
ಚಿಕ್ಕಬಳ್ಳಾಪುರ(ಮೇ.29): ಬ್ಯಾಂಕ್'ಗಳು ಅಂದಮೇಲೆ ಜನ ಸಾಲಕ್ಕೆ ಬರೋದು ಕಾಮನ್. ಹಾಗೇ ಬ್ಯಾಂಕ್ ಸಿಬ್ಬಂದಿ ಹೌಸ್ ಲೋನ್, ಗೋಲ್ಡ್ ಲೋನ್ ಅಂತ ಹತ್ತಾರು ರೀತಿಯ ಲೋನ್'ಗಳನ್ನ ಕೊಡುತ್ತಾರೆ. ಆದರೆ, ಇಲ್ಲೊಂದು ಬ್ಯಾಂಕ್'ನಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಏನಪ್ಪಾ ನಕಲಿ ಚಿನ್ನಕ್ಕೂ ಲೋನ್ ಕೊಡ್ತಾರಾ ಅಂತೀರಾ? ಈ ವರದಿ ನೋಡಿ.
ರಾಜಶೇಖರಾಚಾರಿ ಎಂಬಾತ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಕೆನರಾ ಬ್ಯಾಂಕ್ನಲ್ಲಿ ಗೋಲ್ಡ್ ಅಪ್ರೈಸರ್. ಚಿನ್ನ ಮೌಲ್ಯಮಾಪಕನಾದ ರಾಜಶೇಖರಾಚಾರಿ ಉಂಡ ಮನೆಗೆ ಜಂತಿ ಎಣಿಸಿ ಈಗ ಕಂಬಿ ಎಣಿಸುವ ಹಾಗಾಗಿದ್ದಾನೆ. ತಾನು ಕೆಲಸ ಮಾಡುತ್ತಿರುವ ಬ್ಯಾಂಕ್'ನಲ್ಲೇ ಅಮಾಯಕ ರೈತರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು 66 ಲಕ್ಷ ಹಣ ಲಪಟಾಯಿಸಿದ್ದಾನೆ.
ಜನವರಿ 2015 ರಿಂದ ಅಕ್ಟೋಬರ್ 2016 ರವರೆಗೆ ಸುಮಾರು 80 ಗೋಲ್ಡ್ ಲೋನ್ ಪಡೆದಿದ್ದಾನೆ ಈ ವಂಚಕ. ಆದರೆ, ಬ್ಯಾಂಕ್'ನಿಂದ ನೋಟಿಸ್ ಬಂದ ಮೇಲಷ್ಟ ರಾಜಶೇಖರಾಚಾರಿ ಮಹಾಕಾರ್ಯ ರೈತರಿಗೆ ಗೊತ್ತಾಗಿದೆ. ಬ್ಯಾಂಕಿನಲ್ಲಿದ್ದ ಚಿನ್ನವನ್ನು ಪರಿಶೀಲಿಸಿದ ಬೀಚಗಾನಹಳ್ಳಿ ಮ್ಯಾನೇಜರ್, ಕೂಡಲೇ ಗುಡಿಬಂಡೆ ಪೊಲೀಸರಿಗೆ ದೂರು ನೀಡಿದ್ದಾರೆ..
ಅದೇನೇ ಇರಲಿ ಆರೋಪಿ ರಾಜಶೇಖರಾಚಾರಿ ಈ ಕುಕೃತ್ಯದಿಂದಾಗಿ, ಅಮಾಯಕ ರೈತರೂ ಪೋಲೀಸ್ ಠಾಣೆಯ ಮೆಟ್ಟಿಲು ಹತ್ತುವಂತಾಗಿದೆ.