ಶಿಕ್ಷಣ ನೀತಿ ಜಾರಿಯಲ್ಲಿ ರಾಜ್ಯ ಮುಂಚೂಣಿ: ಡಿಸಿಎಂ ಅಶ್ವತ್ಥ ಮೆಚ್ಚುಗೆ

By Kannadaprabha NewsFirst Published Jun 19, 2021, 7:15 AM IST
Highlights

* ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ-ಕಸ್ತೂರಿರಂಗನ್‌
* ಯೋಜನೆ ಜಾರಿಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಬದ್ಧತೆಗೆ ಮೆಚ್ಚುಗೆ
* ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡ ಸರ್ಕಾರ
 

ಬೆಂಗಳೂರು(ಜೂ.19): ನೂತನ ಜಾರಿಯಿಂದ 21ನೇ ಶತಮಾನದಲ್ಲಿ ಕರ್ನಾಟಕ ಸೇರಿ ಇಡೀ ಭಾರತದ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತವೆ ಎಂದು ಈ ನೂತನ ನೀತಿಯ ಕರಡು ಸಮಿತಿ ಅಧ್ಯಕ್ಷ ಡಾ.ಕಸ್ತೂರಿ ರಂಗನ್‌ ಹೇಳಿದ್ದಾರೆ.

‘ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಮತ್ತು ಡೆನ್ಮಾರ್ಕ್ನ ಅಲ್ಬೋರ್ಗ್‌ ವಿವಿಯ ಯುನೆಸ್ಕೊ ಸೆಂಟರ್‌ ಫಾರ್‌ ಪ್ರಾಬ್ಲಮ್‌ ಬೇಸ್ಡ್‌ ಲರ್ನಿಂಗ್‌ ಇನ್‌ ಎಂಜಿನಿಯರಿಂಗ್‌ ಸೈನ್ಸ್‌ ಮತ್ತು ಸಸ್ಟೈನಬಿಲಿಟಿ’ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸಮಸ್ಯೆಗಳ ಪರಿಹಾರದ ಕಲಿಕಾ ಪದ್ಧತಿ’ ಕುರಿತ ಆನ್‌ಲೈನ್‌ ವಿಚಾರ ಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಕೇಂದ್ರ ಸರ್ಕಾರ ಈ ನೀತಿಯನ್ನು ಪ್ರಕಟಿಸಿದ ದಿನದಿಂದಲೇ ರಾಜ್ಯ ಸರ್ಕಾರ ವೇಗವಾಗಿ ಶಿಕ್ಷಣ ನೀತಿ ಜಾರಿಗೆ ಕಾರ್ಯೋನ್ಮುಕವಾಗಿದೆ. ಅದರಲ್ಲೂ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಈ ನಿಟ್ಟಿನಲ್ಲಿ ಸಾಗುತ್ತಿರುವ ವೇಗ ನನಗೆ ಆಶ್ಚರ್ಯ ತರಿಸಿದೆ. ಸರ್ಕಾರಕ್ಕೆ ಇರುವ ಬದ್ಧತೆ, ದೂರ ದೃಷ್ಟಿಶ್ಲಾಘನೀಯ ಎಂದರು.

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ ಸಚಿವ ಸುರೇಶ್ ಕುಮಾರ್

ಈ ವರ್ಷದಿಂದಲೇ ಜಾರಿ:

ಉಪ ಮುಖ್ಯಮಂತ್ರಿ ಅವರು ಮಾತನಾಡಿ, ‘ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಿಂದಲೇ ಜಾರಿ ಮಾಡಲು ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ರಾಜ್ಯವು ಉದ್ಯಮಶೀಲತೆ, ಆವಿಷ್ಕಾರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇರುವುದರಿಂದ ಶಿಕ್ಷಣ ನೀತಿಯೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಗೆ ಹೊಸ ತಿರುವು ನೀಡಲಿದೆ. ಇಂತಹ ನೀತಿ ಜಾರಿಗೆ ನನಗೆ ಅವಕಾಶ ಸಿಕ್ಕಿದ್ದು ನನ್ನ ಜೀವಮಾನದಲ್ಲಿ ಸಿಕ್ಕ ಸುವರ್ಣಾವಕಾಶ ಎಂದು ಹೇಳಿದರು .

ಯುನೆಸ್ಕೋದ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಲಿಕಾ ಶಿಕ್ಷಣ ವಿಭಾಗದ ಮುಖ್ಯಸ್ಥೆ ಪ್ರೊ.ಅನೆಟ್‌ ಕೊಲ್ಮಾಸ್‌ ಮಾತನಾಡಿ, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ತಾಂತ್ರಿಕ ಮತ್ತು ಆವಿಷ್ಕಾರ ಶಿಕ್ಷಣಕ್ಕೆ ಯುನೆಸ್ಕೋ ಹೆಚ್ಚು ಒತ್ತು ನೀಡುತ್ತಿದೆ. ಆ ನಿಟ್ಟಿನಲ್ಲಿ ನಾವು ಎಲ್ಲ ದೇಶಗಳ ಜತೆ, ಮುಖ್ಯವಾಗಿ ಭಾರತದ ಜತೆ ನಿಕಟವಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದರು.

ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ ಸೇರಿದಂತೆ ದೇಶ- ವಿದೇಶಗಳ ವಿವಿಧ ತಜ್ಞರು ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
 

click me!