ಗಂಟೆಗೆ 15 ಲಕ್ಷ ರೂ. ವೆಚ್ಚ; ಹಾವೇರಿ ಜಿಲ್ಲೆಯಲ್ಲಿ ಮೋಡ ಬಿತ್ತನೆಗೆ ಚಾಲನೆ, ರೈತರಿಗೆ ನೆರವು

Published : Jul 07, 2026, 08:54 AM IST

ಉತ್ತರ ಕರ್ನಾಟಕದಲ್ಲಿ ಮುಂಗಾರು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು, ಹಾವೇರಿ ಜಿಲ್ಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಸರ್ಕಾರವೇ ವಹಿಸಿಕೊಂಡು ಧಾರವಾಡ, ಗದಗ ಜಿಲ್ಲೆಗಳಿಗೂ ವಿಸ್ತರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

PREV
18
ಮೋಡ ಬಿತ್ತನೆಯ ವಿಶೇಷ ವಿಮಾನಕ್ಕೆ ಚಾಲನೆ

ಉತ್ತರ ಕರ್ನಾಟಕ ಭಾಗದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಮೋಡ ಬಿತ್ತನೆ ಅವಶ್ಯವಿದ್ದು ಇದು ಸರ್ಕಾರದಿಂದಲೇ ಈ ಕಾರ್ಯವಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಲೋಕೋಪಯೋಗಿ ಸಚಿವ, ಧಾರವಾಡ, ಹಾವೇರಿ ಜಿಲ್ಲಾ ಪ್ರಕೃತಿ ವಿಕೋಪ ನಿರ್ವಹಣೆ ಉಸ್ತುವಾರಿ ಮಂತ್ರಿ ಸತೀಶ ಜಾರಕಿಹೊಳಿ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸೋಮವಾರ ಹಾವೇರಿ ಜಿಲ್ಲೆಯ ಭಾಗದಲ್ಲಿ ಮೋಡ ಬಿತ್ತನೆಯ ವಿಶೇಷ ವಿಮಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

28
ಮಳೆ ಕೊರತೆಯಿಂದ ಮೋಡ ಬಿತ್ತನೆ

ಹಾವೇರಿಯಲ್ಲಿ ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಈ ಹಿಂದೆ ಸಭೆ ನಡೆಸಿ, ಮೋಡ ಬಿತ್ತನೆ ಕುರಿತು ಚರ್ಚಿಸಲಾಗಿತ್ತು. ಮುಂದುವರಿದ ಭಾಗವಾಗಿ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಸರ್ಕಾರದ ಕಾರ್ಯಕ್ರಮ ಆಗಬೇಕು ಎನ್ನುವುದು ನಮ್ಮ ಆಶಯ. ಮಳೆ ಕೊರತೆಯಿಂದ ರೈತರಿಗೆ ಉಂಟಾಗಿರುವ ಸಮಸ್ಯೆ ಗಮನದಲ್ಲಿಟ್ಟುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು.

38
ಪರಿಹಾರಕ್ಕೆ ಕ್ರಮ

ಜೂನ್ ತಿಂಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ಮುಂಗಾರು ಬೆಳೆಗಳಿಗೆ ಹಾನಿಯಾಗಿದ್ದು, ಬೆಳೆ ಹಾನಿಯ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಮೀಕ್ಷೆ ವರದಿ ಬಂದ ಬಳಿಕ ಸರ್ಕಾರ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ. ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. ಬ್ಯಾಂಕ್‌ಗಳು ಮತ್ತು ವಿಮಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

48
ಒಂದು ಗಂಟೆಗೆ 15 ಲಕ್ಷ ವೆಚ್ಚ

ಮೋಡ ಬಿತ್ತನೆ ಕಾರ್ಯಕ್ರಮದ ನೇತೃತ್ವ ವಹಿಸಿದ ರಾಣಿಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ರೈತರ ಒಳಿತಿಗಾಗಿ ಹಾವೇರಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು ಸೇರಿ ಈ ಮೋಡ ಬಿತ್ತನೆಗೆ ಚಾಲನೆ ನೀಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಸೋಮವಾರದಿಂದ 3 ದಿನ ನಿರಂತರ ಮೋಡ ಬಿತ್ತನೆ ನಡೆಯಲಿದೆ. ವಿಶೇಷ ವಿಮಾನ ಒಂದು ತಿಂಗಳು ಹುಬ್ಬಳ್ಳಿಯಲ್ಲೇ ಇರಲಿದ್ದು, ತೇವಾಂಶ ಸಿಕ್ಕಾಗ ವಿಜ್ಞಾನಿಗಳು ಹೇಳಿದ ಸಮಯಕ್ಕೆ ಮೋಡ ಬಿತ್ತನೆ ಮಾಡಲಾಗುವುದು. ಒಂದು ತಾಸಿಗೆ ₹15 ಲಕ್ಷ ವೆಚ್ಚವಾಗುತ್ತದೆ ಎಂದು ತಿಳಿಸಿದರು..

