ಕುಂದಗೋಳ: ಅಕ್ಷರದ ಜ್ಞಾನ ಬಿತ್ತಿದ ಗುರುವಿಗೆ ವಂದಿಸುತ್ತಿದೆ ವಿದ್ಯಾರ್ಥಿ ಬಳಗ..!

By Kannadaprabha NewsFirst Published Oct 17, 2021, 9:12 AM IST
Highlights

*  ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮ 
*  ಹಳೆ ವಿದ್ಯಾರ್ಥಿಗಳ ಬಳಗದಿಂದ ಗುರುವಂದನೆ
*  ಇಂತಹ ಕಾರ್ಯಕ್ರಮದ ಮೂಲಕ ಗುರು- ಶಿಷ್ಯರ ನಡುವಿನ ಸಂಬಂಧ ಇನ್ನಷ್ಟು ಬೆಳೆಸಲು ಸಹಕಾರಿ
 

ಕುಂದಗೋಳ(ಅ.17):  ಜ್ಞಾನ ಧಾರೆ ಎರೆದ, ಅಕ್ಷರ ಬಿತ್ತಿ ಅಜ್ಞಾನದ ಅಂಧಕಾರ ಹೊಡೆದೋಡಿಸಿದ ನಿಸ್ವಾರ್ಥ ಜೀವಿ, ಕಲಿಸಿದ ಗುರುಗಳ(Guru) ಸ್ಮರಣೆಗೊಂದು ವೇದಿಕೆ ಸಿದ್ಧಗೊಂಡಿದೆ. ಹೌದು. ಧಾರವಾಡ(Dharwad) ಜಿಲ್ಲೆಯ ಕುಂದಗೋಳ(Kundgol) ತಾಲೂಕಿನ ಹರ್ಲಾಪುರದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು(Old Students) ತಮಗೆ ಜ್ಞಾನ ಧಾರೆ ಎರೆದ ಗುರುಗಳನ್ನು ವಂದಿಸುವ ಸಲುವಾಗಿ ಅವರೆಲ್ಲರಿಗೂ ಗುರುವಂದನಾ(Guruvandane) ಕಾರ್ಯಕ್ರಮವನ್ನು ಅ. 17ರಂದು ಗ್ರಾಮದಲ್ಲಿ ಹಮ್ಮಿಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆಯ(School) 14 ಜನ ಶಿಕ್ಷಕರು ಮತ್ತು ಪ್ರೌಢಶಾಲೆಯ 16 ಜನ ಶಿಕ್ಷಕರು(Teachers) ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿತರಾಗುತ್ತಿದ್ದಾರೆ(Honor). ಗುರುಗಳ ಸನ್ಮಾನಕ್ಕೆ ಶಿಷ್ಯ ಪಡೆ ಸನ್ನದ್ಧವಾಗಿದ್ದು, ಇದಕ್ಕಾಗಿ ಗ್ರಾಮದ ಸಾಂಸ್ಕೃತಿಕ ವೇದಿಕೆ ಕೂಡ ಸಿದ್ಧಗೊಂಡಿದೆ. ಮುಕ್ತಿಮಂದಿರದ ಶ್ರೀ ಷ.ಬ್ರ. ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹಾಗೂ ಬಾಳೇಹೊಸೂರಿನ ದಿಂಗಾಲೇಶ್ವರ ಮಠದ ಶ್ರೀದಿಂಗಾಲೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಹಾವೇರಿ ಡಯಟ್‌ನ ಉಪನ್ಯಾಸಕ ವಿ.ವಿ. ಸಾಲಿಮಠ ಉಪನ್ಯಾಸ ನೀಡಲಿದ್ದಾರೆ.

ಸವಿ ಸವಿ ನೆನಪು: 16 ವರ್ಷಗಳ ನಂತರ ಒಂದಾದ ಗುರು-ಶಿಷ್ಯರು!

