Published : Jul 13, 2025, 10:15 AM ISTUpdated : Jul 13, 2025, 10:33 AM IST
ಚೆನ್ನೈನಿಂದ ಬೆಂಗಳೂರಿಗೆ ಇಂಧನ ಸಾಗಿಸುತ್ತಿದ್ದ ರೈಲು ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬೆಂಕಿ ತಗುಲಿದ್ದು, ರೈಲು ಸಂಚಾರದಲ್ಲಿ ಅಡಚಣೆಯಾಗಿದೆ. ವಂದೇ ಭಾರತ್ ಸೇರಿ 29 ರೈಲುಗಳ ಸಂಚಾರ ರದ್ದುಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ರದ್ದಾದ ರೈಲಿನ ವಿವರ ಇಲ್ಲಿದೆ..
ತಿರುವಳ್ಳೂರು (ಜು.13): ಇಂಧನ ಸಾಗಿಸುತ್ತಿದ್ದ ರೈಲ್ವೆ ಗೂಡ್ಸ್ ಟ್ಯಾಂಕರ್ವೊಂದಕ್ಕೆ ಇಂದು ಬೆಳಿಗ್ಗೆ ತಿರುವಳ್ಳೂರು ರೈಲು ನಿಲ್ದಾಣದ ಬಳಿ ಬೆಂಕಿ ತಗುಲಿದೆ. ಈ ಘಟನೆ ರೈಲು ಸಂಚಾರದಲ್ಲಿ ಭಾರೀ ಅಡಚಣೆಯನ್ನುಂಟು ಮಾಡಿದ್ದು, ಕಚೇರಿ ವ್ಯವಹಾರಗಳು, ವ್ಯಾಪಾರೋದ್ಯಮ ಹಾಗೂ ಸಾಮಾನ್ಯ ಪ್ರಯಾಣಿಕರು ಪರದಾಡುತ್ತಿದ್ದಾರೆ.
210
ಚೆನ್ನೈನಿಂದ ಬೆಂಗಳೂರಿಗೆ ಇಂಧನವನ್ನು ಸಾಗಿಸುತ್ತಿದ್ದ ರೈಲು ಈ ಅಪಘಾತಕ್ಕೆ ಒಳಗಾಗಿದೆ. ಬೆಳಿಗ್ಗೆ ಜಾವ ಈ ಘಟನೆ ಬೆಳಕಿಗೆ ಬಂದಿದ್ದು, ಟ್ಯಾಂಕರ್ಗೂ ರೈಲು ಹಳಿಗಳಿಗೂ ದಟ್ಟ ಹೊಗೆ ಹರಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಸ್ಥಳಕ್ಕೆ ತಕ್ಷಣವೇ ರೈಲ್ವೆ ಅಧಿಕಾರಿಗಳು, ಅಗ್ನಿಶಾಮಕ ಮತ್ತು ತುರ್ತು ರಕ್ಷಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಕಿಯ ಮೂಲ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಭದ್ರತಾ ಕ್ರಮವಾಗಿ ದಕ್ಷಿಣ ರೈಲ್ವೆ ಕೆಲ ಪ್ರಮುಖ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.
ಈ ಮಧ್ಯೆ, ಬೆಂಗಳೂರು, ಮೈಸೂರು ಮತ್ತು ಕೊಯಮತ್ತೂರಿಗೆ ಹೋಗಬೇಕಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆ ಎದುರಾಗಿದ್ದು, ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಪ್ರಯಾಣಿಕರ ಕಂಡುಬಂದಿದೆ. ದಕ್ಷಿಣ ರೈಲ್ವೆಯ ಅಧಿಕೃತ ಮಾಹಿತಿ ಪ್ರಕಾರ, ಅಗ್ನಿಯನ್ನು ನಿಯಂತ್ರಣಕ್ಕೆ ತರುವ ಕಾರ್ಯ ನಡೆಯುತ್ತಿದೆ ಮತ್ತು ಹೆಚ್ಚಿನ ಅನಾಹುತವನ್ನು ತಪ್ಪಿಸಲಾಗಿದೆ.
510
ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲವೆಂಬ ಮಾಹಿತಿ ದೊರಕಿದೆ. ಇನ್ನು ಅಕ್ಕಪಕ್ಕದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ. ಬೆಂಕಿಯ ಕೆನ್ನಾಲಿಗೆಗೆ ಟ್ಯಾಂಕರ್ಗಳು ಸ್ಪೋಟಗೊಂಡಿದ್ದು, ಇಂಧನ ಅಕ್ಕಪಕ್ಕದ ತಗ್ಗು ಜನವಸತಿ ತಗ್ಗು ಪ್ರದೇಶಗಳಿಗೆ ಹರಿದುಹೋಗಿ ಹಾನಿಯಾಗಿದೆ.
