ವರ್ಷಗಳಿಂದ ಪುತ್ತೂರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಆರೋಪಿ 41 ಅರೆಸ್ಟ್‌ ವಾರಂಟ್‌ಗಳ ಬಳಿಕ ಬಂಧನ!

Published : Jul 10, 2026, 08:33 PM IST
Puttur Police Station

ಸಾರಾಂಶ

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ, 41 ಬಂಧನ ವಾರೆಂಟ್‌ಗಳನ್ನು ಹೊಂದಿದ್ದ ಕೇರಳ ಮೂಲದ ಕುಖ್ಯಾತ ಆರೋಪಿ ನೆಲ್ಸನ್ ಸಿ.ವಿ.ಯನ್ನು ಪುತ್ತೂರು ನಗರ ಪೊಲೀಸರು ಕೇರಳದಲ್ಲಿ ಯಶಸ್ವಿಯಾಗಿ ಬಂಧಿಸಿದ್ದಾರೆ. 

ಮಂಗಳೂರು (ಜು.10): ಬರೋಬ್ಬರಿ 41 ಬಂಧನ ವಾರೆಂಟ್‌ಗಳು ಜಾರಿಯಾಗಿದ್ದರೂ ಹಲವು ವರ್ಷಗಳಿಂದ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಕೇರಳ ಮೂಲದ 38 ವರ್ಷದ ಕುಖ್ಯಾತ ಆರೋಪಿಯನ್ನು ಪುತ್ತೂರು ನಗರಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿಯಾದ ನೆಲ್ಸನ್ ಸಿ.ವಿ. ಬಂಧಿತ ಆರೋಪಿಯಾಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, 2017ರ ಡಿಸೆಂಬರ್ 22 ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಮೂವರು ಅಪರಿಚಿತ ದರೋಡೆಕೋರರು, ಮನೆಯಲ್ಲಿದ್ದವರಿಗೆ ಪಿಸ್ತೂಲ್ ಹಾಗೂ ಚಾಕು ತೋರಿಸಿ ಜೀವಬೆದರಿಕೆ ಒಡ್ಡಿದ್ದರು. ಬಳಿಕ ಮನೆಯಿಂದ ಸುಮಾರು 2.9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 60,000 ರೂ. ನಗದನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.

41 ವಾರೆಂಟ್ ಜಾರಿ

ಈ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಆರೋಪಿ ನೆಲ್ಸನ್, ಬಳಿಕ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದ. ಆದರೆ, 2021ರ ಆಗಸ್ಟ್ 27 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಆತ ನಿರಂತರವಾಗಿ ತಲೆಮರೆಸಿಕೊಂಡಿದ್ದ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಆತನ ವಿರುದ್ಧ ನ್ಯಾಯಾಲಯವು ಬರೋಬ್ಬರಿ 41 ಪ್ರತ್ಯೇಕ ಬಂಧನ ವಾರೆಂಟ್‌ಗಳನ್ನು (Arrest Warrants) ಜಾರಿಗೊಳಿಸಿತ್ತು.

ಕೇರಳದಲ್ಲಿ ನಡೆದ ಖೆಡ್ಡಾ ಆಪರೇಷನ್

ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಪುತ್ತೂರು ಪೊಲೀಸರು ವಿಶೇಷ ಕಾರ್ಯಾಚರಣೆ ತಂಡವನ್ನು ರಚಿಸಿದ್ದರು. ಹೆಡ್ ಕಾನ್‌ಸ್ಟೆಬಲ್ ಸಂತೋಷ್ ಎ., ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ವಿನಾಯಕ ಮತ್ತು ಶಿವರಾಜ್ ಅವರನ್ನೊಳಗೊಂಡ ಪೊಲೀಸ್ ತಂಡವು ಆರೋಪಿಯ ಸುಳಿವು ಬೆನ್ನಟ್ಟಿ ಕೇರಳದ ತ್ರಿಶೂರ್ ಜಿಲ್ಲೆಯ ಮಿಯೂರ್‌ಗೆ ತೆರಳಿತ್ತು. ಅಲ್ಲಿ ಅಡಗಿದ್ದ ನೆಲ್ಸನ್‌ನನ್ನು ಬುಧವಾರದಂದು ಯಶಸ್ವಿಯಾಗಿ ವಶಕ್ಕೆ ಪಡೆದ ಪೊಲೀಸರು, ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಯು ಈ ಹಿಂದೆ ನ್ಯಾಯಾಲಯ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ವಿಚಾರಣೆಗೆ ಹಾಜರಾಗದೆ ವಂಚಿಸಿರುವುದರಿಂದ, ಆತನ ವಿರುದ್ಧ ಈಗ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 269 ರ ಅಡಿಯಲ್ಲಿ ಮತ್ತೊಂದು ಹೊಸ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

 

PREV
Read more Articles on
click me!

Recommended Stories

ಮತ್ಸ್ಯಪ್ರಿಯರಿಗೆ ಸಿಗೋದಿಲ್ಲ ಭೂತಾಯಿ/ಮತ್ತಿ ಮೀನು, ಬೆಚ್ಚಿ ಬೀಳಿಸುವ ವರದಿ ನೀಡಿದ CMFRI
Onam Special Trains: ಓಣಂ ಪ್ರಯಾಣಿಕರಿಗೆ ಸಿಹಿಸುದ್ದಿ! ಮಂಗಳೂರು-ಚೆನ್ನೈ ನಡುವೆ ವಿಶೇಷ ರೈಲು ಘೋಷಣೆ