ದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ!

By Kannadaprabha NewsFirst Published Sep 30, 2021, 7:54 AM IST
Highlights

* ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಅಭಿಮಾನ ಬೆಳೆಸಲು ಈ ಕ್ರಮ

* ದಿಲ್ಲಿ ಶಾಲೆಗಳಲ್ಲಿನ್ನು ದೇಶ ಭಕ್ತಿಯೂ ಪಠ್ಯ

* ನರ್ಸರಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ದೇಶ ಭಕ್ತಿ ಪಾಠ

* ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಿರಲ್ಲ, ಜಾಗೃತಿಯಷ್ಟೇ

ನವದೆಹಲಿ(ಸೆ.30): ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಮತ್ತು ದೇಶದ ಬಗ್ಗೆ ಅಭಿಮಾನ ಬೆಳೆಸಲು ‘ದೇಶಭಕ್ತಿ’ ವಿಷಯವನ್ನು(Deshbhakti Curriculum) ದೆಹಲಿಯ ಆಮ್‌ಆದ್ಮಿ(AAP) ಸರ್ಕಾರ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿದೆ. ಈ ಕುರಿತ ಯೋಜನೆಗೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌(Chief Minister Arvind Kejriwal) ಅವರು ಮಂಗಳವಾರ ಚಾಲನೆ ನೀಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ(Independence) ಪ್ರಾಣತ್ಯಾಗ ಮಾಡಿದ ಕ್ರಾಂತಿಕಾರಿ ಭಗತ್‌ ಸಿಂಗ್‌ ಅವರ ಜಯಂತಿ ಪ್ರಯುಕ್ತ ಮಂಗಳವಾರ ಹೊಸ ಪಠ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಜ್ರಿವಾಲ್‌(Arvind Kejriwal), ‘ಇನ್ನು ಮುಂದೆ ಇನ್ಮುಂದೆ ದೆಹಲಿಯಲ್ಲಿ ನರ್ಸರಿಯಿಂದ ಹಿಡಿದು 12ನೇ ತರಗತಿ ವಿದ್ಯಾರ್ಥಿಗಳು ದೇಶಭಕ್ತಿ ವಿಷಯವನ್ನು ಅಭ್ಯಾಸ ಮಾಡಲಿದ್ದಾರೆ. ಈ ವಿಷಯಕ್ಕೆ ಪ್ರತ್ಯೇಕ ಪಠ್ಯ ಪುಸ್ತಕವಿರಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶ ಭಕ್ತರ ಕುರಿತಾದ 100 ಕತೆಗಳನ್ನು ಅನಾವರಣಗೊಳಿಸಲಾಗಿದೆ.

ನರ್ಸರಿಯಿಂದ ಹಿಡಿದು 12ನೇ ತರಗತಿ ತಲುಪುವ ವೇಳೆಗೆ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ 700-800 ಕತೆಗಳು ಮತ್ತು 500-600 ದೇಶಭಕ್ತಿ ಗೀತೆಗಳು ಮತ್ತು ಪದ್ಯಗಳನ್ನು ಕಲಿಸಲಾಗುತ್ತದೆ ಎಂದು ಸಿಎಂ ಕೇಜ್ರಿವಾಲ್‌ ಘೋಷಿಸಿದರು.

ಈ ಯೋಜನೆಯಡಿ ನರ್ಸರಿಯಿಂದ 8ನೇ ತರಗತಿ ಮಕ್ಕಳಿಗೆ ಪ್ರತೀ ನಿತ್ಯವೂ ದೇಶಭಕ್ತಿ ಕುರಿತಾಗಿ ಒಂದು ತರಗತಿ ನಿಗದಿಯಾಗಿರುತ್ತದೆ. ಇನ್ನು 9ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ವಾರಕ್ಕೆ 2 ದಿನ ಈ ತರಗತಿ ನಡೆಯಲಿದೆ. ದೇಶಭಕ್ತಿಯ ತರಗತಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು 5 ನಿಮಿಷಗಳ ಕಾಲ ದೇಶಭಕ್ತಿ ಧ್ಯಾನ, ವಿದ್ಯಾರ್ಥಿಗಳಲ್ಲಿ ದೇಶ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಕೃತಜ್ಞತೆ ಭಾವ ಮೂಡಿಸುವುದು. ಈ ವಿಷಯದ ಬಗ್ಗೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲ್ಲ. ಬದಲಾಗಿ ದೇಶದ ಕುರಿತಾಗಿ ತಮ್ಮ ಜವಾಬ್ದಾರಿಗಳ ಬಗ್ಗೆ ಜಾಗೃತಿ, ದೇಶದ ಬಗ್ಗೆ ಗೌರವ, ಹೆಮ್ಮೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್‌ ಹೇಳಿದ್ದಾರೆ.

click me!