ಕರ್ತವ್ಯದ ಅವಧಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿ: ಲೋಕಾಯುಕ್ತಕ್ಕೆ ದೂರು

By Suvarna NewsFirst Published Feb 7, 2023, 11:23 PM IST
Highlights

ಕರ್ತವ್ಯದ ವೇಳೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಧಿಕಾರ ದುರುಪಯೋಗ ಮಾಡಿದ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾವಣಗೆರೆ ಭ್ರಷ್ಟಾಚಾರ ವಿರೋಧಿ ವೇದಿಕೆ ಲೋಕಾಯುಕ್ತಕ್ಕೆ ದೂರು ನೀಡಿದೆ.

ದಾವಣಗೆರೆ: ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಮತ್ತು ಸುತ್ತೋಲೆಗಳಿವೆ. ಆದರೂ ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಹೊನ್ನಾಳಿ ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ ಹಾಗೂ ಹೊನ್ನಾಳಿ‌ ತಹಶೀಲ್ದಾರ್ ಅವರುಗಳು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿದ್ದಾರೆ ಆದ್ದರಿಂದ ಅವರ ವಿರುದ್ದ ಲೋಕಾಯುಕ್ತಕ್ಕೆ ದೂರು‌ ನೀಡಲಾಗಿದೆ ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಸೊರಟೂರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2022 ರ ಡಿಸೆಂಬರ್ 16 ರಂದು ಹೊನ್ನಾಳಿಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯರ (Renukacharya) ಸಹೋದರನ ಪುತ್ರ ಆರ್. ಚಂದ್ರಶೇಖರ್ (Chandrashekar) ಇವರ ಶ್ರದ್ಧಾಂಜಲಿಯ‌ ಖಾಸಗಿ ಕಾರ್ಯಕ್ರಮದಲ್ಲಿ ಸರ್ಕಾರಿ ಕರ್ತವ್ಯದ ಅವಧಿಯಲ್ಲಿ ಭಾಗವಹಿಸಿದ್ದ  ಸರ್ಕಾರಿ ಅಧಿಕಾರಿಗಳ ವಿರುದ್ಧ ಕರ್ತವ್ಯಲೋಪ, ಕರ್ತವ್ಯ ನಿರ್ಲಕ್ಷ್ಯ, ಅಧಿಕಾರ ಮತ್ತು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ 2023 ರ ಜನವರಿ 31 ರಂದು ಬೆಂಗಳೂರಿನ ಘನ ಲೋಕಾಯುಕ್ತ ಮುಖ್ಯ ಕಛೇರಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿಗಳಾದ  ಪಾಟೀಲ್‌ ರವರನ್ನು ಖುದ್ದು ಭೇಟಿಯಾಗಿ ದಾಖಲೆಗಳ ಸಮೇತ ದೂರು ಸಲ್ಲಿಸಲಾಗಿದೆ ಎಂದರು. 

ಸಿದ್ದರಾಮಯ್ಯ, ರಾಬರ್ಟ್‌ ವಾದ್ರಾ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ದೂರು

ಅಧಿಕಾರಿಗಳು ಕಾನೂನುಬದ್ಧವಾಗಿ ರಜೆಯನ್ನು ಹಾಕಿಕೊಂಡು ಅವರ ಸ್ವಂತ ಕಾರು-ಖರ್ಚಿನಲ್ಲಿ ಇಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ನಮ್ಮದೇನೂ ತಕರಾರಿಲ್ಲ. ಆದರೆ ಸಾರ್ವಜನಿಕರ ತೆರಿಗೆ ಹಣದಲ್ಲಿ ಆ ದಿನದ ಸಂಬಳ ಪಡೆದು ಮತ್ತು ಎಲ್ಲಾ ಸರ್ಕಾರಿ ಸೌಲಭ್ಯ ಗಳನ್ನು ದುರುಪಯೋಗಪಡಿಸಿಕೊಂಡು, ಕಚೇರಿಗೆ ಬರುವ ಜನಸಾಮಾನ್ಯರಿಗೆ ತೊಂದರೆ ಮಾಡಿ ಇಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ತಪ್ಪು ಮತ್ತು ಸಂವಿಧಾನ ವಿರೋಧಿಯಾಗುತ್ತದೆ. ಆದ್ದರಿಂದ ಈ ತರಹದ ಪ್ರಕರಣಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು, ಸಾರ್ವಜನಿಕರ ತೆರಿಗೆ ಹಣ ದುರುಪಯೋಗಬಾರದು ಎಂದು ಸಾರ್ವಜನಿಕರ ಹಿತದೃಷ್ಟಿಯ ಸದುದ್ದೇಶದಿಂದ ನಾವು ಈ ದೂರನ್ನು ದಾಖಲಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಂಜು ತಡಸ, ಧನಂಜಯ ಹರಮಘಟ್ಟ ಇದ್ದರು.

Kodagu: ಲಾರಿ ಚಾಲಕನಿಂದ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸಪ್ಪ

click me!