ತತ್ತ್ವಸಿದ್ಧಾಂತ ಬೋಧಿಸುತ್ತಲೇ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸುವ ನಾಯಕರ ಬಗ್ಗೆ ಎಚ್ಚರಿಕೆಯಿಂದಿರಬೇಕು: ಮಹದೇವಪ್ಪ ವಾಗ್ದಾಳಿ

By Suvarna Web DeskFirst Published Nov 12, 2016, 4:33 PM IST
Highlights

ಅಂಬೇಡ್ಕರ್ ಮತ್ತು ಬುದ್ಧನ ತತ್ತ್ವಸಿದ್ಧಾಂತ ಬೋಧಿಸುತ್ತಲೇ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸುವ ನಾಯಕರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಮೈಸೂರು (ನ.12): ಅಂಬೇಡ್ಕರ್ ಮತ್ತು ಬುದ್ಧನ ತತ್ತ್ವಸಿದ್ಧಾಂತ ಬೋಧಿಸುತ್ತಲೇ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸುವ ನಾಯಕರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ದಲಿತ ಸಂಘರ್ಷ ಸಮಿತಿಯು ಶನಿವಾರ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆಯನ್ನು ವಿಶ್ವಜ್ಞಾನ ದಿನವನ್ನಾಗಿ ಆಚರಿಸುವ ಅಂಗವಾಗಿ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ಧನನ್ನು ಸ್ಮರಿಸುತ್ತ, ಅಂಬೇಡ್ಕರ್ ತತ್ತ್ವ ಸಿದ್ಧಾಂತವನ್ನು ಹೇಳುತ್ತ ಅಂಬೇಡ್ಕರ್ ಚಳವಳಿ ನಾಶಮಾಡಲು ಯತ್ನಿಸುತ್ತಿರುವ ಕೋಮುವಾದಿ ಶಕ್ತಿಗಳೊಂದಿಗೆ ಕೈಜೋಡಿಸುತ್ತಾರೆ. ಹೀಗೆ ವಂಚಿಸುವವರ ಬಗ್ಗೆ ಎಚ್ಚರದಿಂದ ಇರಬೇಕು. ಏಕೆಂದರೆ ಅವರು ಅಂಬೇಡ್ಕರ್ ಸಿದ್ಧಾಂತವನ್ನು ಪ್ರತಿಪಾದಿಸುತ್ತ ದಲಿತರ ಪರ ಎನ್ನುವ ಮತ್ತು ಹೋರಾಟದಲ್ಲಿ ಪಾಲ್ಗೊಳ್ಳದೆ ನಾನೇ ಎಲ್ಲವನ್ನೂ ಮಾಡಿದ್ದೇನೆ ಎನ್ನುತ್ತಾರೆ ಎಂದು ಅವರು ಟೀಕಿಸಿದರು.ಪ. ಜಾತಿ, ಪ. ಪಂಗಡ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ಮೀಸಲಿಡಲಾಗಿದೆ. ಪ್ರಸಕ್ತ ವರ್ಷ19,650 ಕೋಟಿ ಹಣವನ್ನು ಇಡಲಾಗಿದೆ. ಇದರಿಂದಾಗಿ ದಲಿತರ ಸರ್ವಾಂಗೀಣ ಅಭಿವೃದ್ಧಿಯಾಗಲಿದೆ.

ಅಂಬೇಡ್ಕರ್ ಅವರ 125 ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಮಾರ್ಚ್‌ನಲ್ಲಿ ವಿಶ್ವಜ್ಞಾನ ಸಮಾವೇಶ ನಡೆಸಲಾಗುತ್ತಿದೆ. ಒಂದು ತಿಂಗಳ ಕಾಲ ಅಂಬೇಡ್ಕರ್ ರಥದ ಅಭಿಯಾನ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.ಧರ್ಮ ಇಂದು ಎಲ್ಲರನ್ನೂ ಕೊಲ್ಲುತ್ತಿದೆ. ಸನಾತನತೆಯನ್ನು ಪ್ರತಿಪಾದಿಸುತ್ತ, ಸಮಾಜದಲ್ಲಿ ಅಶಾಂತಿ, ಅಸಮಾನತೆಗೆ ಕಾರಣವಾಗುತ್ತಿದೆ. ಜನತಾದಳ ಸರ್ಕಾರ ಇದ್ದಾಗ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು. ಈಗಲೂ ಒತ್ತಡ ಇದೆ. ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಪರವಾಗಿ ಇರುವ ಕಾರಣ ಅದಷ್ಟು ಬೇಗ ಭರ್ತಿ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.

ಅಂಬೇಡ್ಕರ್ ಅವರನ್ನು ವಿಶ್ವದ ಜನತೆ ಜ್ಞಾನದ ಶಿಖರ ಎಂದು ಒಪ್ಪಿಕೊಂಡಿದ್ದರೆ, ಭಾರತದಲ್ಲಿನ ಕೊಳಕು ಮನಸ್ಸು, ಕುಬ್ಜರು ಅವರನ್ನು ನಾಯಕರೆಂದು ಒಪ್ಪುತ್ತಿಲ್ಲ. ಅಂಬೇಡ್ಕರ್ ಅವರನ್ನು ಜಾತಿಯ ಜೈಲಿನಲ್ಲಿ ಇರಿಸಲಾಗಿದೆ. ದಲಿತರನ್ನು ಕೊಲ್ಲಬೇಡಿ, ನನ್ನನ್ನು ಕೊಲ್ಲಿ ಎನ್ನುವ ಮೂಲಕ ಪ್ರಧಾನಿ ಮೋದಿ ಭಾವನಾತ್ಮಕವಾಗಿ ಎಲ್ಲರನ್ನು ಸೆಳೆಯುವ ಹುನ್ನಾರ ನಡೆಸುತ್ತಿದ್ದಾರೆ. ದಲಿತರನ್ನು ಹತ್ಯೆ ಮಾಡಿದವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಲಿ.
- ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗಪೆದ್ದಿ ಮಠ.

click me!