ಪೋಷಕರು ಖಾಸಗಿ ಶಾಲೆಯ ವ್ಯಾಮೋಹ ಬಿಡಬೇಕು: ಸಿಎಂ ಬೊಮ್ಮಾಯಿ

By Kannadaprabha NewsFirst Published Sep 15, 2021, 11:12 AM IST
Highlights

*  ಸೋಮಣ್ಣ ನೇತೃತ್ವದಲ್ಲಿ ನವೀಕರಣಗೊಂಡ ಸರ್ಕಾರಿ ಶಾಲೆಗೆ ಚಾಲನೆ 
*  ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು 
*  ಸರ್ಕಾರಿ ಶಾಲೆ ಪುನರುಜ್ಜೀವನಗೊಂಡು ವಿದ್ಯಾರ್ಜನೆಗೆ ಅನುಕೂಲಕರ

ಬೆಂಗಳೂರು(ಸೆ.15):  ಪೋಷಕರು ಖಾಸಗಿ ಶಾಲೆಯ ವ್ಯಾಮೋಹದಿಂದ ಹೊರ ಬಂದು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್‌ನಲ್ಲಿ ಹೊಸದಾಗಿ ನವೀಕರಣಗೊಂಡ ಹೈಟೆಕ್‌ ಹಾಗೂ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆ ಪುನರುಜ್ಜೀವನಗೊಂಡು ವಿದ್ಯಾರ್ಜನೆಗೆ ಅನುಕೂಲಕರವಾಗಿದೆ. ಅಗ್ರಹಾರ ದಾಸರಹಳ್ಳಿಯಲ್ಲಿ ಹೈಟೆಕ್‌ ಪ್ರೌಢಶಾಲೆಯನ್ನು ನವೀಕರಣ ಮಾಡಿ ಪದವಿ ಪೂರ್ವ ಕಾಲೇಜನ್ನು ಸ್ಥಾಪಿಸಿರುವುದು ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಸಾರ್ವಜನಿಕ ಸೇವೆ ಒದಗಿಸುವುದು ಕಷ್ಟದ ಕೆಲಸ. ಈ ನಡುವೆಯೂ ಸಚಿವ ಸೋಮಣ್ಣ ಅವರು ಇತರರಿಗೆ ಮಾದರಿ ಆಗುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ITIಗೆ 6 ಹೊಸ ಕೋರ್ಸ್ ಸೇರ್ಪಡೆ: ಪ್ರಸಕ್ತ ಸಾಲಿನಿಂದಲೇ ಪ್ರವೇಶಾತಿ ಆರಂಭ

ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಬಡವರ ಮಕ್ಕಳು ಖಾಸಗಿ ಶಾಲೆಗಳಲ್ಲಿನ ಶುಲ್ಕ ಪಾವತಿಸಲಾಗದ ಪರಿಸ್ಥಿತಿ ಇದೆ. ಅಂತಹ ಬಡ ಮಕ್ಕಳನ್ನು ಸರ್ಕಾರಿ ಶಾಲೆಗೆ ಕರೆ ತಂದು ಉನ್ನತ ಶಿಕ್ಷಣ ನೀಡುವ ಜವಾಬ್ದಾರಿ ಸರ್ಕಾರಿ ಶಾಲೆಯ ಶಿಕ್ಷಕರ ಮೇಲಿದೆ. ನವೀಕರಣಗೊಂಡು ಉದ್ಘಾಟನೆಗೊಂಡ ಸುಸಜ್ಜಿತ ಪ್ರೌಢಶಾಲೆಯಲ್ಲಿ ಮೊದಲು ನೂರರಿಂದ ಇನ್ನೂರು ಮಕ್ಕಳು ದಾಖಲಾತಿ ಆಗುತ್ತಿತ್ತು. ಇದೀಗ 1300ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ಪಾಲಿಕೆ ಮಾಜಿ ಸದಸ್ಯೆ ಶಿಲ್ಪ ಶ್ರೀಧರ್‌ ಮಾತನಾಡಿ, ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿ ಶಾಲಾ ಶುಲ್ಕ ಕಟ್ಟಲಾಗದೆ ಸಾಲ ಮಾಡಿ ಬಡ್ಡಿ ಕಟ್ಟುವ ಮೂಲಕ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದು ಸಲಹೆ ನೀಡಿದರು. ಸಚಿವ ಕೆ.ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಯುವ ಮುಖಂಡ ಅರುಣ್‌ ಸೋಮಣ್ಣ ಇನ್ನಿತರರಿದ್ದರು.
 

click me!