂದಾಗಿದೆ. ಕೋಯಿಕ್ಕೋಡ್ ರೈಲಿನ ವೇಳಾಪಟ್ಟಿ ಬದಲಾಯಿಸುವಂತೆ ದಕ್ಷಿಣ ರೈಲ್ವೆಗೆ ನೈಋತ್ಯ ರೈಲ್ವೆ ಪ್ರಸ್ತಾವನೆ ಕಳುಹಿಸಿದೆ. ಇದಕ್ಕೆ ರೈಲ್ವೆ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ
ಆದರೆ ರೈಲ್ವೆ ಸಂಘಟನೆಗಳು, ತಾಂತ್ರಿಕ ಸಲಹೆಗಾರರು ಕೋಯಿಕ್ಕೋಡ್ ರೈಲಿನ ಪ್ರಸ್ತಾವಿತ ವೇಳಾಪಟ್ಟಿ ಬದಲಾವಣೆಯನ್ನು ಒಪ್ಪುವುದಿಲ್ಲ. ಈ ರೀತಿ ಕೋಯಿಕ್ಕೋಡ್ ರೈಲಿನ ಸಮಯ ಬದಲಾಯಿಸಿದರೆ ನಂತರದ ಮುರುಡೇಶ್ವರ ಎಕ್ಸ್ಪ್ರೆಸ್ ರೈಲಿನ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಆಗ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುವ ಎಲ್ಲ ರೈಲುಗಳ ಸಮಯವನ್ನೂ ಬದಲಾಯಿಸಬೇಕಾಗುತ್ತದೆ. ಹಾಗಾಗಿ ರೈಲು ಇದ್ದರೂ ಪ್ರಯಾಣಿಕ ಸ್ನೇಹಿಯಾಗಿರುವುದಿಲ್ಲ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್.
ಬೇರೆ ರೈಲುಗಳ ಸಮಯ ಬದಲಾಯಿಸುವ ಬದಲು ಸಂಜೆ ಬೆಂಗಳೂರಿನಿಂದ ಹೊರಡುವ ಪಂಚಗಂಗಾ ಎಕ್ಸ್ಪ್ರೆಸ್ ರೈಲನ್ನು ಸಂಜೆ 6.50ರ ಬದಲು 6.35ಕ್ಕೆ ಅಂದರೆ 15 ನಿಮಿಷ ಮುಂಚಿತವಾಗಿ ಹೊರಡುವಂತೆ ಮಾಡಿದರೆ ಬೇರೆ ಯಾವ ರೈಲುಗಳ ಸಮಯವನ್ನು ಬದಲಾಯಿಸುವ ಅಗತ್ಯ ಇರುವುದಿಲ್ಲ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಸೂಕ್ತ ಸ್ಪಂದನ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಮುಖಂಡರ ಅಸಮಾಧಾನ.
57
ಕ್ರಾಸಿಂಗ್ ಸಮಸ್ಯೆಗೆ ಮುಕ್ತಿ ಸಾಧ್ಯವೇ?
ರೈಲು ಸಂಚಾರದಲ್ಲಿ ವಿಚಾರದಲ್ಲಿ ಗಂಟೆಗಟ್ಟಲೆ ವಿಳಂಬಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಕ್ರಾಸಿಂಗ್. ಇದೇ ಸಮಸ್ಯೆ ಬೆಂಗಳೂರು-ಮಂಗಳೂರು-ಕೋಯಿಕ್ಕೋಡ್ ರೈಲು ಸಂಚಾರದಲ್ಲೂ ಆಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ನೈಋತ್ಯ ರೈಲ್ವೆ ಸೂಕ್ತ ಗಮನ ಹರಿಸುತ್ತಿಲ್ಲ ಎಂಬುದು ರೈಲ್ವೆ ಸಂಘಟನೆಗಳ ಆರೋಪ.
67
ಹಾಸನ-ಮಂಗಳೂರು ರೈಲು ಮಾರ್ಗ ಸಿಂಗಲ್ ಲೈನ್
ಹಾಸನ-ಮಂಗಳೂರು ರೈಲು ಮಾರ್ಗ ಸಿಂಗಲ್ ಲೈನ್. ಹಾಸನ, ಸಕಲೇಶಪುರ ಬಳಿಕ ದೋಣಿಗಲ್, ಸಿರಿಬಾಗಿಲುಗಳಲ್ಲಿ ಕ್ರಾಸಿಂಗ್ಗೆ ಅವಕಾಶ ಇದೆ. ನಂತರ ಸುಬ್ರಹ್ಮಣ್ಯ ಮಾರ್ಗದಲ್ಲಿ. ಈ ಘಾಟ್ ಪ್ರದೇಶದಲ್ಲಿ ಹಳಿ ಹಾಗೂ ಕ್ರಾಸಿಂಗ್ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎನ್ನುವುದು ರೈಲ್ವೆ ಅಧಿಕಾರಿಗಳ ಅಂಬೋಣ. ಅರೆಬೆಟ್ಟದಲ್ಲಿ ಕ್ರಾಸಿಂಗ್ ರಚನೆಯ ಪ್ರಸ್ತಾಪ ಇದ್ದರೂ ಕಾರ್ಯಗತಗೊಂಡಿಲ್ಲ. ಹಾಗಾಗಿ ಈ ಮಾರ್ಗದಲ್ಲಿ ಹಳಿ ಹಾಕಿ 40 ವರ್ಷ ಕಳೆದರೂ ಕ್ರಾಸಿಂಗ್ ಸಮಸ್ಯೆಗೆ ಇನ್ನೂ ಮುಕ್ತಿ ಸಿಗುತ್ತಿಲ್ಲ ಎನ್ನುವುದು ರೈಲ್ವೆ ಸಂಘಟನೆಗಳ ಕೊರಗು.
77
ಪಂಚಗಂಗಾ ರೈಲು ಸಮಯ ಬದಲಾವಣೆ ಮಾಡಿದರೆ ಉತ್ತಮ
ಬೆಂಗಳೂರು-ಕೋಯಿಕ್ಕೋಡ್ ರೈಲಿನ ಸಮಯ ಬದಲಾವಣೆ ಮಾಡಿದರೆ ಪ್ರಯಾಣಿಕರಿಗೆ ತೊಂದರೆ ಆಗುವುದು ಬಿಟ್ಟರೆ ಬೇರೆ ರೈಲುಗಳ ಸಂಚಾರವೂ ವಿಳಂಬವಾಗಲಿದೆ. ಅದರ ಬದಲು ಪಂಚಗಂಗಾ ರೈಲು ಬೆಂಗಳೂರನಿಂದ ಹೊರಡುವ ಸಮಯವನ್ನು ತುಸು ಮುಂಚಿತವಾಗಿ ಬದಲಾವಣೆ ಮಾಡಿದರೆ ಈ ಎಲ್ಲ ಸಮಸ್ಯೆಗೂ ಸುಲಭದಲ್ಲಿ ಪರಿಹಾರ ಸಾಧ್ಯವಿದೆ. ಈ ವಿಚಾರವನ್ನು ಸಂಸದರು ಹಾಗೂ ರೈಲ್ವೆ ಇಲಾಖೆಯ ಗಮನಕ್ಕೂ ತರಲಾಗಿದೆ.
-ಅನಿಲ್ ಹೆಗ್ಡೆ, ತಾಂತ್ರಿಕ ಸಲಹೆಗಾರರು, ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ.