ಸಾರಿಗೆ ಸಚಿವರೇ ಇಲ್ನೋಡಿ... ನಮ್ಮ ಭದ್ರತೆಗಾಗಿ ಮರಕಮದಿನ್ನಿ ಗ್ರಾಮಕ್ಕೊಂದು ಬಸ್‌ ಬಿಡಿ: ವಿದ್ಯಾರ್ಥಿನಿಯರ ಮನವಿ!

By Sathish Kumar KHFirst Published Jan 4, 2024, 10:16 PM IST
Highlights

ರಾಯಚೂರು ಜಿಲ್ಲೆಯ ಮರಕಮದಿನ್ನಿ ಗ್ರಾಮಕ್ಕೆ ಒಂದು ಬಸ್‌ ಸೇವೆ ಒದಗಿಸುವಂತೆ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ.

ರಾಯಚೂರು  (ಜ.04): ಮಹಿಳಾ ಸಬಲೀಕರಣಕ್ಕೆ ಹಾಗೂ ವಿದ್ಯಾರ್ಥಿನಿಯರು ಶಾಲಾ, ಕಾಲೇಜುಗಳಿಗೆ ಉಚಿತವಾಗಿ ಹೋಗಲು ಅನುಕೂಲ ಆಗುವಂತೆ ಕಾಂಗ್ರೆಸ್‌ ಸರ್ಕಾರ ಗ್ಯಾರಂಟಿ ಕೊಟ್ಟಂತೆ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿಕೊಂಡಿದ್ದಾರೆ. ಆದರೆ, ಕಲ್ಯಾಣ ಕರ್ನಾಟಕದ ಈ ಗ್ರಾಮಕ್ಕೆ ಈಗಲೂ ಬಸ್‌ ಸೌಲಭ್ಯವಿಲ್ಲದೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ಜೀವ ಭಯದಿಂದಲೇ ಕಾಲ್ನಡಿಗೆಯಲ್ಲಿ ರಾತ್ರಿ ವೇಳೆ ಮನೆಗೆ ಹೋಗುತ್ತಿದ್ದಾರೆ. ಈಗಲಾದರೂ ಬೆಂಗಳೂರಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಅಭಿವೃದ್ಧಿ ಗಮನದ ಜೊತೆಗೆ, ಕಲ್ಯಾಣ ಕರ್ನಾಟಕದತ್ತ ಗಮನಹರಿಸಿ ಒಂದು ಬಸ್‌ ಬಿಡಿ ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.

ಹೌದು, ಬಸ್ ಸೌಲಭ್ಯವಿಲ್ಲದೆ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳ ಗೋಳಾಟ ಹೇಳತೀರದಾಗಿದೆ. ಶಾಲೆಯಿಂದ ಮನೆಗೆ ಮರಳಲು ಕಗ್ಗತ್ತಲಲ್ಲಿ ವಿದ್ಯಾರ್ಥಿನಿಯರ ಕಾಲ್ನಡಿಗೆ ಮೂಲಕ ವಾಪಸ್ ಬರುತ್ತಿದ್ದಾರೆ. ರಾತ್ರಿ ಹೊತ್ತಿನಲ್ಲಿ ಕಾಲ್ನಡಿಗೆ ನಡೆದು ಮನೆಗೆ ಹೋಗ್ತೀರೋ ವಿದ್ಯಾರ್ಥಿನಿಯರನ್ನು ನೋಡಿದರೆ ಈ ಸರ್ಕಾರಕ್ಕೆ ಇನ್ನೂ ಕರುಣೆ ಬರುತ್ತಿಲ್ಲವೇ ಎಂದು ಹಿಡಿಶಾಪ ಹಾಕುವವರ ಪೋಷಕರ ಸಂಖ್ಯೆಯೂ ಹೆಚ್ಚಾಗಿತ್ತಿವೆ. ನಮ್ಮ ದೇಶ ಚಂದ್ರನ ಮೇಲೆ ಉಪಗ್ರಹ ಇಳಿಸುವಷ್ಟು ಬೆಳೆದಿದ್ದರೂ ಕಲ್ಯಾಣ ಕರ್ನಾಟಕದ ಗ್ರಾಮಕ್ಕೆ ಬಸ್‌ ಬಿಡಲು ಸಾಧ್ಯವಾಗುತ್ತಿಲ್ಲ ಎಂದರೆ ರಾಜ್ಯ ಸರ್ಕಾರಕ್ಕೆ ನಾಚಿಕೆ ಆಗಬೇಕು.

ಕಲಬುರಗಿ: ವಸತಿ ಶಾಲೆ, ಅಂಗನವಾಡಿ ಹುಳುಕು ಬಹಿರಂಗ..!

