ಕೊಡಗಿನಲ್ಲಿ ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ: ನೂರಾರು ಮನೆಗಳು ಜಲಾವೃತ

First Published Aug 8, 2020, 10:26 AM IST

ಮಡಿಕೇರಿ(ಆ.08): ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಕಾವೇರಿ ನದಿಯ ಪ್ರವಾಹ ಹೆಚ್ಚಳದಿಂದ ನೂರಾರು ಮನೆಗಳು ಜಲಾವೃತವಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ 180 ಮಿ.ಮೀ. ಸರಾಸರಿ ಮಳೆ, ಭಾಗಮಂಡಲ ವ್ಯಾಪ್ತಿಯಲ್ಲಿ ಬರೋಬ್ಬರಿ 400 ಮಿ.ಮೀ. ಸರಾಸರಿ ಮಳೆಯಾಗಿದೆ. 
 

ಕಾವೇರಿ ನದಿಯ ಪ್ರವಾಹದಿಂದಾಗಿ ಚೆರಿಯಪರಂಬು, ಕರಡಿಗೋಡು, ಬೆಟ್ಟದಕಾಡು, ಕೂಡುಗದ್ದೆ, ಕುಂಬಾರಗುಂಡಿ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ನೂರಾರು ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ.
undefined
ತ್ರಿವೇಣಿ ಸಂಗಮದಲ್ಲಿ ಪ್ರವಾಹದ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದ್ದು, ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯ ಕೂಡ ಮುಳುಗಡೆಯಾಗಿದೆ. ದೇವಾಲಯದ ಒಳಭಾಗದಲ್ಲೂ ಪ್ರವಾಹ ನೀರು ಹರಿಯಲಾರಂಭಿಸಿದೆ.
undefined
ಸ್ಥಳೀಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ, ಅಗತ್ಯವಿರುವ ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.
undefined
ಕುಶಾಲನಗರ ವ್ಯಾಪ್ತಿಯಲ್ಲೂ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಕುವೆಂಪು, ಸಾಯಿ, ಬಸಪ್ಪ ಬಡಾವಣೆಗಳ ಹಲವು ಮನೆಗಳು ಮುಳುಗಡೆಯಾಗಿವೆ. ಅಲ್ಲದೆ, ತಾವರೆಕೆರೆ ಬಳಿ ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಹ ನೀರು ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಪರ್ಯಾಯವಾಗಿ ಕುಶಾಲನಗರ, ಗುಮ್ಮನಕೊಲ್ಲಿ, ಹಾರಂಗಿ, ಗುಡ್ಡೆಹೊಸೂರು ಮಾರ್ಗವಾಗಿ ವಾಹನ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
undefined
ಮಡಿಕೇರಿ ಸಮೀಪದ ಕಡಗದಾಳು ಬಳಿಯ ಬೊಟ್ಲಪ್ಪ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದ್ದು, ಬೊಟ್ಲಪ್ಪ ದೇವಾಲಯಕ್ಕೆ ತೆರಳುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಲ್ಲಿ ಸಿಲುಕಿಹಾಕಿಕೊಂಡವರನ್ನು ಬೊಟ್ಲಪ್ಪ ಯುವಕ ಸಂಘದ ಪದಾಧಿಕಾರಿಗಳ ಸಹಕಾರದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
undefined
