
ಬೆಂಗಳೂರು: ಕಿರುತೆರೆ ನಟ, ರಿಯಾಲಿಟಿ ಶೋ ಸ್ಪರ್ಧಿ ಸುನಾಮಿ ಕಿಟ್ಟಿಯನ್ನು ಅಪಹರಣ ಹಾಗೂ ಕೊಲೆ ಬೆದರಿಕೆ ಪ್ರಕರಣದಡಿ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಕಿಟ್ಟಿ ಇಂಥ ಕೃತ್ಯಕ್ಕೆ ಕೈ ಹಾಕಿದ್ದು ಏಕೆ ಗೊತ್ತಾ?
ಕಿಟ್ಟಿ ಗೆಳೆಯ ಸುನಿಲ್ ಹೆಂಡತಿಯನ್ನು ತೌಶೀಕ್ ಎಂಬಾತ ಪ್ರೀತಿಸುತಿದ್ದ, ಎಂಬ ಗುಮಾನಿ ಕಿಟ್ಟಿ ಸ್ನೇಹಿತನಿಗಿತ್ತು.
ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಸುನಿಲ್ ಪತ್ನಿ, ಪ್ರಿಯಕರ ತೌಶೀಕ್ನೊಂದಿಗೆ ಊಟಕ್ಕೆ ಬರುತ್ತಿದ್ದರು. ಫೆ.29ರಂದೂ ಈ ಇಬ್ಬರು ಇದೇ ರೆಸ್ಟೋರೆಂಟ್ಗೆ ಊಟಕ್ಕೆ ಬಂದಿದ್ದರು.
ಸುನಿಲ್ ಪತ್ನಿಯ ಪ್ರಿಯಕರನನ್ನು ಅಪಹರಿಸಲು ಕಿಟ್ಟಿ ಮತ್ತು ಸ್ನೇಹಿತರು ಸಿದ್ಧರಾಗಿದ್ದರು. ಆದರೆ, ಗಡಿಬಿಡಿಯಿಂದ ತೌಶೀಕ್ ಬಿಲ್ ಕೊಡದೇ ಆ ದಿನ ಪರಾರಿಯಾಗಿದ್ದ. ಆದರೆ, ಸಪ್ಲೈಯರ್ ಗಿರೀಶ್ನನ್ನೇ, ಸುನಿಲ್ ಪತ್ನಿಯ ಪ್ರಿಯಕರನೆಂದು ತಪ್ಪಾಗಿ ಭಾವಿಸಿ, ಅಪಹರಿಸಲಾಗಿತ್ತು.
ಅಪಹರಣಕ್ಕೊಳಗಾದ ಗಿರೀಶ್ನನ್ನು ಹೊರಮಾವು ಬಳಿ ಕರೆದುಕೊಂಡು ಹೋಗಿ, ಹಲ್ಲೆ ನಡೆಸಲಾಗಿತ್ತು. ಸುನಿಲ್ ಪತ್ನಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಗಿ ಹೇಳಿ, ಥಳಿಸಲಾಗಿತ್ತು. ಆಗ, ತಾವು ಅಪಹರಿಸಿದ ವ್ಯಕ್ತಿ ತೌಶೀಕ್ ಅಲ್ಲವೆಂಬುವುದು ಈ ಗ್ಯಾಂಗಿಗೆ ಅರಿವಾಗಿದೆ.
ಅದೇ ಸ್ಥಳದಿಂದ ತೌಶೀಕ್ಗೆ ಫೋನ್ ಮಾಡಿಸಿ, ಗೊರಗುಂಟೆ ಪಾಳ್ಯ ಸಿಗ್ನಲ್ ಬಳಿ ಬರುವುದಾಗಿ ಹೇಳಲಾಗಿತ್ತು. ತೌಶೀಕ್ನನ್ನು ಬಲೆಗೆ ಬೀಳಿಸಲು, ಗಿರೀಶ್ಗೆ ಗನ್ ಪಾಯಿಂಟ್ ತೋರಿಸಿ ಬೆದರಿಸಿತ್ತು. ಈ ಇಬ್ಬರನ್ನೂ ಹೊರಮಾವು ಸಮೀಪದ ತೋಟದ ಮನೆಗೆ ಕರೆದುಕೊಂಡು ಹೋಗಿ, ಕಿಟ್ಟಿ ಮತ್ತು ಸ್ನೇಹಿತರು ಥಳಿಸಿದ್ದರು. ತೌಶೀಕ್ ಎದೆ ಹಾಗೂ ತೊಡೆ ಭಾಗಕ್ಕೂ ಚಾಕುವಿನಿಂದ ಇರಿದಿತ್ತು.
ಈ ಹಿನ್ನೆಲೆಯಲ್ಲಿ ಕಿಟ್ಟಿ ಹಾಗೂ ಸ್ನೇಹಿತರ ವಿರುದ್ಧ ದೂರು ದಾಖಲಾಗಿದ್ದು, ಇಂದು ಜ್ಞಾನಭಾರತಿ ಪೊಲೀಸರು ಕಿಟ್ಟಿ, ಸಂತೋಷ್, ಅರ್ಜುನ ಮತ್ತು ನಾಗೇಂದ್ರ ಎಂಬುವವರನ್ನು ಬಂಧಿಸಿದ್ದಾರೆ. ಸುನಿಲ್ಗಾಗಿ ಶೋಧಕಾರ್ಯ ಮುಂದುವರಿದಿದ್ದು, ತನಿಖೆ ಮುಂದುವರಿಸಿದ್ದಾರೆ.