ಲಕ್ಷ್ಮೇಶ್ವರದಲ್ಲಿ ಜೋರಾಗಿ ನಡೀತಿದೆ ಅಕ್ರಮ ಮರಳು ದಂಧೆ!

By Web DeskFirst Published Oct 16, 2019, 10:39 AM IST
Highlights

ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ ಇದು ಹಬ್ಬ| ಎಡಬಿಡದೆ ಸುರಿದ ಮಳೆಗೆ ಹಳ್ಳದಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದೆ| ಇದು ಅಕ್ರಮ ಮರಳು ಗಣಿಗಾರಿಕೆ ಮಾಡುವವರ ಪಾಲಿಗೆ ಸ್ವರ್ಗವಾಗಿದೆ| ದೊಡ್ಡ ಹಳ್ಳ ಬಟ್ಟೂರ, ಅಕ್ಕಿಗುಂದ, ಗೊಜನೂರ, ಚೆನ್ನಪಟ್ಟಣ, ಶೆಟ್ಟಿಕೇರಿ, ಪು. ಬಡ್ನಿ, ಅಮರಾಪುರ, ಹಿರೇಮಲ್ಲಾಪುರ, ಹುಲ್ಲೂರು, ಬೂದಿಹಾಳ, ಕೊಂಚಿಗೇರಿ, ಕೋಗನೂರ, ಹೆಬ್ಬಾಳ ಮೂಲಕ ತುಂಗಭದ್ರಾ ಒಡಲನ್ನು ಕೂಡಿಕೊಳ್ಳುತ್ತದೆ| 

ಅಶೋಕ ಸೊರಟೂರು

ಲಕ್ಷ್ಮೇಶ್ವರ[ಅ.16]: ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ವ್ಯಾಪ್ತಿಯ ಹಳ್ಳಗಳಿಂದ ನಿತ್ಯವೂ ಅಕ್ರಮವಾಗಿ ಮರಳನ್ನು ಎತ್ತಿ ಟ್ರಕ್ ಮತ್ತು ಟ್ರ್ಯಾಕ್ಟರ್‌ಗಳ ಮೂಲಕ ರಾತ್ರಿ ವೇಳೆ ಸಾಗಿಸುವ ದಂಧೆ ಜೋರಾಗಿ ನಡೆದಿದೆ.

ಕಳೆದ 2 ತಿಂಗಳಿಂದ ಸುರಿಯುತ್ತಿರುವ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ ಇದು ಹಬ್ಬ. ಎಡಬಿಡದೆ ಸುರಿದ ಮಳೆಗೆ ಹಳ್ಳದಲ್ಲಿ ಸಾಕಷ್ಟು ಮರಳು ಸಂಗ್ರಹವಾಗಿದ್ದು, ಇದು ಅಕ್ರಮ ಮರಳು ಗಣಿಗಾರಿಕೆ ಮಾಡುವವರ ಪಾಲಿಗೆ ಸ್ವರ್ಗವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಲೂಕಿನಲ್ಲಿ ಹರಿಯುತ್ತಿರುವ ದೊಡ್ಡ ಹಳ್ಳ ಬಟ್ಟೂರ, ಅಕ್ಕಿಗುಂದ, ಗೊಜನೂರ, ಚೆನ್ನಪಟ್ಟಣ, ಶೆಟ್ಟಿಕೇರಿ, ಪು. ಬಡ್ನಿ, ಅಮರಾಪುರ, ಹಿರೇಮಲ್ಲಾಪುರ, ಹುಲ್ಲೂರು, ಬೂದಿಹಾಳ, ಕೊಂಚಿಗೇರಿ, ಕೋಗನೂರ, ಹೆಬ್ಬಾಳ ಮೂಲಕ ತುಂಗಭದ್ರಾ ಒಡಲನ್ನು ಕೂಡಿಕೊಳ್ಳುತ್ತದೆ. ಈ ಹಳ್ಳ ಅಕ್ರಮ ಮರಳು ಗಣಿಗಾರಿಕೆ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ.

ಕಂದಾಯ ಇಲಾಖೆಗೆ ಸೇರಿದ ಈ ಹಳ್ಳದಲ್ಲಿನ ಮರಳನ್ನು ಗಣಿ ಮತ್ತು ಭೂಗರ್ಭ ಇಲಾಖೆಯು ಟೆಂಡರ್ ಮೂಲಕ ಹಲವರಿಗೆ ಗುತ್ತಿಗೆ ನೀಡಿದ್ದರೂ ಅಕ್ರಮ ಮರಳು ಗಣಿಗಾರಿಕೆ ನಿಲ್ಲದಿರುವುದು ಸೋಜಿಗದ ಸಂಗತಿ. 

ರಾಜಾರೋಷವಾಗಿ ಸಾಗಾಟ: 

ನಿತ್ಯ ನೂರಾರು ಟ್ರಕ್ ಮತ್ತು ಟ್ರ್ಯಾಕ್ಟ್‌ರಗಳಲ್ಲಿ ಪೊಲೀಸರ ಕಣ್ತಪ್ಪಿಸಿಯೋ ಅಥವಾ ಅವರಿಗೆ ಗೊತ್ತಿದ್ದೋ ಪಟ್ಟಣದ ಪೊಲೀಸ್ ಠಾಣೆಯ ಕೂಗಳತೆಯಲ್ಲಿ ಹುಬ್ಬಳ್ಳಿ ಮತ್ತಿತರ ಕಡೆಗೆ ಸಾಗಾಟವಾಗುತ್ತಿದೆ. ಈ ಕುರಿತು ಸಾರ್ವಜನಿಕರು ಹಲವು ಬಾರಿ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಮಾರು 30-40 ಟನ್ ಸಾಮರ್ಥ್ಯದ ಟಿಪ್ಪರ್‌ಗಳಲ್ಲಿ ಜೆಲ್ಲಿ ಕಲ್ಲು ಹಾಗೂ ಎಂ ಸ್ಯಾಂಡ್ ಮತ್ತು ಮರಳನ್ನು ಸಾಗಾಟ ಮಾಡುತ್ತಿರುವುದರಿಂದ ಉತ್ತಮವಾಗಿದ್ದ ರಸ್ತೆಗಳೆಲ್ಲ ತಗ್ಗು ಗುಂಡಿಗಳಾಗಿ ಮಾರ್ಪಟ್ಟಿವೆ. ಇಂತಹ ರಸ್ತೆಗಳಲ್ಲಿ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು. 

ಈ ಬಗ್ಗೆ ಮಾತನಾಡಿದ ತಾಪಂ ಮಾಜಿ ಸದಸ್ಯ ಸುಭಾಷ ಬಟಗುರ್ಕಿ ಅವರು, ಅಕ್ರಮ ಮರಳು ಮಾರಾಟ ಮಾಡುವ ದಂಧೆ ತಾಲೂಕಿನ ಸುತ್ತಮುತ್ತ ಜೋರಾಗಿ ಸಾಗಿದ್ದು, ತಾಲೂಕಿನ ಹಳ್ಳಗಳಿಂದ ಎಗ್ಗಿಲ್ಲದೆ ಮರಳನ್ನು ಎತ್ತುತ್ತಿರುವುದರಿಂದ ಹಳ್ಳಗಳಲ್ಲಿ ಹನಿ ನೀರು ನಿಲ್ಲದಾಗಿದೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. 

click me!