ಏಕೆ ಈ ಕಾರ್ಯಕ್ರಮ?:

ಶಿಕ್ಷಣ(Education) ಪಡೆದುಕೊಂಡ ಶಾಲೆ ಎಂದರೆ ಎಲ್ಲರಿಗೂ ಹೆಮ್ಮೆ. ಅದರಂತೆ ಎದೆಗೆ ಅಕ್ಷರ ಬೀಜ ಬಿತ್ತಿ, ಜ್ಞಾನದ ಬೆಳಕು ನೀಡಿದ ಶಿಕ್ಷಕರ ಪಾತ್ರ ಎಂದಿಗೂ ಪ್ರಾತಃಸ್ಮರಣೀಯರು. ಅವರು ನೀಡಿದ ನಿಸ್ವಾರ್ಥ ಸೇವೆಗೆ ಯಾವ ಕಾಣಿಕೆಯೂ ಸಮವಲ್ಲ. ಈ ಹಿನ್ನೆಲೆಯಲ್ಲಿ ಹರ್ಲಾಪುರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೆಯ ಶಿಷ್ಯ ಬಳಗವು ತಮಗೆ ಕಲಿಸಿದ ಗುರುಗಳಿಗೆ ವಂದಿಸಬೇಕು ಎಂಬ ನಿರ್ಣಯ ಕೈಗೊಂಡಿತು. ಅದರ ಭಾಗವಾಗಿ ಗುರುವಿಗೆ ವಂದಿಸುವುದರ ಜತೆಗೆ ಅವರನ್ನು ಸ್ಮರಿಸುವ ಕೆಲಸವನ್ನೂ ಹಳೆಯ ಶಿಷ್ಯ ವೃಂದ ಈ ಕಾಯಕಕ್ಕೆ ಕೈ ಹಾಕಿದೆ.

ಶಾಲೆಯ ಇತಿಹಾಸ:

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹರ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಕಂಡ ಶಾಲೆಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ(Pre-Independence) ಅಂದರೆ 1884 ರಲ್ಲಿ ಪ್ರಾಥಮಿಕ ಶಾಲೆಯನ್ನು(Primary School) ಆರಂಭಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ ಸರಿಸುಮಾರು 135 ವರ್ಷಗಳು ಈ ಶಾಲೆಯ ಇತಿಹಾಸವನ್ನು(History) ಹೇಳುತ್ತಿದೆ. ಇಲ್ಲಿಯವರೆಗೆ ನೂರಾರು ಶಿಕ್ಷಕರು ಇಲ್ಲಿ ಸೇವೆ ಸಲ್ಲಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಜ್ಞಾನಾರ್ಜನೆಯನ್ನು(Knowledge) ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಒಂದು ಸಣ್ಣ ಕೋಣೆಯಲ್ಲಿ ಈ ಪ್ರಾಥಮಿಕ ಶಾಲೆ ಆರಂಭಗೊಂಡಿತು. ನಂತರ ಗ್ರಾಮದ ಹಿರಿಯರಾದ ಕೆಂಚಪ್ಪ ರಾಮಣ್ಣ ಬಂಡಿವಾಡ ಅವರು ತಮ್ಮ ಸ್ವಂತ ಜಮೀನಿನನ್ನು ಶಾಲೆ ಕಟ್ಟಿಸಲು ದಾನ ಮಾಡಿದರು.

ಈ ಹಿನ್ನೆಲೆಯಲ್ಲಿ ಅವರ ಹೆಸರನ್ನೇ ಈ ಶಾಲೆಗೆ ಇಡಲಾಗಿದ್ದು, 22.8.1971ರಲ್ಲಿ ಇವರ ಜಾಗದಲ್ಲಿ ಶಾಲೆ ಕಟ್ಟಡವನ್ನು ನಿರ್ಮಿಸಲಾಯಿತು. ಹೀಗಾಗಿ ಈ ಶಾಲೆಗೆ ಕೆಆರ್‌ಬಿ ಎಚ್‌ಪಿಎಸ್‌ (ಕೆಂಚಪ್ಪ ರಾಮಣ್ಣ ಬಂಡಿವಾಡ ಹಿರಿಯ ಪ್ರಾಥಮಿಕ ಸರ್ಕಾರ ಶಾಲೆ) ಎಂದೇ ಖ್ಯಾತಗೊಂಡಿತು. ಇಲ್ಲಿ ಜ್ಞಾನ ಪಡೆದುಕೊಂಡಿರುವ ಸಾವಿರಾರು ವಿದ್ಯಾರ್ಥಿಗಳು ಇಂದು ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 1993-94ರಲ್ಲಿ ಗ್ರಾಮದಲ್ಲಿ ಪ್ರೌಢ ಶಾಲೆ ಕೂಡ ಪ್ರಾರಂಭವಾಗಿದ್ದು, ಸುತ್ತಮುತ್ತಲಿನ ಸುಲ್ತಾನಪುರ, ಕಳಸ, ರಾಮಗೇರಿಯ ಹಲವಾರು ವಿದ್ಯಾರ್ಥಿಗಳು ಕೂಡ ಇಲ್ಲಿ ಜ್ಞಾನಾರ್ಜನೆ ಪಡೆದಿದ್ದಾರೆ.