ಮಡಿಕೇರಿ ತಾಲೂಕಿನ ಚೇರಂಗಾಲ ಗ್ರಾಮದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದೆ. ಬೆಟ್ಟದ ಒಂದು ಭಾಗ ಕುಸಿದ ಪರಿಣಾಮ ಅಲ್ಲಿನ 8 ಕುಟುಂಬಗಳು ಬಾಹ್ಯ ಜಗತ್ತಿನ ಸಂಪರ್ಕ ಕಡಿತಗೊಂಡಿತ್ತು. ಅಲ್ಲದೆ, ಮತ್ತೊಂದು ಭಾಗದಲ್ಲಿದ್ದ ಸೇತುವೆ ಕೂಡ ಮುಳುಗಡೆಯಾಗಿದ್ದು, ಅಲ್ಲಿನ ಸ್ಥಳೀಯರನ್ನು ರಕ್ಷಣೆ ಮಾಡಲು ಹರಸಾಹಸ ಪಡಬೇಕಾಯಿತು.
undefined
ಕಾವೇರಿ ನದಿಯ ಪ್ರವಾಹದಿಂದಾಗಿ ಕಕ್ಕಬ್ಬೆ ಇಗ್ಗುತ್ತಪ್ಪ ದೇವಾಲಯಕ್ಕೆ ತೆರಳುವ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಚೆರಿಯಪರಂಬುವಿನಲ್ಲಿ ಪ್ರವಾಹದಿಂದ ದರ್ಗಾ ಮುಳುಗಡೆಯಾಗಿದೆ. ಅಲ್ಲದೆ, ನಾಪೋಕ್ಲು ಜಿಲ್ಲಾ ಕ್ರೀಡಾಂಗಣ ಕೂಡ ಮುಳುಗಡೆಯಾಗಿದೆ.
undefined
ಮಡಿಕೇರಿ ವಿರಾಜಪೇಟೆ ರಸ್ತೆಯ ಬೇತ್ರಿ ಸೇತುವೆ ಮೇಲೆ ಕಾವೇರಿ ನದಿ ಹರಿಯುತ್ತಿರುವುದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಚೆಟ್ಟಿಮಾನಿ ಬಳಿಯ ಚೆದುಕಾರು ಸೇತುವೆ ಮುಳುಗಡೆಯಾಗಿದ್ದು, ಭಾಗಮಂಡಲ-ಮಡಿಕೇರಿ ಸಂಪರ್ಕ ಕಡಿತಗೊಂಡಿದೆ.
undefined
ಮಡಿಕೇರಿ-ಮಂಗಳೂರು ರಸ್ತೆಯ ವಿವಿಧ ಭಾಗಗಳಲ್ಲಿ ಬರೆ ಕುಸಿಯುತ್ತಿದ್ದು, ಕೂಡಲೇ ಮಣ್ಣು ತೆರವು ಕಾರ್ಯ ನಡೆಸಲಾಗುತ್ತಿದೆ. ಕಳೆದ ಬಾರಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
undefined
ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗುಂಡಿ ಗ್ರಾಮದ ಮೂರು ತಿಂಗಳ ಮಗು ಸೇರಿದಂತೆ ಎರಡು ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
undefined
ಭಾರೀ ಮಳೆಗೆ ಮಡಿಕೇರಿ-ಸಿದ್ದಾಪುರ ರಾಜ್ಯ ಹೆದ್ದಾರಿ ಕುಸಿತಗೊಂಡಿದೆ. ಚೆಟ್ಟಳ್ಳಿ ಬಳಿಯ ಅಬ್ಯಾಲದಲ್ಲಿ ಅರ್ಧ ರಸ್ತೆ ಕೊಚ್ಚಿ ಹೋಗಿದೆ. ಮತ್ತಷ್ಟು ಕುಸಿಯುವ ಆತಂಕ ಉಂಟಾಗಿದ್ದು, ಮೇಲ್ಭಾಗದಿಂದ ನಿರಂತರವಾಗಿ ಗುಡ್ಡ ಕುಸಿಯುತ್ತಿದೆ. ಇದರಿಂದಾಗಿ ಸಂಚಾರ ಸ್ಥಗಿತವಾಗಿದೆ.
undefined
ಮಡಿಕೇರಿ ತಾಲೂಕಿನ ಬೇತ್ರಿ ಸೇತುವೆಯಲ್ಲಿ ಪ್ರವಾಹ ಮುಂದುವರೆದಿದ್ದು, ಮಡಿಕೇರಿ-ವಿರಾಜಪೇಟೆ ಸಂಪರ್ಕ ಕಡಿತಗೊಂಡಿದೆ. ಬಿಳಿಗೇರಿ-ಹಾಕತ್ತೂರು ಸಂಪರ್ಕ ರಸ್ತೆ ಕುಸಿತಗೊಂಡಿದೆ. ನಾಪೋಕ್ಲುವಿನ ಇಗ್ಗುತ್ತಪ್ಪ ದೇವಾಲಯ ರಸ್ತೆ ಪ್ರವಾಹ ಉಂಟಾಗಿದೆ. ಕುಶಾಲನಗರ-ಮಡಿಕೇರಿ ಹೆದ್ದಾರಿಯ ತಾವರೆಕೆರೆ ಬಳಿ ಪ್ರವಾಹ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಹಾರಂಗಿ ಮಾರ್ಗವಾಗಿ ರಸ್ತೆ ಸಂಚಾರಕ್ಕೆ ಅವಕಾಶ ಮಾಡಲಾಗಿತ್ತು. ವಿರಾಜಪೇಟೆ ತಾಲೂಕಿನ ಹಚ್ಚಿನಾಡುವಿನಲ್ಲಿ 12 ಮನೆಗಳು ಜಲಾವೃತಗೊಂಡಿದೆ.
undefined
ಜಿಲ್ಲೆಯ ವಿವಿಧ ಭಾಗಗಳಲ್ಲಿ ಮರಗಳು ಧರಾಶಾಹಿಯಾಗಿದ್ದು, ವಿದ್ಯುತ್‌ ಕಂಬಗಳು ನೆಲಕಚ್ಚಿದೆ. ಗ್ರಾಮೀಣ ಭಾಗಗಳಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.
undefined
click me!