Mythology: ಸ್ತ್ರೀಗೇ ರತಿ ಸುಖ ಹೆಚ್ಚೆಂದು ಹೆಣ್ಣಾಗೇ ಇರಲು ಇಷ್ಟ ಪಟ್ಟ ರಾಜ! ಏನಿವನ ಕತೆ?

By Suvarna NewsFirst Published Feb 21, 2023, 3:37 PM IST
Highlights

ಈ ರಾಜ ಅಚಾನಕ್ ಹೆಣ್ಣಾದ. ನಂತರದಲ್ಲಿ ಪುರುಷನಾಗುವ ಅವಕಾಶ ಸಿಕ್ಕರೂ ತಾನು ಹೆಣ್ಣಾಗಿಯೇ ಹೆಚ್ಚು ಸುಖವಾಗಿದ್ದೇನೆ, ಬದಲಾಗುವುದಿಲ್ಲ ಎಂದ.. ಯಾರು ಈ ರಾಜ? ಏನಿವನ ಕತೆ?


ಈ ಕತೆ ನಳ ಚರಿತ್ರೆಯದು. ಒಬ್ಬ ರಾಜನಿದ್ದ. ಅವನ ಹೆಸರು ಭಂಗಾಸ್ವನ. ಅವನಿಗೆ ಮಕ್ಕಳಿಲ್ಲದ ಕಾರಣ ಹಿರಿಯರ ಅಣತಿಯಂತೆ ಅಗ್ನಿಸ್ತೋಮ ಎಂಬ ಯಾಗ ಮಾಡಿದ. ಈ ಯಾಗದ ಫಲವಾಗಿ ಆತನಿಗೆ 100 ಮಕ್ಕಳಾದರು. ಇಷ್ಟೊಂದು ದೊಡ್ಡ ಸಂತತಿಯ ಈ ರಾಜ ಎಲ್ಲರಿಗಿಂತ ಹೆಚ್ಚು ಬಲಿಷ್ಠನಾಗುತ್ತಾನೆ ಎಂಬ ಭಯ ದೇವಲೋಕದ ಇಂದ್ರನಿಗೆ ಕಾಡತೊಡಗಿತು. ಅವನು ಭಂಗಾಸ್ವನನನ್ನು ಏನಾದರೂ ಮಾಡಿ ಹಣಿಯಬೇಕೆಂದು ಬಯಸಿದ.

ಒಮ್ಮೆ ಭಂಗಾಸ್ವನ ಭೇಟೆಗೆ ಹೋದಾಗ ಕಾಡಿನಲ್ಲಿ ಬಹಳ ದೂರ ತೆರಳಿಬಿಟ್ಟ. ಬೇಟೆ ಸಿಗಲಿಲ್ಲ. ಏಕಾಂಗಿಯಾಗಿ ಕುದುರೆಯ ಮೇಲೆ ಮತ್ತಷ್ಟು ಸುತ್ತಾಡಿ ಪೂರ್ತಿ ಸುಸ್ತಾದ. ಅಷ್ಟರಲ್ಲಿ ದೂರದಲ್ಲೊಂದು ಸರೋವರ ಕಾಣಿಸಿತು. ಕೂಡಲೇ ಅದರತ್ತ ಕುದುರೆಯೊಂದಿಗೆ ತೆರಳಿದ ಭಂಗಾಸ್ವನ, ಅದರ ಮೈ ತೊಳೆದು ನೀರು ಕುಡಿಸಿ ಅದನ್ನೊಂದು ಮರಕ್ಕೆ ಕಟ್ಟಿ ಹಾಕಿದ. ನಂತರ ತಾನು ಆ ಸರೋವರದಲ್ಲಿ ಮಿಂದೆದ್ದ. ಏನಾಶ್ಚರ್ಯ! ಅವನು ಹೆಂಗಸಾಗಿ ಬಿಟ್ಟ!