ಜಿಆರ್’ವಿಗೆ ಲಕ್ಷ್ಮಣ್ ಗೌರವ, ಆಟೋಗ್ರಾಫ್’ನಲ್ಲಿ ’ವಿಶಿ’ಗೆ ಗುರುವಂದನೆ

ಶಿಕ್ಷಕ, ಕವಿಯೂ ಆಗಿದ್ದ ಸಿ.ಪಿ. ಉಮಚಗಿ ಅವರು ಈ ಶಾಲೆಯ ಬೆಳವಣಿಗೆಗೆ ಸಾಕಷ್ಟುಪರಿಶ್ರಮ ಪಟ್ಟರು. ಶಿಕ್ಷಕರಾಗಿ, ಕವಿಯಾಗಿ, ಮುಖ್ಯೋಪಾಧ್ಯಾಯರಾಗಿ ಇಲ್ಲಿಯೇ ಅವರು ಸೇವೆ ಸಲ್ಲಿಸಿದ್ದಾರೆ. ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರಿಂದ ಸಿ.ಪಿ.ಉಮಚಗಿ ಅವರಿಗೆ 1993-94ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು(Central Government) ರಾಷ್ಟ್ರ ಪ್ರಶಸ್ತಿಯನ್ನು(National Award) ನೀಡಿ ಗೌರವಿಸಿತು.

ಯಾರಾರ‍ಯರಿಗೆ ಸನ್ಮಾನ?:

ಪ್ರಾಥಮಿಕ ಶಾಲೆಯ ಸಿ.ಐ. ಕಮ್ಮಾರ, ಎನ್‌.ಓ. ಹಡಗಲಿ, ಎಚ್‌.ಎನ್‌. ಕಟ್ಟಿಮನಿ, ಐ.ಎಸ್‌. ಮಡಿವಾಳರ, ಎಂ.ಟಿ. ಹೂಗಾರ, ಜಿ.ವೈ. ಪಾಟೀಲ, ಆರ್‌.ಎಸ್‌. ಪಾಟೀಲ, ಎಂ.ಜಿ. ಜಾಡಗೌಡರ, ಎಚ್‌.ಎಚ್‌. ದನಾಕಟ್ಟವರ, ವಿ.ವಿ. ಅಂಗಡಿ, ಎ.ಎನ್‌. ಬಡಿಗೇರ, ಎಂ.ಎನ್‌. ಮರಾಠಿ, ಎ.ಕೆ. ಸಾಬಣ್ಣವರ, ನಾಗಮ್ಮ ಅಡರಕಟ್ಟಿ, ಎಸ್‌.ಬಿ. ಕಬನೂರ, ಎಸ್‌.ಎ. ಬಣಕಾರ ಅವರಿಗೆ ಸನ್ಮಾನಿಸಲಾಗುತ್ತಿದೆ. ಜತೆಗೆ ಪ್ರೌಢಶಾಲಾ ವಿಭಾಗದ ಯು.ಎಸ್‌. ಶಿರಹಟ್ಟಿಮಠ, ಎಂ.ಎನ್‌. ಬಡಿಗೇರ, ಎಂ.ಎಂ. ಹವಳದ, ಎಸ್‌.ವಿ. ಪತ್ತಾರ, ಎಸ್‌.ವಿ. ಕಟ್ಟಿ, ಸಿ.ಆರ್‌. ಕೆಂಚಕ್ಕನವರ, ಎಂ.ಎಸ್‌. ನಿಂಬಕ್ಕನವರ, ಆರ್‌.ಬಿ. ಕೂಡಬಾಳ, ಎಚ್‌.ವೈ. ಹುಬ್ಬಳ್ಳಿ, ಪಿ.ಎಂ. ದೀಕ್ಷಿತ್‌, ಸಾಂಬಯ್ಯ ಹಿರೇಮಠ, ಗಂಗಾಧರ ಅಂಗಡಿ, ಎಚ್‌.ಎಫ್‌. ಸುತಾರ, ಸಿ.ವಿ. ರಬಕವಿ, ಮಲ್ಲೇಶ ಫಕೀರಣ್ಣವರ, ಶಾರದಾ ದೊಡ್ಡಗಟ್ಟಿ, ಮಾಯಾ ರೊಡ್ರಿಕ್ಸ್‌, ಶೈಲಜಾ ಬಡಿಗೇರ ಅವರನ್ನು ಸನ್ಮಾನಿಸಲಾಗುತ್ತಿದೆ.

