
ಶಿರಾ(ನ.19): ಶಿರಾ ನಗರದಲ್ಲಿ ಯುವತಿಯೊಬ್ಬಳು ತನ್ನ ಬಳಿ ಇದ್ದ ನಕಲಿ ಚೈನನ್ನು ಮಹಿಳೆಗೆ ಕೊಟ್ಟು ಆ ಮಹಿಳೆಯ ಬಳಿ ಇದ್ದ ಅಸಲಿ ಚಿನ್ನದ ಮಾಂಗಲ್ಯ ಸರ ಹಾಗೂ ಕಿವಿಯೋಲೆ ಕದ್ದೊಯ್ದಿರುವ ಘಟನೆ ಕೆ.ಎಸ್.ಆರ್.ಟಿ.ಬಿ. ಬಸ್ ನಿಲ್ದಾಣದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಚೆ ಗ್ರಾಮದ 53 ವರ್ಷದ ಜಯಮ್ಮ ಕೆಲಸದ ನಿಮಿತ್ತ ಶಿರಾ ನಗರಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ಅದೇ ದಿನ ಮಧ್ಯಾಹ್ನ 11.45ರ ಸಮಯದಲ್ಲಿ ಗೀತಾಹಾಲ್ ಮುಂಭಾದ ರಸ್ತೆಯಲ್ಲಿ ಹೋಗುತ್ತಿದ್ದಾಗ 20 ರಿಂದ 25 ವರ್ಷದ ಯುವತಿಯೊಬ್ಬಳು ಬಂಗಾರದ ಒಂದು ಲಕ್ಷ್ಮೀ ಕಾಸು, ಚಿನ್ನದ ಚೈನನ್ನು ಜಯಮ್ಮ ಅವರಿಗೆ ತೋರಿಸಿ ನನಗೆ ತುಂಬಾ ಕಷ್ಟ ಇದೆ. ಇದನ್ನು ಇಟ್ಟುಕೊಂಡು ನನಗೆ ಹಣ ಕೊಡಿ ಎಂದು ಕೇಳಿದ್ದಾಳೆ. ನಂತರ ಜಯಮ್ಮ ಅವರು ಯುವತಿಯು ತೋರಿಸಿದ್ದ ವಡವೆಗಳನ್ನು ಅಲ್ಲೇ ಹತ್ತಿರದಲ್ಲಿದ್ದ ಚಿನ್ನದ ಅಂಗಡಿಗೆ ಹೋಗಿ ಪರೀಕ್ಷಿಸಿದಾಗ ಅಸಲಿ ಎಂದು ಹೇಳಿದ್ದಾರೆ.
ಯಾದಗಿರಿ ಶ್ರೀಗಂಧ ಕಳವು: ಶಿವಮೊಗ್ಗ, ಕೇರಳದ ನಂಟು
ನಂತರ ಜಯಮ್ಮ ಅವರು ನನಗೆ ವಡವೆ ಬೇಡ ಎಂದು ಹೇಳಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಹೋಗಿದ್ದಾರೆ. ಆ ವೇಳೆ ಯುವತಿಯು ಮತ್ತೊಬ್ಬ ಮಹಿಳೆಯ ಜೊತೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಹೋಗಿ ಇವರು ನಮ್ಮ ತಾಯಿ ಎಂದು ಪರಿಚಯಿಸಿದ್ದಾಳೆ. ಆ ಮಹಿಳೆಯು ಕೆಲವು ವಡವೆಗಳನ್ನು ತೋರಿಸಿ ಇವು ಬಸ್ಸಿನಲ್ಲಿ ಸಿಕ್ಕಿವೆ. ಇವುಗಳನ್ನು ಇಟ್ಟುಕೊಂಡು ನಮಗೆ ಹಣ ಕೊಡಿ ನನ್ನ ಗಂಡ ಕುಡುಕನಾಗಿದ್ದು, ಇವುಗಳನ್ನು ತೋರಿಸಿದರೆ ಕಸಿದುಕೊಳ್ಳುತ್ತಾನೆ ಎಂದು ಹೇಳಿದ್ದಾಳೆ.
ನಮ್ಮ ಬಳಿ ಒಟ್ಟು 91 ಗ್ರಾಂ ವಡವೆ ಇವೆ. ಇದನ್ನು ಇಟ್ಟುಕೊಂಡು ನಿಮ್ಮ ಕೊರಳಿನಲ್ಲಿರುವ ವಡವೆಗಳನ್ನು ಕೊಡಿ ಎಂದಿದ್ದಾರೆ. ಜಯಮ್ಮ ತಮ್ಮ ಕೊರಳಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ, ಕಿವಿಯಲ್ಲಿದ್ದ 3ಗ್ರಾಂ ತೂಕದ ಗುಂಡುಗಳನ್ನು ನೀಡಿದ್ದಾರೆ. ನಂತರ ಕಳ್ಳಿಯರು ಅಲ್ಲಿಂದ ಪರಾರಿಯಾಗಿದ್ದಾರೆ.
ಮಹಿಳೆಯು ಅವರು ನೀಡಿದ್ದ ಒಡವೆಗಳನ್ನು ಬಂಗಾರದ ಅಂಗಡಿಗೆ ಹೋಗಿ ಪರೀಕ್ಷಿಸಿದಾಗ ಅವರು ನಕಲಿ ವಡವೆಗಳೆಂದು ತಿಳಿದು ಬಂದಿದೆ. ಈ ಬಗ್ಗೆ ಮಹಿಳೆಯು ಶಿರಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