
ಮಂಗಳೂರು: ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾದ (QCFI) ಬೆಂಗಳೂರು ಅಧ್ಯಾಯವು ಇತ್ತೀಚೆಗೆ ಆಯೋಜಿಸಿದ್ದ 'ಗುಣಮಟ್ಟ ಪರಿಕಲ್ಪನೆಗಳ ಅಧ್ಯಾಯ ಸಮ್ಮೇಳನ-2026'ರಲ್ಲಿ (CCQC-2026) ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಎರಡು ಚಿನ್ನದ ಪದಕಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ. ಕಾರ್ಯಾಚರಣೆಯ ಮಾನದಂಡಗಳು, ತಾಂತ್ರಿಕ ನಾವೀನ್ಯತೆ ಹಾಗೂ ಸುರಕ್ಷತಾ ಕ್ರಮಗಳಲ್ಲಿ ತೋರಿದ ಅತ್ಯುತ್ತಮ ನಿರ್ವಹಣೆಗೆ ವಿಮಾನ ನಿಲ್ದಾಣದ ತಾಂತ್ರಿಕ ತಂಡಗಳಿಗೆ ಈ ಗೌರವ ಲಭಿಸಿದೆ. ವಿಮಾನ ನಿಲ್ದಾಣದ ಎರಡು ಪ್ರತ್ಯೇಕ ವಿಭಾಗಗಳ ಪ್ರತಿನಿಧಿಗಳು ತಲಾ ಒಂದೊಂದು ಚಿನ್ನದ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ
ಕೃಷ್ಣದಾಸ್ ಎಂ.ಎಸ್. ಮತ್ತು ಇಪ್ಸಿತಾ ಚೌಧರಿ ಅವರನ್ನೊಳಗೊಂಡ ‘ಟೀಮ್ ಮಾರ್ಗದೀಪ್’ ಸಹಯೋಗಿ ಪರಿಕಲ್ಪನೆ (Allied Concept) ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದೆ. ಇವರು ವಿಮಾನ ನಿಲ್ದಾಣದ 'ನಿಖರ ಮಾರ್ಗಸೂಚಿ ಬೆಳಕು ವ್ಯವಸ್ಥೆ - ವರ್ಗ 1' (Precision Approach Lighting System - Cat 1) ಯೋಜನೆಗೆ ಸಂಬಂಧಿಸಿದಂತೆ ಕೈಗೊಂಡ ಸುಧಾರಣೆಗಳಿಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಕ್ಸ್ ಸಿಗ್ಮಾ ಗುಣಮಟ್ಟ ವಿಧಾನ, ಸಮಗ್ರ ನಿರ್ವಹಣಾ ನಿಯಂತ್ರಣ (TMC) ಹಾಗೂ ಲೀನ್ ಸುರಕ್ಷತಾ ವಲಯ ವಿಧಾನಗಳನ್ನು (Lean Safety Circle Protocols) ಸಮರ್ಥವಾಗಿ ಸಂಯೋಜಿಸಿ ಈ ಯೋಜನೆಯನ್ನು ರೂಪಿಸಲಾಗಿತ್ತು.
ಪ್ರಣಯ್ ಆಗಸ್ಟಿನ್ ಫ್ರಾನ್ಸಿಸ್ ಮತ್ತು ಪ್ರಜೇಶ್ ಪ್ರಕಾಶ್ ಅವರನ್ನೊಳಗೊಂಡ ‘ಟೀಮ್ ಸೇಫ್ ಎಡ್ಜ್’ ಸಹಯೋಗಿ ಕೈಝೆನ್ ಪರಿಕಲ್ಪನೆ [Allied (Kaizen) Concept] ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದೆ. ಈ ತಂಡವು ಕೃತಕ ಬುದ್ಧಿಮತ್ತೆ (AI) ಆಧಾರಿತ 'ವಾಹನದೊಳಗಿನ ಮೇಲ್ವಿಚಾರಣಾ ವ್ಯವಸ್ಥೆ'ಯನ್ನು (In-Vehicle Monitoring System) ಅಭಿವೃದ್ಧಿಪಡಿಸಿದೆ. ಇದರಲ್ಲಿ ಮುಂದುವರಿದ ಚಾಲಕ ಸಹಾಯ ವ್ಯವಸ್ಥೆ (ADAS) ಹಾಗೂ ಚಾಲಕ ಮೇಲ್ವಿಚಾರಣಾ ವ್ಯವಸ್ಥೆ (DMS) ತಂತ್ರಜ್ಞಾನಗಳನ್ನು ಅಳವಡಿಸಲಾಗಿದ್ದು, ನೆಲದ ಮೇಲಿನ ಕಾರ್ಯಾಚರಣೆಗಳಲ್ಲಿ ನೈಜ-ಸಮಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗಲಿದೆ.
ಈ ಪ್ರಶಸ್ತಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುರಕ್ಷತೆ, ನವೀನ ತಾಂತ್ರಿಕ ಏಕೀಕರಣ ಹಾಗೂ ನಿರಂತರ ಸುಧಾರಣೆಗೆ (Continuous Improvement) ಇರುವ ಬದ್ಧತೆಯನ್ನು ಎತ್ತಿಹಿಡಿದಿವೆ ಎಂದು ವಿಮಾನ ನಿಲ್ದಾಣದ ನಿರ್ವಹಣಾ ಮಂಡಳಿ ಹರ್ಷ ವ್ಯಕ್ತಪಡಿಸಿದೆ.