BJP-BSY ನಡುವೆ ಬೇರ್ಪಡಿಸದ ಸಂಬಂಧ: ಸಿಎಂ ಬೊಮ್ಮಾಯಿ

First Published Nov 11, 2021, 8:22 AM IST

ನವದೆಹಲಿ(ನ.11): ಬಿಜೆಪಿ(BJP) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಇಬ್ಬರೂ ಪರಸ್ಪರ ಬೇರ್ಪಡಿಸಲಾಗದ ಸಂಬಂಧ. ಬಿಎಸ್‌ವೈ ಸಿಎಂ ಆಗಿದ್ದ ವೇಳೆಯಲ್ಲಿ ಪಕ್ಷದ ನೀತಿಗಳು ಅತ್ಯುತ್ತಮ ರೀತಿಯಲ್ಲಿ ಜಾರಿಗೊಂಡಿದ್ದವು. ಹೀಗಾಗಿ ಅವರ ಕಾಲದಲ್ಲಿ ಜಾರಿಯಾದ ಎಲ್ಲಾ ನೀತಿಗಳು ಮತ್ತು ಯೋಜನೆಗಳು ಈಗಲೂ ರಾಜ್ಯದಲ್ಲಿ ಮುಂದುವರೆಯುತ್ತಿವೆ ಎಂದು ಕರ್ನಾಟಕದ(Karnataka) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೊಗಳಿದ್ದಾರೆ.

ಟೈಮ್ಸ್‌ ನೌ ಸುದ್ದಿವಾಹಿನಿ(Times Now News Channel) ದೆಹಲಿಯಲ್ಲಿ(Delhi) ಹಮ್ಮಿಕೊಂಡಿದ್ದ ‘ಟೈಮ್ಸ್‌ ನೌ ಸಮ್ಮಿಟ್‌ 2021’ರಲ್ಲಿ(TimesNowSummit2021) ಬುಧವಾರ ಭಾಗಿಯಾಗಿ ಮಾತನಾಡಿದ ಸಿಎಂ ಬೊಮ್ಮಾಯಿ, ತಮ್ಮ ರಾಜಕೀಯ ಗುರು ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರ ಅಡಳಿತ ಮತ್ತು ಸಾಧನೆಯನ್ನು ಬಹುವಾಗಿ ಹೊಗಳಿದರು.

ರಾಜ್ಯದ ಕಟ್ಟಕಡೆಯ ವ್ಯಕ್ತಿ ಕೂಡಾ ಸಮಗ್ರ ಅಭಿವೃದ್ಧಿ ಕಾಣಬೇಕು. ರಾಜ್ಯದ ಜನರು ಆರೋಗ್ಯವಂತರಾಗಿ ಮತ್ತು ಸಂಪದ್ಭರಿತ ವ್ಯಕ್ತಿಗಳಾಗಿ ಇರಬೇಕು ಎಂಬುದು ನನ್ನ ಆಶಯ. ಈ ನಿಟ್ಟಿನಲ್ಲಿಯೇ ನಾನು ಆಡಳಿತ ನಡೆಸುತ್ತಿದ್ದೇನೆ. ಬಸವರಾಜ ಬೊಮ್ಮಾಯಿ ಜನಸಾಮಾನ್ಯರ ಮುಖ್ಯಮಂತ್ರಿಯಾಗಿದ್ದರು(Chief Minister) ಎಂದೇ ಎಂದಿಗೂ ಜನ ಗುರುತಿಸುವಂತಾಗಬೇಕು. ಅಂಥ ಆಡಳಿತ ನೀಡಬೇಕು ಎನ್ನುವುದೇ ನನ್ನ ಸಂಕಲ್ಪ ಎಂದು ಸಿಎಂ ಕಾರ್ಯಕ್ರಮದಲ್ಲಿ ಹೇಳಿದರು.

ಪ್ರಸಕ್ತ ತಲಾದಾಯದಲ್ಲಿ ಕರ್ನಾಟಕ ದೇಶದಲ್ಲಿ(India) 3ನೇ ಸ್ಥಾನದಲ್ಲಿದೆ. ರಾಜ್ಯದ ಶೇ.30-33ರಷ್ಟು ಜನರು ಈ ಪ್ರಗತಿಗೆ ಕಾರಣರಾಗಿದ್ದಾರೆ. ರಾಜ್ಯದ ಪ್ರಗತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯನ್ನೂ ಪಾಲದಾರನನ್ನಾಗಿ ಮಾಡಬೇಕು. ತಲಾದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪಾಲು ಇರಬೇಕು ಎಂಬುದು ನನ್ನ ಕನಸು ಎಂದ ಸಿಎಂ ಬೊಮ್ಮಾಯಿ

ಉದ್ಯೋಗದಲ್ಲಿ(Jobs) ಮೀಸಲು(Reservation) ಕಲ್ಪಿಸುವುದು ರಾಜಕೀಯ(Politics) ಉದ್ದೇಶಕ್ಕಾಗಿ ಅಲ್ಲ. ಆಡಳಿತದಲ್ಲಿ ಆರ್ಥಿಕತೆ ಮತ್ತು ಸಾಮಾಜಿಕ ಸಮತೋಲನ ಅಗತ್ಯ. ಉತ್ತಮ ಆರ್ಥಿಕ ತಜ್ಞ ಅಥವಾ ಉತ್ತಮ ಆಡಳಿತಗಾರ ಯಾವಾಗಲೂ ಒಮ್ಮೆಗೆ ಎರಡು ಕುದುರೆ ಏರಿ ಮುಂದೆ ಸಾಗಬೇಕು. ಒಂದು ಕಾರ್ಯಕ್ಷಮತೆಗೆ, ಮತ್ತೊಂದು ಸಮಾನತೆಗಾಗಿ. ನಾನು ಎರಡೂ ಕುದುರೆಗಳನ್ನು ಏರಿ ಒಂದೇ ದಿಕ್ಕಿನಲ್ಲಿ, ಒಂದೇ ವೇಗದಲ್ಲಿ ಸಾಗಬೇಕಿದೆ. ಇದು ಈ ದೇಶದ ಸವಾಲು ಎಂದು ಬೊಮ್ಮಾಯಿ ಹೇಳಿದರು.

ಇತ್ತೀಚಿನ ಹಾನಗಲ್‌ ಉಪಚುನಾವಣೆಯ(Hanagal Byelection) ಫಲಿತಾಂಶ, ಕಾಂಗ್ರೆಸ್‌(Congress) ಗೆಲುವಲ್ಲ. ಅದು ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ಎಂದು ಬೊಮ್ಮಾಯಿ ಪುನರುಚ್ಚರಿಸಿದರು.

click me!