ಧರ್ಮ ತಿಳಿಸದೆ ಮದುವೆ ಆಗಿ ಮತಾಂತರ: ಯುವತಿ ದೂರು| ಗರ್ಭಪಾತ ಮಾಡಿಸಿ, ಚಿನ್ನಾಭರಣ ಕಸಿದುಕೊಂಡರು: ಆರೋಪ| ವಿಷಯವನ್ನು ಬೇರೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಆರೋಪಿ|
ಬೆಂಗಳೂರು(ಆ.09): ಹಿಂದು ಧರ್ಮದವನೆಂದು ಹೇಳಿಕೊಂಡು ಪ್ರೀತಿಸಿ ವಿವಾಹವಾಗಿ, ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಮಾರತ್ತಹಳ್ಳಿ ನಿವಾಸಿ ರಾಜೇಶ್ವರಿ (ಹೆಸರು ಬದಲಾಯಿಸಲಾಗಿದೆ) ಎಂಬುವರು ಕೊಟ್ಟ ದೂರಿನ ಮೇರೆಗೆ ಪತಿ ಮೊಹಮ್ಮದ್ ಸಾದೀಕ್ ಹಾಗೂ ಆತನ ಸಂಬಂಧಿಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಈ ಹಿಂದೆ ರಾಜೇಶ್ವರಿ ಅವರು ಮೊಹಮ್ಮದ್ ಸಾದಿಕ್ ಪ್ರೀತಿಸಿ ಇದೀಗ ವಿವಾಹವಾಗದೆ ವಂಚನೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಬಳಿಕ ಇಬ್ಬರು ವಿವಾಹವಾಗಿದ್ದರು. ಇದೀಗ ಧರ್ಮ ತಿಳಿಸದೇ ವಿವಾಹವಾಗಿ ಬಲವಂತವಾಗಿ ಮತಾಂತರ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ದೂರಿನ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆ.ಜಿ.ಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಗ್ರೋಸರಿ ಕಸ್ಟಮರ್ ಕೇರ್ಗೆ ಕರೆ ಮಾಡಿದ ಯುವತಿಗೆ ಭಾರೀ ಮೋಸ!
ಮೊಹಮ್ಮದ್ ಸಾದಿಕ್ ಎಂಬ ವ್ಯಕ್ತಿಯು 2016ರಲ್ಲಿ ತನ್ನ ಹೆಸರು ಸಿದ್ಧಾರ್ಥ ಎಂದು ಹೇಳಿಕೊಂಡು ನನ್ನನ್ನು ಪ್ರೀತಿಸಿದ್ದ. ಪ್ರೀತಿ ಮಾಡುವ ವೇಳೆ ತಾನು ಅನಾಥ ಹೇಳಿಕೊಂಡಿದ್ದ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಕಾರಣ ಆರೋಪಿ ನನ್ನೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದ. ನಂತರ 2019ರಲ್ಲಿ ಧರ್ಮಸ್ಥಳದ ಗಣಪತಿ ವಿಗ್ರಹದ ಮುಂದೆ ತಾಳಿ ಕಟ್ಟಿ ಮದುವೆಯಾಗಿದ್ದ.
ಕಳೆದ ಸೆಪ್ಟೆಂಬರ್ನಲ್ಲಿ ಪತಿ ಸಿದ್ಧಾರ್ಥ, ನಾನು ಹಿಂದು ಅಲ್ಲ, ನನ್ನ ನಿಜವಾದ ಹೆಸರು ಮೊಹಮ್ಮದ್ ಸಾದಿಕ್ ಎಂದು ತಿಳಿಸಿದ್ದ. ಬಳಿಕ ತಮ್ಮ ಸಂಬಂಧಿಕರನ್ನು ಒಪ್ಪಿಸಿ ವಿನೋಬಾನಗರದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿ ತಾಯಿ, ಸಹೋದರ ಮತ್ತು ಅತ್ತೆಯನ್ನು ಪರಿಚಯ ಮಾಡಿಸಿದ್ದ. ಆರೋಪಿಗಳು ಬಲವಂತವಾಗಿ ನನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿದ್ದಾರೆ. ಪತಿಯ ಸ್ನೇಹಿತ ಇಮ್ರಾನ್ ಷರೀಫ್ ಎಂಬಾತ ನನಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ವಿಷಯವನ್ನು ಬೇರೆಯವರಿಗೆ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಮಧ್ಯೆ ನಾನು ಗರ್ಭಿಣಿಯಾಗಿದ್ದ ವಿಷಯ ತಿಳಿದು ಪತಿ ಹಾಗೂ ಆತನ ಸಂಬಂಧಿಕರು ರಾತ್ರೋರಾತ್ರಿ ಗರ್ಭಪಾತ ಮಾಡಿಸಿದರು. ಇದೀಗ ಚಿನ್ನಾಭರಣ ಹಾಗೂ ಬೆಲೆ ವಸ್ತುಗಳನ್ನು ಕಸಿದುಕೊಂಡು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.