ಕೊನೆ ಕ್ಷಣದಲ್ಲಿ ಅನಿತಾಗೆ ಟಿಕೆಟ್‌..?

By Suvarna Web DeskFirst Published Mar 21, 2018, 11:07 AM IST
Highlights

ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಮತ್ತೆ ಚನ್ನಪಟ್ಟಣದಲ್ಲಿ ಅವಕಾಶ ಬೇಕೆಂದು ಅನಿತಾ ಕುಮಾರಸ್ವಾಮಿ ಬಿಗಿಪಟ್ಟು ಹಿಡಿದಿದ್ದಾರೆ. ಇದರ ಜತೆಗೆ ಸ್ಥಳೀಯ ಜೆಡಿಎಸ್‌ ಮುಖಂಡರೂ ಅನಿತಾ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದಾರೆ.

ಚನ್ನಪಟ್ಟಣ: ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಮತ್ತೆ ಚನ್ನಪಟ್ಟಣದಲ್ಲಿ ಅವಕಾಶ ಬೇಕೆಂದು ಅನಿತಾ ಕುಮಾರಸ್ವಾಮಿ ಬಿಗಿಪಟ್ಟು ಹಿಡಿದಿದ್ದಾರೆ. ಇದರ ಜತೆಗೆ ಸ್ಥಳೀಯ ಜೆಡಿಎಸ್‌ ಮುಖಂಡರೂ ಅನಿತಾ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದಾರೆ.

ಈಗ ಧರ್ಮ ಸಂಕಟದಲ್ಲಿ ಸಿಲುಕಿರುವ ಜೆಡಿಎಸ್‌ ವರಿಷ್ಠ ದೇವೇಗೌಡರು ಅಂತಿಮ ಕ್ಷಣದಲ್ಲಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಸೊಸೆಯನ್ನು ಅಖಾಡಕ್ಕೆ ಇಳಿಸಿದರೂ ಅಚ್ಚರಿಯಿಲ್ಲ ಎಂದೇ ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್‌ ಅಭ್ಯರ್ಥಿಯಾಗಲು ಬಯಸಿರುವ ಶರತ್‌ ಚಂದ್ರ, ಯೋಗೇಶ್ವರ್‌ಗೆ ಪ್ರಬಲ ಪೈಪೋಟಿ ನೀಡುವ ಶಕ್ತಿ ಹೊಂದಿಲ್ಲ. ಸಂಸದ ಡಿ.ಕೆ. ಸುರೇಶ್‌ ಹಾಗೂ ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರಷ್ಟೇ ಸಮರ ತಾರಕಕ್ಕೇರಬಹುದು.

ಕ್ಷೇತ್ರದಲ್ಲಿ ಕೆರೆ ತುಂಬಿಸುವ ಕಾರ್ಯಕ್ರಮಗಳನ್ನು ಯೋಗೇಶ್ವರ್‌ ಯಶಸ್ವಿಯಾಗಿ ಜಾರಿಗೆ ತಂದಿದ್ದರೂ, ಅನೇಕ ಯೋಜನೆಗಳು ಪೂರ್ಣಗೊಂಡಿಲ್ಲ. ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ತಾಲೂಕಿನ ಗಡಿ ಗ್ರಾಮಗಳ ರಸ್ತೆ ಅಧ್ವಾನವಾಗಿವೆ. ಪಟ್ಟಣದ ಒಳಚರಂಡಿ (ಯುಜಿಡಿ) ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಂಬೇಡ್ಕರ್‌ ಭವನ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಜಗಜೀವನರಾಂ ಭವನಕ್ಕೆ ಹಣ ಬಿಡಗಡೆಯಾಗಿದ್ದರೂ ನಿರ್ಮಾಣಕ್ಕೆ ಚಾಲನೆ ಸಿಕ್ಕಿಲ್ಲ. ಕೆಲವಡೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇನ್ನೂ ಜೀವಂತವಾಗಿದೆ.

ಇದರ ಜತೆಗೆ ಪದೇಪದೇ ಪಕ್ಷಾಂತರ ಮಾಡುವ ಶಾಸಕ ಯೋಗೇಶ್ವರ್‌ ಮೇಲೆ ಮತದಾರರ ಅಸಮಾಧಾನವಿದೆ. ಆದರೆ, ಹಲವಾರು ಚುನಾವಣೆಗಳನ್ನು ಎದುರಿಸಿರುವ ಯೋಗೇಶ್ವರ್‌ ಚುನಾವಣೆಯ ಪಟ್ಟು, ವರಸೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಯುವ ಮುಖಂಡರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುತ್ತಿದ್ದಾರೆ. ದಿನಕ್ಕೊಂದು ಕಡೆ ರಹಸ್ಯ ಸಭೆಗಳನ್ನು ನಡೆಸಿ ಗೆಲವಿಗಾಗಿ ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ, ಈ ಬಾರಿ ಹೊರಗೆ ಕುಸ್ತಿ, ಒಳಗೊಳಗೇ ದೋಸ್ತಿ ತಂತ್ರಕ್ಕೆ ಜೆಡಿಎಸ್‌- ಕಾಂಗ್ರೆಸ್‌ ಮುಂದಾದರೆ ಯೋಗೇಶ್ವರ್‌ಗೆ ಕಷ್ಟವಾಗಬಹುದು.

ಯೋಗೇಶ್ವರ್‌ ಎದುರಾಳಿಗಳು? : ಕಾಂಗ್ರೆಸ್‌ನಿಂದ ಸಂಸದ ಡಿ.ಕೆ.ಸುರೇಶ್‌, ಶರತ್‌ ಚಂದ್ರ, ಜೆಡಿಎಸ್‌ನಿಂದ ಅನಿತಾಕುಮಾರಸ್ವಾಮಿ, ಎಚ್‌.ಸಿ. ಜಯಮುತ್ತು, ಲಿಂಗೇಶ್‌ ಕುಮಾರ್‌ ಹಾಗೂ ಗ್ರಾನೈಟ್‌ ಉದ್ಯಮಿ ನಿಜಲಿಂಗೇಗೌಡ ಹೆಸರುಗಳು ಕೇಳಿಬರುತ್ತಿವೆ.

click me!