
ಮುಳಗುಂದ (ಜೂ.17): ಹಣ ವಂಚಕರ ತಂಡವೊಂದು ಪಟ್ಟಣದ ಖಾಸಗಿ ವೈದ್ಯ ಡಾ. ಎಸ್.ಸಿ. ಚವಡಿ ಅವರಿಗೆ ವಿಡಿಯೋ ಕರೆ ಮಾಡಿ ನಿರಂತರ 22 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಹಣ ಪಡೆಯಲು ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನ್ಯಾಶನಲ್ ಇನ್ವೆಸ್ಟಿಗೇಶನ್ ಆಥಾರಿಟಿ ಆಫ್ ಇಂಡಿಯಾ ಹೆಸರಲ್ಲಿ ಜೂ.11ರಂದು ಮಧ್ಯಾಹ್ನ 3ಕ್ಕೆ ವೈದ್ಯ ಚವಡಿ ಅವರಿಗೆ ಮೊದಲ ಕರೆ ಮಾಡಿ ನೀವು ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೆನರಾ ಬ್ಯಾಂಕ್ನಲ್ಲಿ ಅಪಾರ ಪ್ರಮಾಣದ ಹಣ ದುರ್ಬಳಕೆ ಮಾಡಿದ್ದೀರಿ. ನಿಮ್ಮ ಹೆಸರಿನಲ್ಲಿ ಮುಂಬೈಯ ಕೊಲೋಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನಿಮ್ಮನ್ನು ವಿಡಿಯೋ ಕರೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಭಯ ಪಡಿಸಿದ್ದಾರೆ.
ಆದರೆ ಅಷ್ಟಕ್ಕೂ ಡಾ. ಚವಡಿಯವರ ಖಾತೆ ಕೆನರಾ ಬ್ಯಾಂಕನಲ್ಲಿಲ್ಲ. ಆದರೆ ಅವರ ಖಾತೆ ಹಾಗೂ ಎಟಿಎಂ ಕಾರ್ಡ್ ಅವರ ಅರೆಸ್ಟ ವಾರಂಟ್ ಹೆಸರಿನಲ್ಲಿ ತಯಾರಿಸಲಾಗಿದೆ. ಅಲ್ಲದೇ ನಿಮ್ಮ ಹೆಸರಿನಲ್ಲಿರಬಹುದಾದ ಎಲ್ಲ ಹಣದ ದಾಖಲೆ ಹಾಗೂ ಆಸ್ತಿ ದಾಖಲೆಗಳನ್ನು ತೆಗೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.
ಅಲ್ಲದೇ ಡಾಕ್ಟರ್ ಆಧಾರ ಕಾರ್ಡ್ ಫೋಟೋ ಮಾಡಿಕೊಳ್ಳಲಾಗಿದೆ. ಜೊತೆಗೆ ಮುಳಗುಂದದ ಒಬ್ಬ ಪೊಲೀಸ್ ಸಿಬ್ಬಂದಿ ಹೆಸರು ಹಾಗೂ ಫೋಟೋ ತೋರಿಸಿದ್ದಾರೆ. ನಂತರ ವಿಚಾರಣೆಗೆ ಮೊದಲು ವಿಜಯಕುಮಾರ ಎನ್ನುವ ವ್ಯಕ್ತಿಯೊಬ್ಬ ಇನಸ್ಪೆಕ್ಟರ್ ಎಂದು ಹೇಳಿಕೊಂಡು ಎಲ್ಲ ವಿಚಾರಣೆ ನಡೆಸಿ ನೀವು ವಯಸ್ಸಾದವರು ನಿಮ್ಮನ್ನು ಇಲ್ಲಿಗೆ ಕರೆಸಿ ವಿಚಾರಣೆ ಮಾಡುವದು ಅಷ್ಟು ಸರಿ ಇಲ್ಲ. ಹೀಗಾಗಿ ವಿಡಿಯೋ ಕಾಲ್ನಲ್ಲಿ ವಿಚಾರಣೆ ಮಾಡುತ್ತಿದ್ದೇವೆ. ಮುಂದೆ ಡಿಸಿಪಿ ನಿಮ್ಮ ಜೊತೆ ವಿಚಾರಣೆ ಮಾಡುವರು ಅವರೊಂದಿಗೆ ನಯ ವಿನಯದೊಂದಿಗೆ ನಡೆದುಕೊಳ್ಳಿ ಎಂದು ಹೇಳಲಾಯಿತು.