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮರಕಮದಿನ್ನಿ ಗ್ರಾಮದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (RMSA) ವಿದ್ಯಾರ್ಥಿಗಳು ಪ್ರತಿನಿತ್ಯ ಸಂಜೆ ಶಾಲೆಯಿಂದ ಮರಳಿ ಮನೆಗೆ ಬರುವಾಗ ನಡೆದುಕೊಂಡೇ ಬರಬೇಕಿದ್ದು, ಬರುವಾಗ ರಾತ್ರಿ ಹೊತ್ತಾಗುತ್ತದೆ. ಮಕ್ಕಳನ್ನು ಹೇಗಾದರೂ ಮಾಡಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಇಚ್ಛೆಪಡುವ ಪೋಷಕರಿಗೆ ಸರ್ಕಾರದಿಂದ ಒಂದು ಬಸ್‌ ಬಿಡಲು ಸಾಧ್ಯವಾಗುತ್ತಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆ ಬಿಟ್ಟ ನಂತರ ಮನೆಗೆ ಬರುವಾಗ ಭಯದಿಂದಲೇ ವಿದ್ಯಾರ್ಥಿನಿಯರು ಮನೆಗೆ ಬರುತ್ತಿದ್ದಾರೆ. ಹೀಗಾಗಿ, ನಾಲ್ಕೈದು ಜನರು ಕೈ-ಕೈ ಹಿಡಿದುಕೊಂಡು ನಡೆದು ಮನೆಗೆ ಸೇರುತ್ತಿದ್ದಾರೆ. ಇನ್ನು ಮರಕಮದಿನ್ನಿ ಗ್ರಾಮಕ್ಕೆ ಸರ್ಕಾರದಿಂದ ಬಸ್‌ ಬಿಡಲಾಗಿದ್ದರೂ ಅದು ಮಧ್ಯಾಹ್ನಕ್ಕೆ ಸ್ಥಗಿತವಾಗುತ್ತದೆ. ಮಧ್ಯಾಹ್ನದ ನಂತರ ಈ ಗ್ರಾಮಕ್ಕೆ ಒಂದೇ ಒಮದು ಬಸ್‌ ವ್ಯವಸ್ಥೆಯಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿನಿತ್ಯ ಮನೆಗೆ ಸೇರಬೇಕೆಂದರೆ ಕಾಲ್ನಡಿಗೆಯೇ ಆಧಾರವಾಗಿದೆ. ಇನ್ನು ಗ್ರಾಮದಲ್ಲಿ ಬಡಜನರಿಗೆ ಅನಾರೋಗ್ಯ ಕಾಡಿದರೂ ಸಾರಿಗೆ ವ್ಯವಸ್ಥೆಗಾಗಿ ಬೆಳಗ್ಗೆವರೆಗೆ ಜೀವ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬೇಕು. ಇಂತಹ ಪರಿಸ್ಥಿತಿಯ ಬಗ್ಗೆ ಅವಲೋಕಿಸಿ ಸಾರಿಗೆ ಸಚಿವರು ಒಂದು ಬಸ್‌ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.

ರಾಮ ಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯಗೇ ಆಹ್ವಾನ ಸಿಗದಿದ್ದರೂ, ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಿಕ್ಕಿದ್ಹೇಗೆ?

ಪ್ರತಿನಿತ್ಯ ಬೆಳಗ್ಗೆ 7.30ಕ್ಕೆ ಮನೆಯಿಂದ ಶಾಲೆಗೆ ಹೊರಡುವ ವಿದ್ಯಾರ್ಥಿಗಳು ಶಾಲೆಯಲ್ಲಿ ಸಾಮಾನ್ಯ ತರಗತಿಗಳು ಹಾಗೂ ಪರೀಕ್ಷೆಯ ಹಿನ್ನೆಲೆಯಲ್ಲಿ ವಿಶೇಷ ತರಗತಿಗಳನ್ನು ಮುಗಿಸಿ ಅಲ್ಲಿಂದ 6 ಗಂಟೆಗೆ ಹೊರಟರೂ ಮನೆಗೆ ತಲುಪುವಷ್ಟರಲ್ಲಿ ರಾತ್ರಿ 8 ಗಂಟೆಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮಗೆ ರಾತ್ರಿ ವೇಳೆಗೆ ಒಂದು ಬಸ್ ಬಿಡುವಂತೆ  ಮನವಿ ಮಾಡಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆಗೆ ವಿದ್ಯಾರ್ಥಿಗಳು ಹಲವು ಬಾರಿ ಮನವಿ ಮಾಡಿದರೂ ಆದಾಯದ ಮೇಲಷ್ಟೇ ಕಣ್ಣಿಟ್ಟಿರುವ ಸಾರಿಗೆ ಅಧಿಕಾರಿಗಳು ಮಾತ್ರ ವಿದ್ಯಾರ್ಥಿಗಳ ಮನವಿಗೆ ಕೇರ್‌ ಮಾಡುತ್ತಿಲ್ಲ. ಇದರಿಂದ ಸಾರಿಗೆ ಸಚಿವರು ಸೇರಿದಂತೆ. ಇಡೀ ಸಾರಿಗೆ ಇಲಾಖೆ ಸಿಬ್ಬಂದಿಗೆ ಹಿಡಿಶಾಪ ಹಾಕುತ್ತಾ ವಿದ್ಯಾರ್ಥಿಗಳು ನಿತ್ಯ ಕಾಲ್ನಡಿಗೆ ಮೂಲಕ ಓಡಾಡುತ್ತಿದ್ದಾರೆ.

click me!