ಯುವಕನೊಬ್ಬ ತಾನು ಕೆಲಸ ಮಾಡುತ್ತಿದ್ದ ಆಭರಣ ಪಾಲೀಶ್ ಅಂಗಡಿಯಲ್ಲೇ 35 ಲಕ್ಷ ಮೌಲ್ಯದ ಬೆಳ್ಳಿ ಕದ್ದು ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಕದ್ದ ಮಾಲು ಮಾರಾಟವಾಗಲು ಮತ್ತು ಜೂಜಿನಲ್ಲಿ ಗೆಲ್ಲಲು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಮಾ.18): ಆನ್ಲೈನ್ ಜೂಜಿನ ಚಟ ಮನುಷ್ಯನನ್ನು ಎಂತಹ ದುಸ್ಸಾಹಸಕ್ಕೆ ತಳ್ಳುತ್ತದೆ ಎಂಬುದಕ್ಕೆ ಬೆಂಗಳೂರಿನ ಈ ಘಟನೆ ಸಾಕ್ಷಿಯಾಗಿದೆ. ತಾನು ಕೆಲಸ ಮಾಡುತ್ತಿದ್ದ ಆಭರಣ ಪಾಲೀಶ್ ಅಂಗಡಿಯಲ್ಲೇ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಿ, ಬಳಿಕ ಕಳ್ಳತನದ ಮಾಲು ಮಾರಾಟ ಮಾಡಲು ಮತ್ತು ಜೂಜಿನಲ್ಲಿ ಗೆಲ್ಲಲು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದ ಖದೀಮರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ.
26
ಘಟನೆಯ ವಿವರ:
ಬಂಧಿತ ಆರೋಪಿಗಳನ್ನು ನರೇಂದ್ರ ಮತ್ತು ಆತನಿಗೆ ಸಹಕರಿಸಿದ ಕುಲ್ದೀಪ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಸಿಟಿ ಮಾರ್ಕೆಟ್ ಸಮೀಪದ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ 'ಧನಲಕ್ಷ್ಮೀ ರೋಡಿಯಂ' ಎಂಬ ಆಭರಣ ಪಾಲೀಶ್ ಅಂಗಡಿಯಲ್ಲಿ ನರೇಂದ್ರ ಕಳೆದ ಒಂದು ತಿಂಗಳಿನಿಂದ ಕೆಲಸ ಮಾಡುತ್ತಿದ್ದನು. ಈ ಅಂಗಡಿಗೆ ವಿವಿಧ ಬೆಳ್ಳಿ ಅಂಗಡಿಗಳಿಂದ ಆಭರಣಗಳು ಪಾಲೀಶ್ ಮಾಡಲು ಬರುತ್ತಿದ್ದವು.
36
ಜೂಜಿನ ಲಾಸ್ ಕವರ್ ಮಾಡಲು ಸ್ಕೆಚ್
ಆರೋಪಿ ನರೇಂದ್ರನಿಗೆ ಆನ್ಲೈನ್ ಜೂಜಿನ ತೀವ್ರ ಚಟವಿತ್ತು. ಜೂಜಿನಲ್ಲಿ ಈಗಾಗಲೇ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಈತ, ಅದನ್ನು ಹೇಗಾದರೂ ಮಾಡಿ ವಾಪಸ್ ಪಡೆಯಬೇಕು ಎಂಬ ಹಠಕ್ಕೆ ಬಿದ್ದಿದ್ದನು. 'ಒಮ್ಮೆಲೇ 10 ಲಕ್ಷ ರೂಪಾಯಿ ಇನ್ವೆಸ್ಟ್ ಮಾಡಿದರೆ ಭರ್ಜರಿ ಲಾಭ ಗಳಿಸಿ ಎಲ್ಲಾ ಸಾಲ ತೀರಿಸಬಹುದು' ಎಂಬ ಭ್ರಮೆಯಲ್ಲಿದ್ದ ನರೇಂದ್ರ, ತಾನು ಕೆಲಸ ಮಾಡುವ ಅಂಗಡಿಯಲ್ಲೇ ಕಳ್ಳತನ ಮಾಡಲು ನಿರ್ಧರಿಸಿದನು. ಅಂಗಡಿಯ ಕೀ ಆತನ ಬಳಿಯೇ ಇದ್ದಿದ್ದರಿಂದ ಕೆಲಸ ಸುಲಭವಾಗಿತ್ತು.