ಅಲ್ಲದೇ ನರೇಶ ಗೋಯಲ್ ಹಾಗೂ ಅವರ ಗ್ಯಾಂಗನವರು ನಿಮ್ಮನ್ನು ಹಿಂಬಾಲಿಸುತ್ತಿದ್ದಾರೆ. ನೀವು ಈ ವಿಷಯವನ್ನು ಯಾರಿಗೂ ತಿಳಿಸಬೇಡಿ ಮನೆಯಲ್ಲಿ ನಿಮ್ಮ ಮನೆಯವರೊಂದಿಗೆ ಸಂಶಯ ಬರದಂತೆ ನಡೆದುಕೊಳ್ಳಿ, ಅವರು ನಿಮ್ಮನ್ನು ಕೊಲೆ ಮಾಡಲು ಹಿಂಬಾಲಿಸುತ್ತಿದ್ದಾರೆ. ನಿಮ್ಮ ಮನೆಯ ಸುತ್ತಮುತ್ತಲು ಇರಬಹುದು. ಹೀಗಾಗಿ ಗೌಪ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಂತರ ಮರುದಿನ ಮದ್ಯಾಹ್ನ 12ಕ್ಕೆ ಡಿಸಿಪಿ ದಯಾನಾಯಕ ವಿಚಾರಣೆ ಮಾಡಲು ಪ್ರಾರಂಭಿಸಿದರು.
ಅವರು ಮಾತನಾಡಿ, ನಾವು ವಿಚಾರಣೆ ಮಾತ್ರ ಮಾಡುತ್ತೇವೆ ನಂತರ ಸುಪ್ರೀಂ ಕೋರ್ಟಿಗೆ ಪ್ರಕರಣ ದಾಖಲಿಸುತ್ತೇವೆ ಅಲ್ಲಿ ನಿಮ್ಮ ಮಾಹಿತಿ ಒದಗಿಸಲಾಗುತ್ತದೆ. ಆಗ ನೀವು ವಕೀಲರನ್ನು ನೇಮಕ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಡಾ. ಚವಡಿ ಅವರು ಮನೆಯ ರೂಮಿನಲ್ಲಿ ಬಂಧಿಯಾಗಿದ್ದಾರೆ (ಡಿಜಿಟಲ್ ಅರೆಸ್ಟ್) ಎಂಬ ಸುದ್ದಿ ತಿಳಿದು ಊರಿನ ಹಿರಿಯರು ಮನೆಗೆ ಪೊಲೀಸರೊಂದಿಗೆ ಧಾವಿಸಿ ಬಂದು ಬಾಗಿಲು ಮುರಿಯುವ ಪ್ರಯತ್ನ ಮಾಡಿದಾಗ, ಡಾ.ಚವಡಿ ಅವರೇ ಬಾಗಿಲು ತೆಗೆದರು. ಆಗ ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ ವಿಡಿಯೋ ಕಾಲ್ನಲ್ಲಿ ಮಾತನಾಡಲು ಪ್ರಾರಂಭಿಸಿದಾಗ ವಂಚಕರು ವಿಡಿಯೋ ಕಾಲ್ ಕಟ್ ಮಾಡಿದರು. ಈ ಕುರಿತು ಗದಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮುಂದಿನ ತನಿಖೆ ನಡೆದಿದೆ.
ಈ ಪ್ರಕರಣ ಕುರಿತು ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು, ಇವುಗಳು ಮೋಸದ ಪ್ರಕರಣಗಳಾಗಿದ್ದು, ಸಾರ್ವಜನಿಕರು ಇದರ ಬಗ್ಗೆ ಭಯ ಬೀಳದೇ ಮುಕ್ತವಾಗಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿ. ಇಂತಹ ಪ್ರಕರಣದಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಯಾವುದೇ ಓಟಿಪಿ ಜಾಲತಾಣದಲ್ಲಿ ಹಂಚಿಕೊಳ್ಳಬಾರದು ಎಂದು ಮುಳಗುಂದ ಸಿಪಿಐ ಸಂಗಮೇಶ ಶಿವಯೋಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