
ಬೆಂಗಳೂರು(ನ.04): ಬೀಗ ಹಾಕಿದ್ದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಕೃತ್ಯ ಎಸಗುತ್ತಿದ್ದ ಖದೀಮನೊಬ್ಬ ಪುಟ್ಟೇನಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ತಮಿಳುನಾಡು ರಾಜ್ಯದ ಡೆಂಕಣಿಕೋಟೆ ಮನೋಜ್ಕುಮಾರ್ ಬಂಧಿತನಾಗಿದ್ದು, ಆರೋಪಿಯಿಂದ 56 ಲಕ್ಷ ಮೌಲ್ಯದ 1.167 ಕೆ.ಜಿ ತೂಕದ ಚಿನ್ನಾಭರಣ, 300 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆತನಿಂದ ಕಳ್ಳ ಮಾಲು ಸ್ವೀಕರಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಚಿನ್ನಾಭರಣ ವ್ಯಾಪಾರಿ ಸೂರ್ಯಭಾಸ್ಕರ್ನನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳ ಹಿಂದೆ ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿನ ನಿರಂತರ ಮನೆಗಳ್ಳತನಗಳು ನಡೆದಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮರಾ ಹಾಗೂ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರ ಹೆಸರಲ್ಲಿ ಆನ್ಲೈನ್ ವಂಚನೆ: ನಾಲ್ವರು ಕಳ್ಳರು ಅಂದರ್
ಮೋಜಿನ ಜೀವನಕ್ಕೆ ಕಳ್ಳ ಹಾದಿ:
ತಮಿಳುನಾಡು ಮೂಲದ ಮನೋಜ್, ಪುಟ್ಟೇನಹಳ್ಳಿ ಹತ್ತಿರದ ವಿನಾಯಕ ನಗರದಲ್ಲಿ ನೆಲೆಸಿದ್ದ. ಕಾಫಿ ಮಾರಾಟ ಮಳಿಗೆಯಲ್ಲಿ ಕಚೇರಿ ಆತ ಸಹಾಯಕನಾಗಿದ್ದ. ಮೋಜಿನ ಜೀವನದೆಡೆಗೆ ಆಕರ್ಷಿತನಾದ ಮನೋಜ್, ಇದಕ್ಕಾಗಿ ಸುಲಭವಾಗಿ ಹಣ ಸಂಪಾದನೆಗೆ ಕಳ್ಳ ಹಾದಿ ತುಳಿದಿದ್ದಾನೆ. ಬಳಿಕ ಬೀಗ ಹಾಕಿದ್ದ ಮನೆಗಳನ್ನು ಗುರಿಯಾಗಿಸಿ ಆತ ಕಳ್ಳತನ ಮಾಡುತ್ತಿದ್ದ. ಬಳಿಕ ಕಳವು ವಸ್ತುಗಳನ್ನು ಸೂರ್ಯ ಭಾಸ್ಕರ್ ಮೂಲಕ ವಿಲೇವಾರಿ ಮಾಡಿ ಆತ ಹಣ ಸಂಪಾದಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ಪುಟ್ಟೇನಹಳ್ಳಿ ಬಳಿ ಮನೆಗಳ್ಳತನ ನಡೆದಿತ್ತು. ಆನಂತರ ನಾಲ್ಕು ಕೃತ್ಯಗಳು ವರದಿಯಾಗಿದ್ದವು. ಈ ಘಟನಾ ಸ್ಥಳಗಳನ್ನು ಪರಿಶೀಲಿಸಿದಾಗ ಆ ಕೃತ್ಯಗಳಲ್ಲಿ ಕೆಲವು ಸಾಮ್ಯತೆ ಕಂಡು ಬಂದಿದ್ದವು. ಹಳೇ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕಿದಾಗ ಮನೋಜ್ ಮೇಲೆ ಅನುಮಾನ ಮೂಡಿತು. ಅಂತೆಯೇ ಆತನ ಬಗ್ಗೆ ಮತ್ತಷ್ಟುಮಾಹಿತಿ ಕೆದಕಿದಾಗ ಕಳ್ಳತನದಲ್ಲಿನ ಪಾತ್ರ ಪತ್ತೆಯಾಯಿತು. ಈ ಸುಳಿವಿನ ಮೇರೆಗೆ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಯಿತು. ಈ ಮೊದಲು ಎರಡು ಡಕಾಯಿತಿ ಪ್ರಕರಣಗಳಲ್ಲಿ ಆತನ ಬಂಧನವಾಗಿತ್ತು. ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಮತ್ತೆ ತನ್ನ ಚಾಳಿ ಮುಂದುವರೆಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