ಕೊರೋನಾದಿಂದಾಗಿ ಮಧ್ಯಮ ಹಾಗೂ ಬಡವರು ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಇದರ ಮಧ್ಯೆಯೂ ಹೆಚ್ಚುವರಿ ಬೋಧನಾ ಶುಲ್ಕ ವಸೂಲಿಗಿಳಿದಿರುವ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಸರ್ಕಾರ ಖಡಕ್ ಎಚ್ಚರಿಕೆ ರವಾನಿಸಿದೆ.
ಬೆಂಗಳೂರು, (ಜೂನ್.19): 2020-21ನೇ ಸಾಲಿನ ಬೋಧನಾ ಶುಲ್ಕ ಹೆಚ್ಚಿಸದಂತೆ ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ರಾಜ್ಯ ಸರ್ಕಾರ ಖಡಕ್ ಸೂಚನೆ ಕೊಟ್ಟಿದೆ.
ಈ ಬಗ್ಗೆ ಇಂದು (ಶುಕ್ರವಾರ) ಅಧಿಕೃತವಗಿ ಸುತ್ತೋಲೆ ಹೊರಡಿಸಿರುವ ಶಿಕ್ಷಣ ಇಲಾಖೆ, ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಬಹಳಷ್ಟು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಖಾಸಗಿ ಅನುದಾನಿತ ಶಾಲೆಗಳು ವಿದ್ಯಾರ್ಥಿಗಳ ಭೋಧನಾ ಶುಲ್ಕ ಹೆಚ್ಚಿಸದಂತೆ ಆದೇಶ ಹೊರಡಿಸಿದೆ.
ಸುವರ್ಣ ನ್ಯೂಸ್ ಅಭಿಯಾನ ಸಾರ್ಥಕ: ಶುಲ್ಕ ಕಡಿಮೆ ಮಾಡಲು ಬಿಷಪ್ ಕಾಟನ್ ಶಾಲೆ ಒಪ್ಪಿಗೆ
ಕರ್ನಾಟಕ ಶಿಕ್ಷಣ ನಿಯಮ 1999ರಲ್ಲಿ ಕಲ್ಪಿಸಿರುವ ಅವಕಾಶವನ್ನು ಸರ್ಕಾರ, ಸಾರ್ವಜನಿಕರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವುದನ್ನು ಪರಿಗಣಿಸಿ ಕರ್ನಾಟಕ ಶಿಕ್ಷಣ ಕಾಯ್ದೆ 1983 ಸೆಕ್ಷನ್ 133, ಉಪನಿಯಮ (2)ರ ಅಡಿಯಲ್ಲಿನ ಅಧಿಕಾರವನ್ನು ಚಲಾಯಿಸಿ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು, 2020-21ರ ಶೈಕ್ಷಣಿಕ ಸಾಲಿನಲ್ಲಿ ಯಾವುದೇ ಬೋಧನಾ ಶುಲ್ಕ ಹೆಚ್ಚಿಸಬಾರದೆಂದು ಸುಚಿಸಿದೆ.
ಒಂದು ವೇಳೆ ಶಾಲಾ ಆಡಳಿತ ಮಂಡಳಿಯವರು 2019-20ನೇ ಶೈಕ್ಷಣಿಕ ಸಾಲಿಗಿಂತ ಹೆಚ್ಚಿನ ಬೋಧನಾ ಶುಲ್ಕವನ್ನು ಮಕ್ಕಳು/ಪೋಷಕರಿಂದ ತೆಗೆದುಕೊಂಡಲ್ಲಿ ಕರ್ನಾಟಕ ಶಿಕ್ಷಣ ಕಾಯ್ದೆ -124(ಎ)ರ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ.
ಈ ಬಗ್ಗೆ ಅಭಿಯಾನ ನಡೆಸಿದ್ದ ಸುವರ್ಣ ನ್ಯೂಸ್
ಹೌದು...ಲಾಕ್ಡೌನ್ ಹಿನ್ನೆಲೆ ಪೋಷಕರು ಆರ್ಥಿಕ ತೊಂದರೆಯಲ್ಲಿರುವುದನ್ನ ಮನಗಂಡು ನಿಮ್ಮ ಸುವರ್ಣನ್ಯೂಸ್, "ಈ ವರ್ಷ ಅರ್ಧ ಫೀಸ್" ಎನ್ನುವ ಅಭಿಯಾನ ನಡೆಸಿತ್ತು. ಇದಕ್ಕೆ ವ್ಯಾಪಕವಾಗಿ ಬೆಂಬಲ ವ್ಯಕ್ತವಾಗಿತ್ತು.ಅಲ್ಲದೇ ಈ ಅಭಿಯಾನಕ್ಕೆ ಕೆಲ ಖಾಸಗಿ ಶಾಲೆಗಳು ಸ್ಪಂದಿಸಿವೆ. ಉದಾಹರಣೆಗೆ ಬಿಷಪ್ ಕಾಟನ್ ಶಾಲೆ ಶೇ.30ರಷ್ಟು ಶುಲ್ಕ ಮಾಡಿದ್ದನ್ನು ಇಲ್ಲಿ ಸ್ಮರಿಸಹುದು.
ಒಟ್ಟಿನಲ್ಲಿ ಮಾನವೀಯತೆ ಮೇಲೆಯಾದರೂ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಫೀಸ್ ಕಡಿಮೆ ಮಾಡಬೇಕಾಗಿ ನಮ್ಮಿಂದಲೂ ಒಂದು ಮನವಿ.