ಶೈಕ್ಷಣಿಕ ಸುಧಾರಣೆ: ಸಿಎಂಗೆ ದೊರೆಸ್ವಾಮಿ ಕೊಟ್ಟ 5 ಸಲಹೆ..!

By Kannadaprabha NewsFirst Published May 29, 2020, 9:35 AM IST
Highlights

ಮಹಾತ್ಮರ ನೆನಪಿಗಾಗಿ ಸಾರ್ವತ್ರಿಕ ರಜೆ ಘೋಷಣೆ ಬದಲಾಗಿ ಅರ್ಥಪೂರ್ಣ ಆಚರಣೆ, ಕ್ಲಸ್ಟರ್‌ ಪದ್ಧತಿಯಲ್ಲಿ ಕಾಲೇಜು ಅಭಿವೃದ್ಧಿ ಸೇರಿದಂತೆ ರಾಜ್ಯದ ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸುಧಾರಣೆಗಳ ಸಲಹೆಗಾರ ಡಾ. ಎಂ.ಆರ್‌. ದೊರೆಸ್ವಾಮಿ ಅವರು ಐದು ಪ್ರಮುಖ ಶಿಫಾರಸುಗಳನ್ನು ನೀಡಿದ್ದಾರೆ. ಏನದು..? ಇಲ್ಲಿ ಓದಿ

ಬೆಂಗಳೂರು(ಮೇ 29): ಮಹಾತ್ಮರ ನೆನಪಿಗಾಗಿ ಸಾರ್ವತ್ರಿಕ ರಜೆ ಘೋಷಣೆ ಬದಲಾಗಿ ಅರ್ಥಪೂರ್ಣ ಆಚರಣೆ, ಕ್ಲಸ್ಟರ್‌ ಪದ್ಧತಿಯಲ್ಲಿ ಕಾಲೇಜು ಅಭಿವೃದ್ಧಿ ಸೇರಿದಂತೆ ರಾಜ್ಯದ ಶಿಕ್ಷಣ ವ್ಯವಸ್ಥೆ ಉತ್ತಮಗೊಳ್ಳಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರಕ್ಕೆ ಶಿಕ್ಷಣ ಸುಧಾರಣೆಗಳ ಸಲಹೆಗಾರ ಡಾ. ಎಂ.ಆರ್‌. ದೊರೆಸ್ವಾಮಿ ಅವರು ಐದು ಪ್ರಮುಖ ಶಿಫಾರಸುಗಳನ್ನು ನೀಡಿದ್ದಾರೆ. ಈ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ವರದಿಯೊಂದನ್ನು ನೀಡಿದ್ದಾರೆ.

ಸಲಹೆಗಳೇನು?:

ದೊರೆಸ್ವಾಮಿ ಅವರು ನೀಡಿರುವ ಪ್ರಮುಖ ಶಿಫಾರಸುಗಳಲ್ಲಿ ಪ್ರಮುಖವಾದುದು ಎಂತಹ ಕ್ಲಿಷ್ಟಕರ ಸಮಯದಲ್ಲಿಯೂ ಗುರು ಶಿಷ್ಯ ಪರಂಪರೆ ಗಟ್ಟಿಯಾಗಿ ಉಳಿಯಬೇಕಾಗಿದೆ. ಇದಕ್ಕಾಗಿ ಡಿಜಿಟಲ್‌ ಪೋರ್ಟಲ್‌ಗಳನ್ನು ಸಮರ್ಥವಾಗಿ ಬಳಸಿಕೊಂಡು ಪರಿಹಾರ ಹುಡುಕಬಹುದಾಗಿದೆ. ಯಾವುದೇ ಸಂದರ್ಭದಲ್ಲಿಯೂ ಗುರು- ಶಿಷ್ಯರು ಪರಸ್ಪರ ಸಂಪರ್ಕಿಸಿ ಸಂವಹನ ನಡೆಸುವಂತಹ ವ್ಯವಸ್ಥೆ ರೂಪಿಸಬಹುದು.

ಅದೇ ರೀತಿ ವಿಕಲಚೇತನ ವಿದ್ಯಾರ್ಥಿಗಳಿಗಾಗಿ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ. ದೇಶದಲ್ಲಿ ಉತ್ತರ ಪ್ರದೇಶದಲ್ಲಿ ಮಾತ್ರ ಅಂಗವಿಕಲರಿಗೆ ವಿಶ್ವವಿದ್ಯಾಲಯ ನಿರ್ಮಿಸಲಾಗಿದೆ. ಕರ್ನಾಟಕದಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವುದರಿಂದ ದಕ್ಷಿಣ ಭಾರತದಲ್ಲಿ ಕರ್ನಾಟಕದ ಹಿರಿಮೆ ಹೆಚ್ಚಳವಾಗಲಿದೆ. ಹಿರಿಯ ನಾಗರಿಕ ಮತ್ತು ದಿವ್ಯಾಂಗರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಮೀಸಲಿಟ್ಟಿರುವ 9500 ಕೋಟಿ ರು. ಅನುದಾನ ಬಳಸಿಕೊಂಡು ವಿಕಲಚೇತನರ ವಿಶ್ವವಿದ್ಯಾಲಯ ಸ್ಥಾಪಿಸಬಹುದು.