Latest Videos

ಕೊಂಚ ಹೊತ್ತು ತನ್ನ ಸ್ಥಿತಿಯ ಬಗ್ಗೆ ಯೋಚಿಸಿದ ಭಂಗಾಸ್ವನ ಸಾವರಿಸಿಕೊಂಡು ಕುದುರೆಯೇರಿ ರಾಜ್ಯಕ್ಕೆ ಮರಳಿದ. ಗಂಡಾಗಿ ಕಾಡಿಗೆ ಹೋಗಿ ಹೆಣ್ಣಾಗಿ ಹಿಂದಿರುಗಿದ ರಾಜನನ್ನು ನೋಡಿ ಆತನ ಪತ್ನಿ, ಮಕ್ಕಳು, ಪ್ರಜೆಗಳೆಲ್ಲರಿಗೂ ಆಶ್ಚರ್ಯವಾಯಿತು. ಆಗ ತನಗೇನಾಯಿತು ಎಂಬುದನ್ನು ವಿವರಿಸಿದ ಆತ, ಮಕ್ಕಳಿಗೆ ರಾಜ್ಯದ ಆಡಳಿತ ಚುಕ್ಕಾಣಿ ಒಪ್ಪಿಸಿ ತಾನು ಕಾಡಿಗೆ ತೆರಳಿ ಬಿಟ್ಟ. 

ಕಾಡಿನಲ್ಲಿದ್ದಾಗ ಒಬ್ಬ ಯುವ ತಪಸ್ವಿಯತ್ತ ಹೆಣ್ಣಾಗಿದ್ದ ಭಂಗಾಸ್ವನೆ ಆಕರ್ಷಿತಳಾದಳು. ನಂತರ ಅವರ ನಡುವೆ ಪ್ರೇಮಾಂಕುರವಾಗಿ ಅವರಿಬ್ಬರೂ ಆಶ್ರಮದಲ್ಲಿ ಸಂತೋಷವಾಗಿದ್ದರು. ಈ ಸಂದರ್ಭದಲ್ಲಿ ಈ ದಂಪತಿಗೆ ಮತ್ತೆ 100 ಮಕ್ಕಳು ಜನಿಸಿದರು. 

Shani Uday 2023: ಮಾರ್ಚ್‌ನಲ್ಲಿ ಈ 4 ರಾಶಿಗಳಿಗೆ ಶನಿಯ ದಯೆಯಿಂದ ಲಾಭ, ಸಂತೋಷ, ಅದೃಷ್ಟ..

ಭಂಗಾಸ್ವನೆ ಈ ಮಕ್ಕಳನ್ನು ಕರೆದುಕೊಂಡು ಹೋಗಿ ರಾಜ್ಯದಲ್ಲಿದ್ದ ತನ್ನ ಅರಮನೆಗೆ ಬಿಟ್ಟು, ಇವರೂ ರಾಜ ವಂಶಸ್ಥರೇ, ಅವರಂತೆಯೇ ಇಲ್ಲಿ ಬದುಕುತ್ತಾರೆ.. ಎಲ್ಲರೂ ಒಟ್ಟಾಗಿ ರಾಜ್ಯ ಆಳಬೇಕೆಂದು ಹೇಳಿ ಏಕಾಂಗಿಯಾಗಿ ಕಾಡಿಗೆ ಮರಳಿದಳು. 

ಈ 200 ಮಕ್ಕಳು ಒಗ್ಗಟ್ಟಾಗಿದ್ದುದನ್ನು ನೋಡಿ ಸಹಿಸಲು ದೇವೇಂದ್ರನಿಂದ ಸಾಧ್ಯವಾಗಲಿಲ್ಲ. ಆತ ಆ ಮಕ್ಕಳ ಮಧ್ಯೆ ಒಡಕು ತಂದಿಟ್ಟ. ಆ ಮಕ್ಕಳ ಮಧ್ಯೆಯೇ ದ್ವೇಷ ತುಂಬಿ ತುಳುಕಲು ಅವರವರೇ ಹೊಡೆದಾಡಿ ಸತ್ತು ಹೋದರು. ವಿಷಯ ತಿಳಿದ ಭಂಗಾಸ್ವನೆ ಅಳತೊಡಗಿದಳು. ಆಗ ದೇವೇಂದ್ರನಿಗೆ ತಾನು ಹಾಗೆ ಮಾಡಬಾರದಿತ್ತು ಎನಿಸಿತು. 

ಆತ ಭಂಗಾಸ್ವನೆಯ ಬಳಿ ಬಂದು, 'ನಿನ್ನ 200 ಮಕ್ಕಳಲ್ಲಿ 100 ಮಕ್ಕಳನ್ನು ಬದುಕಿಸಿಕೊಡುವೆ. ನೀನು ಪುರುಷನಾಗಿದ್ದಾಗ ಹುಟ್ಟಿದ 100 ಮಕ್ಕಳು ಬೇಕೋ, ಮಹಿಳೆಯಾದಾಗ ಹುಟ್ಟಿದ 100 ಮಕ್ಕಳು ಬೇಕೋ ನಿರ್ಧರಿಸಿ ಹೇಳು' ಎಂದ. 

