ಶಾಲೆ ಆರಂಭ ಬೇಡ, ಎಲ್ಲರನ್ನು ಪಾಸ್ ಮಾಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Oct 9, 2020, 7:37 AM IST
Highlights

ಕೊರೋನಾ ಭೀತಿಯ ನಡುವೆಯೇ ಶಾಲಾ ಆರಂಭಕ್ಕೆ  ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಈ ವರ್ಷ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್‌ ಮಾಡಲು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಅ.09): ಕೊರೋನಾ ಸೋಂಕು ತಾರಕಕ್ಕೇರಿರುವ ಇಂತಹ ಹೊತ್ತಿನಲ್ಲಿ ಪೋಷಕರು ಒಪ್ಪಿದರೂ ಶಾಲೆಗಳನ್ನು ತೆರೆಯಬಾರದು. ಶಾಲೆಗಳನ್ನು ತೆರೆಯಲು ಮುಂದಾದರೆ ನಾನು ಪ್ರಬಲವಾಗಿ ವಿರೋಧಿಸುತ್ತೇನೆ. ಶಾಲೆ ಆರಂಭ ವಿರೋಧಿಸಿ ಮಾಧ್ಯಮಗಳು ನಡೆಸುವ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ, ಅಗತ್ಯವಾದರೆ ಒಂದು ವರ್ಷ ಪರೀಕ್ಷೆ ಇಲ್ಲದೆಯೇ ಮುಂದಿನ ತರಗತಿಗೆ ಬಡ್ತಿ ಕೊಡಿ ಎಂದು ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಗಳನ್ನು ತೆರೆಯುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯಬಾರದು. ಅಗತ್ಯವಾದರೆ ಆನ್‌ಲೈನ್‌ ತರಗತಿಗಳನ್ನು ಮುಂದುವರೆಸಿ. ಎಲ್ಲರಿಗೂ ಆನ್‌ಲೈನ್‌ ತರಗತಿಗಳು ತಲುಪುತ್ತಿಲ್ಲ ಎಂದರೆ ಈ ವರ್ಷ ಹಾಗೆಯೇ ಮುಂದಿನ ತರಗತಿಗೆ ಬಡ್ತಿ ಕೊಡಿ. ಇದರಿಂದ ಆಕಾಶವೇನೂ ಬಿದ್ದು ಹೋಗುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ಪೋಷಕನಾಗಿ ಶಾಲೆ ಆರಂಭ ಬೇಡ ಅನ್ನುವೆ : ಪ್ರೀತಂ ಗೌಡ

‘ಕೊರೋನಾ ಸೋಂಕು ಈಗಲೂ ಏರುಗತಿಯಲ್ಲೇ ಸಾಗುತ್ತಿದೆ. ನಿತ್ಯ ಸರಾಸರಿ 10 ಸಾವಿರದಷ್ಟು ದಾಖಲೆಯ ಪ್ರಕರಣಗಳು ವರದಿಯಾಗುತ್ತಿವೆ. ಪರೀಕ್ಷೆ ಹೆಚ್ಚು ಮಾಡಿದರೆ ಸೋಂಕು ಮತ್ತಷ್ಟು ಪ್ರಮಾಣದಲ್ಲಿ ಹೆಚ್ಚಾಗಲಿದೆ. ಇಂತಹ ಸ್ಥಿತಿಯಲ್ಲಿ ಹಿರಿಯರು, ಬುದ್ಧಿ ಬಂದಿರುವವರೇ ಸೂಕ್ತವಾಗಿ ಮಾಸ್ಕ್‌ ಹಾಕುವುದು ಹಾಗೂ ಸಾಮಾಜಿಕ ಅಂತರ ಪಾಲಿಸುವುದನ್ನು ಮಾಡುತ್ತಿಲ್ಲ. ಇಂತಹ ಸಮಯದಲ್ಲಿ ಮಕ್ಕಳು ಮುನ್ನೆಚ್ಚರಿಕಾ ಕ್ರಮ ಪಾಲಿಸುತ್ತಾರೆಯೇ? ಸಹಪಾಠಿಗಳ ಜೊತೆ ಸುರಕ್ಷಿತವಾಗಿ ಕುಳಿತುಕೊಳ್ಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

ಕಾಲೇಜುಗಳೂ ತೆರೆಯಬಾರದು: ‘ಕೇವಲ ಶಾಲೆಗಳು ಮಾತ್ರವಲ್ಲ ಸದ್ಯದ ಮಟ್ಟಿಗೆ ಕಾಲೇಜುಗಳನ್ನು ತೆರೆಯಲು ಸಹ ನನ್ನ ವಿರೋಧವಿದೆ. ಇದರಿಂದ ಉಂಟಾಗುವ ಅನಾಹುತಗಳ ಬಗ್ಗೆ ಮಾಧ್ಯಮಗಳೂ ಸಹ ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಹೇಳಿದರು.
 

click me!