610
ರೈಲು ಅಪಘಾತಕ್ಕೆ ಕಾರಣ:
ಚೆನ್ನೈ ಬಂದರಿನಿಂದ ಇಂಧನ ಸಾಗಿಸುತ್ತಿದ್ದ ಸರಕು ರೈಲು ತಿರುವಳ್ಳೂರು ಬಳಿ ಹಠಾತ್ತನೆ ಹಳಿತಪ್ಪಿದೆ. ಇದರಿಂದಾಗಿ ರೈಲಿಗೆ ಬೆಂಕಿ ತಗುಲಿದೆ. ಬೆಂಕಿ ಹೊತ್ತಿಕೊಂಡ ಕಾರಣ ಘಟನಾ ಸ್ಥಳದ ಸುತ್ತಮುತ್ತ ಭಾರಿ ಹೊಗೆ ಆವರಿಸಿದೆ. ರೈಲಿನಲ್ಲಿ ಸಾಕಷ್ಟು ಇಂಧನ ಇರುವುದರಿಂದ ಬೆಂಕಿ ಮತ್ತಷ್ಟು ಹರಡುವ ಭೀತಿ ಎದುರಾಗಿತ್ತು.
710
29 ರೈಲುಗಳ ಕಾರ್ಯಾಚರಣೆ ಸ್ಥಗಿತ:
ಅನೇಕ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ. ತಿರುವಳ್ಳೂರು ಮಾರ್ಗದಲ್ಲಿ ಸಂಪೂರ್ಣ ರೈಲು ಓಡಾಟ ಬಂದ್ ಮಾಡಲಾಗಿದೆ. ಈ ಮಾರ್ಗವಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಿದ್ದ 13 ರೈಲು ಹಾಗೂ ತಮಿಳುನಾಡಿಗೆ ಈ ಭಾಗದಲ್ಲಿ ಸಂಚಾರ ಮಾಡಬೇಕಿದ್ದ 16 ರೈಲುಗಳ ಕಾರ್ಯಚರಣೆ ಸ್ಥಗಿತ ಮಾಡಲಾಗಿದೆ. ಬೇರೆ ಬೇರೆ ಮಾರ್ಗಗಳ ಮೂಲಕ ಕಾರ್ಯಚರಣೆ ಮಾಡಲಾಗಿದೆ. ಬೆಂಗಳೂರಿಗೆ ಬರಬೇಕಿದ್ದ ರೈಲುಗಳ ಮಾರ್ಗ ಕೂಡ ಬದಲಾವಣೆ ಮಾಡಲಾಗಿದೆ.
810
ರೈಲು ಬೋಗಿಗಳನ್ನು ಬಿಚ್ಚಿ ಹಿಂದಕ್ಕೆ ತಳ್ಳಿದ ಜನರು
ಇಲ್ಲಿಯವರೆಗೆ 5 ಬೋಗಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಉಳಿದಂತೆ ತಿರುವಳ್ಳೂರು ಸ್ಥಳೀಯರು ಹಾಗೂ ರೈಲ್ವೆ ಸಿಬ್ಬಂದಿ ಸೇರಿ ರೈಲಿನ ಇತರೆ ಬೋಗಿಗಳನ್ನು ಬಿಚ್ಚಿ ಹಿಂದಕ್ಕೆ ತಳ್ಳುವ ಮೂಲಕ ರೈಲು ಹೆಚ್ಚು ಬೆಂಕಿ ಆವರಿಸುವುದನ್ನು ತಡೆದಿದ್ದಾರೆ.
910
ಸ್ಥಳೀಯ ಮನೆಗಳ ಗ್ಯಾಸ್ ಸಿಲಿಂಡರ್ ಸಂಪರ್ಕ ಕಟ್:
ತಿರುವಳ್ಳೂರು ಜಿಲ್ಲಾಧಿಕಾರಿ ಪ್ರತಾಪ್ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಅಪಘಾತದಲ್ಲಿ ಇಲ್ಲಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ರಕ್ಷಣಾ ಕಾರ್ಯಾಚರಣೆಗಾಗಿ ಹೆಚ್ಚುವರಿಯಾಗಿ ಅರಕ್ಕೋಣಂನಿಂದ ವಿಪತ್ತು ಪರಿಹಾರ ತಂಡಗಳ ಆಗಮಿಸಿವೆ. ಅಪಘಾತ ಸ್ಥಳದ ಬಳಿಯ ಮನೆಗಳಲ್ಲಿನ ಸಿಲಿಂಡರ್ಗಳನ್ನು ಸುರಕ್ಷತಾ ಕಾರಣಗಳಿಗಾಗಿ ತೆಗೆದು ಹಾಕಲಾಗುತ್ತಿದೆ.
1010
ರೈಲುಗಳ ಮಾರ್ಗ ಬದಲಾವಣೆ:
ಸದ್ಯ ಬೆಂಗಳೂರಿಗೆ ಬರಬೇಕಿದ್ದ ಮೂರು ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ. ಮೈಸೂರಿಗೆ ಬರಬೇಕಿದ್ದ ಶತಬ್ದಿ ಎಕ್ಸ್ ಪ್ರೆಸ್ ಹಾಗೂ ವಂದೇ ಭಾರತ್ ರೈಲು ಮಾರ್ಗ ಬದಲಾವಣೆ ಮಾಡಲಾಗಿದೆ. ಯಶವಂತಪುರಕ್ಕೆ ಬರಬೇಕಿದ್ದ ಲಕ್ನೋ ಯಶವಂತಪುರ ಎಕ್ಸ್ಪ್ರೆಸ್ SMVT -2 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ರೈಲುಗಳನ್ನು ಪೆರಂಬೂರು ಮಾರ್ಗದ ಮೂಲಕ ಬೆಂಗಳೂರಿಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