ಆಗ ಭಂಗಾಸ್ವನೆಯ ತನ್ನ ಸ್ತ್ರೀರೂಪದಿಂದ ಜನಿಸಿದ ಮಕ್ಕಳು ಬದುಕಲಿ ಎಂದಳು. ದೇವೇಂದ್ರನಿಗೆ ಅಚ್ಚರಿಯಾಯಿತು. 'ಪುರುಷನಾಗಿದ್ದಾಗ ಹುಟ್ಟಿದ ಮಕ್ಕಳೂ ನಿನ್ನವೇ ಅಲ್ಲವೇ? ಅವರೇಕೆ ಬೇಡ?' ಎಂದು ಕೇಳಿದ. 

ಅದಕ್ಕೆ ಭಂಗಾಸ್ವನೆ 'ನನಗೆ ಅವಕಾಶವಿದ್ದರೆ ಎಲ್ಲ ಮಕ್ಕಳೂ ಬೇಕು. ಆದರೆ, ಸ್ತ್ರೀಯಾದಾಗ ನನಗೆ ಮಕ್ಕಳ ಮೇಲೆ ಮಮಕಾರ ಜಾಸ್ತಿಯಾಯಿತು. ತಾಯಿಗಿರುವಷ್ಟು ಪ್ರೀತಿ ತಂದೆಗಿರುವುದಿಲ್ಲ. ನಾನು ತಾಯಿಯಾಗಿದ್ದಾಗ ಹುಟ್ಟಿದ ಮಕ್ಕಳನ್ನು ಮುಂಚಿನ ಮಕ್ಕಳಿಗಿಂತ ಹೆಚ್ಚು ಪ್ರೀತಿಸುತ್ತೇನೆ. ಇದಕ್ಕೆ ನನ್ನ ದೇಹದಲ್ಲಾದ ಬದಲಾವಣೆಯಿಂದ ಮನಸ್ಸಿನಲ್ಲಾದ ಬದಲಾವಣೆಯೇ ಕಾರಣ' ಎಂದಳು.

ಈ ಮಾತು ಕೇಳಿ ಖುಷಿಯಾದ ದೇವೇಂದ್ರ ಎಲ್ಲ 200 ಮಕ್ಕಳನ್ನೂ ಬದುಕಿಸಿದ. ನಂತರ ಕುತೂಹಲದಿಂದ ಭಂಗಾಸ್ವನೆಗೆ ಕೇಳಿದ, 'ನಿನಗೆ ಇನ್ನೂ ಒಂದು ವರ ಕೊಡುವೆ, ಮತ್ತೆ ಪುರುಷನನ್ನಾಗಿ ಮಾಡುವೆ. ರಾಜ್ಯದ ಆಡಳಿತ ನೋಡಿಕೊಂಡಿರಬಹುದು' ಎಂದ.

ಈ ಬಾರಿ ಆರು ಯೋಗಗಳ ಸಂಯೋಗ Akshaya Tritiya 2023, ಚಿನ್ನ ಕೊಳ್ಳೋದು ಮಿಸ್ ಮಾಡ್ಬೇಡಿ!

ಅದಕ್ಕೆ ಭಂಗಾಸ್ವನೆಯು, 'ಇಲ್ಲ, ನನಗೆ ಹೆಂಗಸಾಗಿಯೇ ಇರಲು ಸಂತೋಷವಾಗುತ್ತಿದೆ. ಸ್ತ್ರೀಯಾದ ಮೇಲೆಯೇ ನನಗೆ ಸಮಾಗಮದಲ್ಲಿ ಅಧಿಕ ಸುಖ ಸಿಗುತ್ತಿದೆ, ಸ್ತ್ರೀತ್ವದಲ್ಲಿಯೇ ನಾನು ಹೆಚ್ಚಿನ ರತಿಸುಖವನ್ನು ಭಾವನಾತ್ಮಕವಾಗಿಯೂ, ದೈಹಿಕವಾಗಿಯೂ ಅನುಭವಿಸಿದ್ದೇನೆ, ಈ ಕಾರಣದಿಂದ ನಾನು ಹೆಂಗಸಾಗಿಯೇ ಇರುತ್ತೇನೆ' ಎಂದಳು.  

ಇಂದ್ರ ತಥಾಸ್ತು ಎಂದ. 

click me!