ಮುಕ್ತ ವಿವಿ ಶಿಕ್ಷಣ ಪ್ರವೇಶ ಪ್ರಮಾಣ ಹೆಚ್ಚಳಕ್ಕೆ ಸೂಚನೆ

ಮೂರನೆಯದಾಗಿ ಪ್ರಗತಿಯಲ್ಲಿ ಹಿಂದುಳಿದಿರುವ ಕಾಲೇಜುಗಳನ್ನು ಗುರುತಿಸಿ ಸ್ವಾಯತ್ತ ಕಾಲೇಜುಗಳು ಮತ್ತು ನ್ಯಾಕ್‌ ‘ಎ’ ಶ್ರೇಣಿ ಕಾಲೇಜುಗಳೊಂದಿಗೆ ಸಮೂಹ ರಚಿಸಿ ಅಭಿವೃದ್ಧಿ ಮಾಡಬಹುದಾಗಿದೆ. ಕ್ಲಸ್ಟರ್‌ ಮಟ್ಟದಲ್ಲಿ ಸಮೂಹ ರಚಿಸಿ ಅಭಿವೃದ್ಧಿ ಮಾಡುವುದರಿಂದ ಸ್ವಾಯತ್ತ ಕಾಲೇಜುಗಳ ಪ್ರಾಧ್ಯಾಪಕರಿಂದ ತರಬೇತಿ ಸೇರಿದಂತೆ ಇನ್ನಿತರ ಸಲಹೆಗಳನ್ನು ಪಡೆಯಬಹುದಾಗಿದೆ.

ಮಹಾತ್ಮರ ನೆನಪಿಗಾಗಿ ಸರ್ಕಾರ ಘೋಷಿಸಿರುವ ಸಾರ್ವತ್ರಿಕ ರಜೆಗಳ ದಿನಗಳಂದು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುವ ಬದಲಾಗಿ ಮಹಾತ್ಮರನ್ನು ನೆನೆಯುವ ಮೂಲಕ ಅರ್ಥಪೂರ್ಣ ಆಚರಣೆ ಮಾಡಬಹುದು. ವಿದ್ಯಾರ್ಥಿಗಳಿಗೆ ಮಹಾತ್ಮರ ಜೀವನ ಚರಿತ್ರೆ ಹಾಗೂ ಅದರಿಂದ ಪಡೆಯಬಹುದಾದ ಅಪೂರ್ವ ಸಂದೇಶಗಳನ್ನು ತಲುಪಿಸುವ ಕಾರ್ಯ ಮಾಡಿದರೆ ಮಹಾತ್ಮರ ಕೊಡುಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸಿಎಂ ಬದಲಿಸಲು ಒತ್ತಡ: ಸೊಪ್ಪು ಹಾಕುತ್ತಾ ಬಿಜೆಪಿ ಹೈ ಕಮಾಂಡ್?

ಅಂತಿಮವಾಗಿ ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೊಳಿಸಿರುವ ನೀತಿ, ನಿಯಮಗಳು ಮತ್ತು ಕಾಯ್ದೆಗಳನ್ನು ವಿದ್ಯಾಸಂಸ್ಥೆಗಳಲ್ಲಿ ಪಾಲಿಸದಿರುವುದರಿಂದ ಕಾಲೇಜುಗಳಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ನಿಯಮಗಳನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ವಾತಾವರಣ ನಿರ್ಮಿಸುವುದಕ್ಕಾಗಿ ಕೂಡಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ.

- ಡಿಜಿಟಲ್‌ ಪೋರ್ಟಲ್‌ಗೆ ಒತ್ತು ನೀಡಿ

- ವಿಕಲಚೇತನರಿಗೆ ವಿವಿ ಸ್ಥಾಪಿಸಿ

- ಹಿಂದುಳಿದ ಕಾಲೇಜು ಅಭಿವೃದ್ಧಿಪಡಿಸಿ

- ಮಹಾತ್ಮರ ದಿನದಂದು ಶಾಲೆಗಳಲ್ಲಿ ಅವರ ಸ್ಮರಣೆ ಆಗಲಿ

- ನಿಯಮ ಉಲ್ಲಂಘಿಸುವ ಶಾಲೆಗಳಲ್ಲಿ ಉತ್ತಮ ವಾತಾವರಣ ಸೃಷ್ಟಿಆಗಬೇಕು

click me!