ಪದ್ಮಶ್ರೀ ಹರೇಕಳ ಹಾಜಬ್ಬ ಸೇರಿ ಮೂರು ಕ್ಷೇತ್ರದ, ಮೂವರು ದಿಗ್ಗಜರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್

Published : Mar 27, 2026, 02:01 PM IST
Mangalore University honorary doctorate

ಸಾರಾಂಶ

ಮಂಗಳೂರು ವಿಶ್ವವಿದ್ಯಾಲಯವು ತನ್ನ 44ನೇ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ. ಶಿಕ್ಷಣ ಸೇವೆಗಾಗಿ ಪದ್ಮಶ್ರೀ ಹರೇಕಳ ಹಾಜಬ್ಬ, ಯಕ್ಷಗಾನ ಕ್ಷೇತ್ರಕ್ಕೆ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತನ ,ಶಿಕ್ಷಣಕ್ಕಾಗಿ ಡಾ. ರವೀಶ್ ಪಡುಮಲೆ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ. ಈ ಸಾಧಕರನ್ನು ಗೌರವಿಸುವ ಮೂಲಕ ವಿವಿಯು ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಎತ್ತಿ ಹಿಡಿದಿದೆ.

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯವು ತನ್ನ 44ನೇ ಘಟಿಕೋತ್ಸವದ ಅಂಗವಾಗಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ ಮೂವರು ಗಣ್ಯ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವುದಾಗಿ ಘೋಷಿಸಿದೆ. ಈ ಗೌರವಕ್ಕೆ ಅಕ್ಷರಸಂತ ಹರೇಕಳ ಹಾಜಬ್ಬ ಸೇರಿದಂತೆ ಯಕ್ಷಗಾನ ಕ್ಷೇತ್ರದ ದಿಗ್ಗಜ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತಕ ಡಾ. ರವೀಶ್ ಪಡುಮಲೆ ಆಯ್ಕೆಯಾಗಿದ್ದಾರೆ.

ಈ ಕುರಿತು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಅಧಿಕೃತ ಪ್ರಕಟಣೆ ನೀಡಿದ್ದು, ನಾಳೆ ನಡೆಯಲಿರುವ 44ನೇ ಘಟಿಕೋತ್ಸವ ಸಮಾರಂಭದಲ್ಲಿ ಈ ಗೌರವ ಡಾಕ್ಟರೇಟ್‌ಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹರೇಕಳ ಹಾಜಬ್ಬ – ಶಿಕ್ಷಣ ಸೇವೆಗೆ ಗೌರವ

ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಈ ಗೌರವ ಡಾಕ್ಟರೇಟ್ ಲಭಿಸಿದೆ. ಕಿತ್ತಳೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಹಾಜಬ್ಬ, ತಮ್ಮ ಗ್ರಾಮವಾದ ಮಂಗಳೂರಿನ ಹರೇಕಳ-ನ್ಯೂಪಡ್ಡು ಪ್ರದೇಶದಲ್ಲಿ ಶಾಲೆ ನಿರ್ಮಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ದಾರಿ ತೆರೆದವರು.

ಅವರ ಈ ಅಪೂರ್ವ ಸಾಧನೆಗೆ ಮಾನ್ಯತೆ ನೀಡಿ ಭಾರತ ಸರ್ಕಾರವು 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಮಂಗಳೂರು ವಿಶ್ವವಿದ್ಯಾಲಯವೂ ಅವರ ಸೇವೆಯನ್ನು ಕೊಂಡಾಡಿ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸುತ್ತಿದೆ.

ಯಕ್ಷಗಾನ ದಿಗ್ಗಜ ಸೂರಿಕುಮೇರು ಗೋವಿಂದ ಭಟ್‌ಗೆ ಮರಣೋತ್ತರ ಗೌರವ

ಇತ್ತೀಚೆಗೆ ನಿಧನರಾದ ಯಕ್ಷಗಾನ ಕ್ಷೇತ್ರದ ಮೇರು ಸಾಧಕ ಸೂರಿಕುಮೇರು ಗೋವಿಂದ ಭಟ್ (1938–2026) ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ತೆಂಕುತಿಟ್ಟು ಯಕ್ಷಗಾನ ಶೈಲಿಯಲ್ಲಿ ಅಪಾರ ಸಾಧನೆ ಮಾಡಿದ ಅವರು ಸುಮಾರು ಏಳು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದ್ದರು.

ಧರ್ಮಸ್ಥಳ ಮೇಳದಲ್ಲಿ ಐವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಗೋವಿಂದ ಭಟ್ ಅವರು ರಕ್ತಬೀಜ, ಕೌರವ ಮತ್ತು ಭೀಷ್ಮ ಪಾತ್ರಗಳ ಮೂಲಕ ಖ್ಯಾತಿ ಗಳಿಸಿದ್ದರು. ಇವರಿಗೆ 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಭಿಸಿದ್ದವು.

ದೈವ ನರ್ತಕ ಡಾ. ರವೀಶ್ ಪಡುಮಲೆಗೂ ಗೌರವ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೈವ ನರ್ತಕ ಡಾ. ರವೀಶ್ ಪಡುಮಲೆ ಅವರಿಗೆ ಕೂಡ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ. ಅವರು ಕೇವಲ ದೈವ ನರ್ತಕರಾಗಿಯೇ ಅಲ್ಲದೆ ಚಿಂತಕರು, ವಾಗ್ಮಿಗಳು ಹಾಗೂ ಶಿಕ್ಷಣ ತಜ್ಞರಾಗಿಯೂ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಉಜಿರೆಯ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯವು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಈ ಮೂವರು ಸಾಧಕರನ್ನು ಗೌರವಿಸುವ ಮೂಲಕ ಶಿಕ್ಷಣ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಮಹತ್ವವನ್ನು ಮತ್ತೆ ಒತ್ತಿ ಹೇಳಿದೆ. ಈ ಗೌರವವು ಸಾಧಕರಿಗೆ ಮಾತ್ರವಲ್ಲದೆ, ಸಮಾಜಕ್ಕೂ ಪ್ರೇರಣೆಯಾಗಲಿದೆ.

PREV
Read more Articles on
click me!

Recommended Stories

SSLC ಹಿಂದಿ ಪರೀಕ್ಷೆ ದಿನಾಂಕ ಮುಂದೂಡಿಕೆ ಬೆನ್ನಲ್ಲೇ ಹಿಂದಿ ಪರೀಕ್ಷೆ ವಿರುದ್ಧ ಕನ್ನಡ ಪರ ಸಂಘಟನೆಗಳ ಆಕ್ರೋಶ
1ನೇ ತರಗತಿ ಪ್ರವೇಶ: ವಯಸ್ಸಿನ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರ, ಶಿಕ್ಷಣ ಸಚಿವರ ಸ್ಪಷ್ಟನೆ