ಅವಕಾಶ ಸಿಕ್ಕಿದ್ದೇ ತಡ, ಅಂಗಡಿಯಲ್ಲಿದ್ದ ಸುಮಾರು 10.12 ಕೆಜಿ ತೂಕದ ಬೆಳ್ಳಿ ಆಭರಣಗಳನ್ನು ಎಗರಿಸಿದ ನರೇಂದ್ರ, ತಕ್ಷಣವೇ ಟ್ರೈನ್ ಮೂಲಕ ತನ್ನ ರಾಜ್ಯವಾದ ರಾಜಸ್ಥಾನಕ್ಕೆ ಪರಾರಿಯಾಗಿದ್ದನು. ಅಲ್ಲಿ ತನ್ನ ಸ್ನೇಹಿತ ಕುಲ್ದೀಪ್ ಜೊತೆ ಸೇರಿಕೊಂಡು ಕದ್ದ ಮಾಲಿನಲ್ಲಿ ಸುಮಾರು 3 ಕೆಜಿ ಬೆಳ್ಳಿಯನ್ನು ಮಾರಾಟ ಮಾಡಿದ್ದನು.
56
ದೇವಸ್ಥಾನಗಳ ಸುತ್ತಾಟ
ವಿಶೇಷವೆಂದರೆ, ಕಳ್ಳತನ ಮಾಡಿದ ಮೇಲೆ ಸಿಕ್ಕಿಬೀಳಬಾರದು ಮತ್ತು ಉಳಿದ ಬೆಳ್ಳಿ ಹೆಚ್ಚಿನ ಬೆಲೆಗೆ ಮಾರಾಟವಾಗಬೇಕು ಎಂಬ ಉದ್ದೇಶದಿಂದ ಆರೋಪಿಗಳು ಉಜ್ಜಯಿನಿಯ ಪ್ರಸಿದ್ಧ ಮಹಾಕಾಳೇಶ್ವರ ದೇವಸ್ಥಾನ ಮತ್ತು ಪ್ರಯಾಗ್ ರಾಜ್ಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ದೇವರಿಗೆ ಪೂಜೆ ಸಲ್ಲಿಸಿದರೆ ಜೂಜಿನಲ್ಲಿ ಸಕ್ಸಸ್ ಸಿಗುತ್ತದೆ ಮತ್ತು ಕಳ್ಳತನದ ಹಣ ಡಬಲ್ ಆಗುತ್ತದೆ ಎಂಬುದು ಇವರ ವಿಚಿತ್ರ ನಂಬಿಕೆಯಾಗಿತ್ತು.
66
ಪೊಲೀಸರ ಮಿಂಚಿನ ಕಾರ್ಯಾಚರಣೆ
ಅಂಗಡಿಯಲ್ಲಿ ಬೆಳ್ಳಿ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಹಲಸೂರು ಗೇಟ್ ಪೊಲೀಸರು ತನಿಖೆ ಆರಂಭಿಸಿದ್ದರು. ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಆರೋಪಿಗಳನ್ನು ಟ್ರ್ಯಾಕ್ ಮಾಡಿದ ಪೊಲೀಸ್ ತಂಡ, ರಾಜಸ್ಥಾನಕ್ಕೆ ತೆರಳಿ ಆರೋಪಿಗಳಾದ ನರೇಂದ್ರ ಮತ್ತು ಕುಲ್ದೀಪ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿಂದ ಕಳವು ಮಾಡಲಾಗಿದ್ದ 35 ಲಕ್ಷ ಮೌಲ್ಯದ 10.12 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.