ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ಬಿಬಿಎಂಪಿಯಿಂದ ಸಂಜೆ ಟ್ಯೂಷನ್‌

By Kannadaprabha NewsFirst Published Aug 29, 2022, 4:00 AM IST
Highlights

ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಕಾರ್ಯಕ್ರಮದ ಅಡಿ ‘ಸಂಜೆ ಟ್ಯೂಷನ್‌’ಗೆ ಸೆ. 5ರಿಂದ ಆರಂಭ

ಬೆಂಗಳೂರು(ಆ.29):  ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ವಾಸಿಸುವ ಪ್ರದೇಶಗಳ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಕಾರ್ಯಕ್ರಮದ ಅಡಿ ‘ಸಂಜೆ ಟ್ಯೂಷನ್‌’ಗೆ ಸೆ. 5ರಿಂದ (ಶಿಕ್ಷಕರ ದಿನಾಚರಣೆ) ಆರಂಭವಾಗಲಿದೆ.

ಬಿಬಿಎಂಪಿ ಕಲ್ಯಾಣ ವಿಭಾಗದಿಂದ ಪ್ರಾಯೋಗಿಕವಾಗಿ ನಗರದ 10 ಪ್ರದೇಶದಲ್ಲಿ ಪ್ರಾರಂಭಿಸಲಾಗುತ್ತಿದ್ದು, ಅಗಸ್ತ್ಯ ಫೌಂಡೇಷನ್‌ ಸಂಸ್ಥೆಗೆ ಈ 10 ಕೇಂದ್ರಗಳ ನಿರ್ವಹಣೆ ಜವಾಬ್ದಾರಿಯನ್ನು ನೀಡಲಾಗಿದೆ. ಮಕ್ಕಳಿಗೆ ತರಬೇತಿ ನೀಡುವ ಶಿಕ್ಷಕರಿಗೆ ಗೌರವ ಧನ ಸೇರಿದಂತೆ ಪ್ರತಿ ಕೇಂದ್ರದ ನಿರ್ವಹಣೆಗೆ ಮಾಸಿಕ 3,500 ರು. ನೀಡಲಾಗುತ್ತದೆ. ಕೇಂದ್ರದ 500 ಮೀಟರ್‌ ವ್ಯಾಪ್ತಿಯ 3 ರಿಂದ 5 ನೇ ತರಗತಿಯ 25 ರಿಂದ 30 ವಿದ್ಯಾರ್ಥಿಗಳಿಗೆ ಟ್ಯೂಷನ್‌ ನೀಡಲಾಗುವುದು.
ಕೊಳಗೇರಿ ಪ್ರದೇಶ ಸೇರಿದಂತೆ ಬಡವರು ಹೆಚ್ಚಾಗಿರುವ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಹೆಚ್ಚಿನ ಕಲಿಕೆ, ತರಬೇತಿ, ಹೋಂ ವರ್ಕ್, ವಿವಿಧ ಕೌಶಲ್ಯ ವೃದ್ದಿಸುವ ಉದ್ದೇಶದಿಂದ ಈ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗದಗ: ಮೊರಾರ್ಜಿ ವಸತಿ ಶಾಲೆಯಲ್ಲಿ ವಾರಕ್ಕೊಮ್ಮೆ ಸ್ನಾನ, ಕೊಳೆತ ಕಾಯಿಪಲ್ಲೆ ಊಟಕ್ಕೆ ಬಳಕೆ..!

ಬಿಬಿಎಂಪಿ ಶಾಲೆ ಮಾತ್ರವಲ್ಲದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಅಧ್ಯಯನ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಸದ್ಯ ಬಿಬಿಎಂಪಿ ಶಾಲಾ ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುವುದು. ಈ ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರದಲ್ಲಿ 200ರಿಂದ 300 ಅಧ್ಯಯನ ಕೇಂದ್ರ ಆರಂಭಿಸುವುದಕ್ಕೆ ಬಿಬಿಎಂಪಿ ಚಿಂತನೆ ನಡೆಸಿದೆ.

ಪ್ರಾಯೋಗಿಕ ಟ್ಯೂಷನ್‌ ಸ್ಥಳಗಳು

1.ಕ್ಲೀವ್‌ ಲ್ಯಾಂಡ್‌ ಟೌನ್‌ ಬಿಬಿಎಂಪಿ ಶಾಲಾ-ಕಾಲೇಜು
2.ಭೈರವೇಶ್ವರ ನಗರ ಬಿಬಿಎಂಪಿ ಶಾಲಾ-ಕಾಲೇಜು
3.ಶ್ರೀರಾಮಪುರ ಬಿಬಿಎಂಪಿ ಶಾಲಾ-ಕಾಲೇಜು
4.ಕಸ್ತೂರಿ ಬಾ ನಗರ ಬಿಬಿಎಂಪಿ ಶಾಲಾ-ಕಾಲೇಜು
5.ಆಸ್ಟೀನ್‌ಟೌನ್‌ ಬಾಲಕರ ಶಾಲೆ
6.ಗಂಗಾನಗರ ಪಾಲಿಕೆ ಪ್ರೌಢ ಶಾಲೆ
7.ಪಾದರಾಯನಪುರ ಪಾಲಿಕೆ ಶಾಲೆ-ಕಾಲೇಜು
8.ಮತ್ತಿಕೆರೆ ಬಿಬಿಎಂಪಿ ಶಾಲಾ-ಕಾಲೇಜು
9.ವಿಜಯನಗರ ಬಿಬಿಎಂಪಿ ಶಾಲಾ-ಕಾಲೇಜು
10.ಪಿಳ್ಳಣ್ಣ ಗಾರ್ಡ್‌ನ್‌ ಬಿಬಿಎಂಪಿ ಶಾಲಾ-ಕಾಲೇಜು

ಶಿಕ್ಷಕರ ದಿನಾಚರಣೆಯಂದು ಸಾಂಕೇತಿಕವಾಗಿ ಹತ್ತು ಸ್ಥಳದಲ್ಲಿ ‘ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ’ ಆರಂಭಿಸಲಾಗುತ್ತಿದ್ದು, ಪ್ರತಿ ಕೇಂದ್ರಕ್ಕೆ ಪಾಲಿಕೆ ಮಾಸಿಕ .3,500 ವೆಚ್ಚ ಮಾಡಲಿದೆ. ಇದರಲ್ಲಿ .1,500 ಬೋಧನೆ ಮಾಡುವ ಶಿಕ್ಷಕರಿಗೆ ಗೌರವ ಧನ, ಉಳಿದ .2 ಸಾವಿರ ತರಬೇತಿ ಸಾಮಗ್ರಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಕಾರ್ಯಕ್ಕೆ ವೆಚ್ಚ ಮಾಡಲಾಗುತ್ತದೆ ಅಂತ ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ, ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. 
 

click me!