ಗುರು-ಶಿಷ್ಯರ ನಡುವೆ ಉತ್ತಮ ಬಾಂಧವ್ಯ ವೃದ್ಧಿಸಲು ಇಂತಹ ಕಾರ್ಯಕ್ರಮ ಎಲ್ಲರಿಗೂ ಪ್ರೇರಣೆಯಾಗಿದೆ. ಗುರುಗಳನ್ನು ಸ್ಮರಿಸುವ ಸಂಬಂಧ ಅವರನ್ನು ಸನ್ಮಾನಿಸುತ್ತಿರುವುದು ಶಿಷ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಅಂತ ಪಪೂ ಉಪನ್ಯಾಸಕ ಎಂ.ಎಸ್‌. ನಿಂಬಕ್ಕನವರ ತಿಳಿಸಿದ್ದಾರೆ.  

ಜ್ಞಾನಾರ್ಜನೆ ಮಾಡಿದ ಶಿಕ್ಷಕರನ್ನು ಸ್ಮರಿಸಿಕೊಳ್ಳುತ್ತಿರುವುದರ ಜತೆಗೆ ಸನ್ಮಾನವನ್ನೂ ಮಾಡುತ್ತಿರುವ ಶಿಷ್ಯ ಬಳಗದ ಕಾರ್ಯ ನಿಜಕ್ಕೂ ಸಂತಸದ ವಿಷಯ. ಇಂತಹ ಕಾರ್ಯಕ್ರಮದ ಮೂಲಕ ಗುರು- ಶಿಷ್ಯರ ನಡುವಿನ ಸಂಬಂಧವನ್ನು ಇನ್ನಷ್ಟು ಬೆಳೆಸಲು ಸಹಕಾರಿಯಾಗಲಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯರು ಎನ್‌.ಓ. ಹಡಗಲಿ ಹೇಳಿದ್ದಾರೆ.  

ಗುರುವಂದನೆ ಮಾಡಲು ಮುಂದಾಗಿರುವ ಹಳೆ ವಿದ್ಯಾರ್ಥಿ ಬಳಗದ ಕಾರ್ಯ ನಿಜಕ್ಕೂ ಶ್ಲಾಘನೀಯ. ತಮಗೆ ಜ್ಞಾನ ನೀಡಿದ ಶಿಕ್ಷಕರನ್ನು ನೆನಪಿಸಿಕೊಂಡು ಇಂತಹ ಕಾರ್ಯಕ್ರಮದ ಮೂಲಕ ಅವರನ್ನು ಸನ್ಮಾನಿಸುತ್ತಿರುವ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ನಿವೃತ್ತ ಶಿಕ್ಷಕ ಎಂ.ಎನ್‌. ಬಡಿಗೇರ ತಿಳಿಸಿದ್ದಾರೆ.  

ಶಿಷ್ಯರು ಉತ್ತಮ ನಾಗರಿಕರಾಗುವುದೇ ಗುರುವಿಗೆ ನೀಡುವ ಉನ್ನತ ಕಾಣಿಕೆ. ಅದಕ್ಕೆ ಸಾಕ್ಷಿಯೇ ಇಂತಹ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು. ಇದು ನಮಗೆ ಹೆಮ್ಮೆಯ ಮತ್ತು ಸಂತೋಷದ ವಿಷಯ ಎಂದು ನಿವೃತ್ತ ಶಿಕ್ಷಕ ಎಚ್‌.ಎಚ್‌. ದನಾಕಟ್ಟವರ ಹೇಳಿದ್ದಾರೆ. 


 

click me!