
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.23): ರಾಜ್ಯದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಚಿಕ್ಕಮಗಳೂರಿನ ಸೆಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿನಿ ಬೃಂದಾ 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿ ಕಾಫಿನಾಡಿಗೆ ಕೀರ್ತಿ ತಂದಿದ್ದಾರೆ. ಬೃಂದಾ ಅವರ ಈ ಐತಿಹಾಸಿಕ ಸಾಧನೆಯ ಹಿಂದೆ ತಂದೆಯ ಕಠಿಣ ದುಡಿಮೆ ಮತ್ತು ತಾಯಿಯ ನಿರಂತರ ಪ್ರಾರ್ಥನೆಯ ಬೆಂಬಲವಿದೆ.
ಹೆತ್ತವರ ಕನಸು ನನಸು: ಟೈಲರಿಂಗ್ ವೃತ್ತಿ ಮಾಡುತ್ತಿರುವ ಬೃಂದಾ ಅವರ ತಂದೆ ಮಂಜುನಾಥ್ ಮಗಳ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿದ್ದು, ಇಂದು ಮಗಳ ಸಾಧನೆಯಿಂದ ಅವರ ಪರಿಶ್ರಮಕ್ಕೆ ಸಾರ್ಥಕತೆ ಸಿಕ್ಕಂತಾಗಿದೆ. ಒಬ್ಬಳೆ ಮಗಳನ್ನು ಕಷ್ಟಪಟ್ಟು ಖಾಸಗಿ ಶಾಲೆಯಾದ ಸೆಂಟ್ ಮೇರಿಸ್ ನಲ್ಲಿ ಓದಿಸುತ್ತಿದ್ದರು.
ತಾಯಿ ಹರ್ಷಿಣಿ ಅವರು ಮಾತನಾಡುತ್ತಾ, ಮಗಳು ಎಲ್ಕೆಜಿಯಿಂದಲೂ ಓದಿನಲ್ಲಿ ಮುಂದಿದ್ದರೂ ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೇ ಪ್ರಥಮ ಬರಬೇಕೆಂಬುದು ಮಗಳು ಮತ್ತು ಶಾಲೆಯ ದೊಡ್ಡ ಕನಸಾಗಿತ್ತು, ಅದು ಇಂದು ನನಸಾಗಿದೆ ಎಂದು ಭಾವುಕರಾಗಿ ನುಡಿದರು. ಯಾವುದೇ ಪಠ್ಯವನ್ನು ಬಾಯಿಪಾಠ ಮಾಡದೆ, ವಿಷಯವನ್ನು ಅರ್ಥೈಸಿಕೊಂಡು ಓದುತ್ತಿದ್ದ ಬೃಂದಾ ಅವರ ಯಶಸ್ಸಿನಲ್ಲಿ ಶಾಲೆಯ ಶಿಕ್ಷಕರು ಹಾಗೂ ಗುರುಗಳಾದ ಮೀರಾ ಮತ್ತು ನಾಗೇಂದ್ರ ಅವರ ಮಾರ್ಗದರ್ಶನ ಬಹುಮುಖ್ಯವಾಗಿದೆ ಎಂದು ಅವರು ಸ್ಮರಿಸಿದರು.
ಬೃಂದಾ ಅವರು ತಮ್ಮ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಪೋಷಕರು, ಶಿಕ್ಷಕರು ಮತ್ತು ಶಾಲಾ ಮ್ಯಾನೇಜ್ಮೆಂಟ್ ನೀಡಿದ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ ಎಂದು ಸಂತಸ ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ನೀಡುತ್ತಿದ್ದ ವಿಶೇಷ ತರಬೇತಿ ಹಾಗೂ ಎಕ್ಸ್ಟ್ರಾ ಮೆಟೀರಿಯಲ್ಸ್ಗಳು ಕಲಿಕೆಗೆ ಸಹಕಾರಿಯಾಗಿದ್ದವು ಎಂದು ತಿಳಿಸಿದರು.
ಅಲ್ಲದೇ ಮುಂದೆ ಇಂಜಿನಿಯರ್ ಆಗುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ. ಶಾಲೆಯ ಮುಖ್ಯಸ್ಥರಾದ ಜೆರಾಲ್ಡ್ ಲೋಬೋ ಅವರು ಇಡೀ ತಂಡದ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಿದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಬೃಂದಾ ಅವರ ತಾಯಿ, ಸೋಲಿಗೆ ಅಂಜದೆ ತಮಗೆ ತಾವೇ ಚಾಲೆಂಜ್ ಹಾಕಿಕೊಂಡು ಸಾಧನೆ ಮಾಡಬೇಕೆಂದು ಕಿವಿಮಾತು ಹೇಳಿದ್ದಾರೆ.