58
ವಿಳಂಬ ಏಕೆ?

ಉತ್ತರ ಕರ್ನಾಟಕ ಭಾಗದಲ್ಲಿ ಸಮರ್ಪಕ ಮಳೆಯಾಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬರದ ಛಾಯೆ ಆವರಿಸುತ್ತಿದ್ದರೂ ಸರ್ಕಾರ ಮೋಡ ಬಿತ್ತನೆಗೆ ಏಕೆ ವಿಳಂಬ ಮಾಡುತ್ತಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಪ್ರಶ್ನಿಸಿದರು.

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ ಭಾಗದಲ್ಲಿ ಮೋಡಗಳು ಕಾಣಿಸಿಕೊಳ್ಳುತ್ತಿದ್ದು, ಮೋಡ ಬಿತ್ತನೆಗೆ ಇದು ಸೂಕ್ತ ಸಮಯವಾಗಿದೆ. ಸರ್ಕಾರ ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಅಧಿಕಾರಿಗಳ ಮಾತು ಕೇಳದೆ ವಿಜ್ಞಾನಿಗಳ ಮಾತು ಕೇಳಬೇಕು. ವಿಳಂಬ ಮಾಡದೆ ತಕ್ಷಣ ಮೋಡ ಬಿತ್ತನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

68
ಮೋಡ ಬಿತ್ತನೆ ಯಶಸ್ವಿ

ತಂತ್ರಜ್ಞಾನಗಳು ಸಾಕಷ್ಟು ಆವಿಷ್ಕಾರ ಆಗಿರುವುದರಿಂದ ಮೋಡ ಬಿತ್ತನೆ ಯಶಸ್ವಿಯಾಗುತ್ತಿದೆ. 2001 ಮತ್ತು 2017ರಲ್ಲಿ ಇಲ್ಲಿಂದಲೇ ಕಾರ್ಯಾಚರಣೆ ನಡೆಸಿದಾಗ, ಹುಬ್ಬಳ್ಳಿ ಸೇರಿ ಹಾವೇರಿ, ಗದಗ ಭಾಗದಲ್ಲಿ ಉತ್ತಮ ಮಳೆಯಾಗಿತ್ತು. ರಕ್ಷಣಾ ಇಲಾಖೆ ವಿಮಾನಗಳು ಖಾಲಿ ನಿಂತಿರುತ್ತವೆ. ಮೋಡ ಬಿತ್ತನೆಗೆ ಅವುಗಳನ್ನು ಬಳಸಿಕೊಂಡು ರೈತರ ನೆರವಿಗೆ ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. 

78
ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ

ಶಾಸಕ ಪ್ರಕಾಶ ಕೋಳಿವಾಡ ನೇತೃತ್ವದಲ್ಲಿ ಹಾವೇರಿ ಭಾಗದಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಸರ್ಕಾರ ಅನುಮತಿ‌ ನೀಡದಿದ್ದರೆ, ಧಾರವಾಡ, ಗದಗ ಭಾಗದ‌ ಶಾಸಕರ ಸಹಕಾರದಲ್ಲಿ ನಾವೇ ಈ ಭಾಗದಲ್ಲೂ ಮೋಡ ಬಿತ್ತನೆ ಮಾಡುತ್ತೇವೆ ಎಂದರು.

88
ಧಾರವಾಡ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಿ

ಉತ್ತರ ಕರ್ನಾಟಕದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಧಾರವಾಡ ಜಿಲ್ಲೆಯಲ್ಲೂ ಮೋಡ ಬಿತ್ತನೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಧಾರವಾಡ ಜಿಲ್ಲೆಯಲ್ಲಿಯೂ ಮೋಡ ಬಿತ್ತನೆ ನಡೆಸುವಂತೆ ಮನವಿ ಮಾಡಲಾಗಿದೆ. ಸರ್ಕಾರ ಈ ಕುರಿತು ಕ್ರಮಕೈಗೊಳ್ಳದಿದ್ದರೆ ಧಾರವಾಡ ಹಾಗೂ ಗದಗ ಜಿಲ್ಲೆಯ ಶಾಸಕರು ಒಗ್ಗೂಡಿ ಸ್ವಂತ ಪ್ರಯತ್ನದಿಂದ ಮೋಡ ಬಿತ್ತನೆ ನಡೆಸುವ ಕುರಿತು ಚಿಂತನೆ ನಡೆಸಲಾಗುವುದು. ಮೋಡ ಬಿತ್ತನೆಗೆ ಬಳಸುವ ವಿಮಾನ ಒಂದು ತಿಂಗಳ ಕಾಲ ಈ ಭಾಗದಲ್ಲೇ ಲಭ್ಯವಿರುವುದರಿಂದ ಅಗತ್ಯವಿದ್ದರೆ ಅದರ ಪ್ರಯೋಜನ ಪಡೆಯಲು ಸಿದ್ಧರಾಗಿದ್ದೇವೆ ಎಂದರು.

Read more Photos on
click me!

Recommended Stories