
ಬೆಂಗಳೂರು(ಡಿ.20): ಮುಂಜಾನೆ ಹೊತ್ತಿನಲ್ಲಿ ಪಿಜಿಗಳಿಗೆ ನುಗ್ಗಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ದೋಚುತ್ತಿದ್ದ ಸೋದರ ಸಂಬಂಧಿಗಳು ಸೇರಿದಂತೆ ಮೂವರನ್ನು ಯಶವಂತಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ. ಆಂಧ್ರಪ್ರದೇಶ ರಾಜ್ಯದ ಚಿತ್ತೂರಿನ ಪ್ರಭು, ಆತನ ಸಂಬಂಧಿ ಯುವರಾಜ್ ಹಾಗೂ ಈ ಕಳ್ಳರಿಂದ ಕದ್ದು ವಸ್ತುಗಳನ್ನು ಸ್ವೀಕರಿಸುತ್ತಿದ್ದ ತಮಿಳುನಾಡು ಮೂಲದ ಸೆಲ್ವರಾಜ್ ಬಂಧಿತರಾಗಿದ್ದು, ಆರೋಪಿಗಳಿಂದ ₹16 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 50 ಲ್ಯಾಪ್ಟಾಪ್ಗಳು ಹಾಗೂ 7 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೆ ನಾಲ್ವರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಯಶವಂತಪುರ ವ್ಯಾಪ್ತಿಯಲ್ಲಿ ಲ್ಯಾಪ್ಟಾಪ್ ಕಳ್ಳತನಗಳು ಹೆಚ್ಚಾಗಿರುವ ಬಗ್ಗೆ ವರದಿಯಾಗಿದ್ದವು. ಮತ್ತಿಕೆರೆ ಸಮೀಪ ಮುಂಜಾನೆ ಗಸ್ತಿನಲ್ಲಿದ್ದ ಪೊಲೀಸರು, ಶಂಕಾಸ್ಪದವಾಗಿ ಓಡಾಡುತ್ತಿದ್ದ ಪ್ರಭು ಹಾಗೂ ಯುವರಾಜ್ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಕೃತ್ಯಗಳು ಬಯಲಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಗಳಿಗೆ ನಕಲಿ ಶ್ಯೂರಿಟಿ: ಓರ್ವ ಮಹಿಳೆ ಸೇರಿ 8 ಮಂದಿ ಸೆರೆ
ಪಿಜಿಗಳಿಗೆ ಚಿತ್ತೂರು ಗ್ಯಾಂಗ್ ಹಾವಳಿ:
ಆಂಧ್ರಪ್ರದೇಶದ ಚಿತ್ತೂರಿನ ಪ್ರಭು ಹಾಗೂ ಯುವರಾಜ್ ಸೋದರ ಸಂಬಂಧಿಗಳಾಗಿದ್ದು, ಸುಲಭವಾಗಿ ಹಣ ಸಂಪಾದನೆಗೆ ಕಳ್ಳತನಕ್ಕಿಳಿದಿದ್ದರು. ತಮ್ಮ ನಾಲ್ಕೈದು ಸ್ನೇಹಿತರನ್ನು ಸೇರಿಸಿ ಪಿಜಿಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ಟಾಪ್ಗಳನ್ನು ದೋಚಲು ಈ ಸಂಬಂಧಿಕರು ತಂಡ ಕಟ್ಟಿದ್ದರು. ಮುಂಜಾನೆ ವೇಳೆ ಬಾಗಿಲು ತೆರೆದು ಪಿಜಿಗಳಲ್ಲಿ ವಿದ್ಯಾರ್ಥಿಗಳು ನಿದ್ರೆಗೆ ಜಾರಿದ್ದ ವೇಳೆ ಅವರ ಕೋಣೆಗಳಿಗೆ ನುಗ್ಗಿ ಆರೋಪಿಗಳು ಲ್ಯಾಪ್ಟಾಪ್ ಹಾಗೂ ಮೊಬೈಲ್ ಕಳವು ಮಾಡುತ್ತಿದ್ದರು. ಹೀಗೆ ಕಳವು ಮಾಡಿ ವಸ್ತುಗಳನ್ನು ಸೆಲ್ವರಾಜ್ ಮೂಲಕ ವಿಲೇವಾರಿ ಮಾಡಿಸುತ್ತಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಅಂತೆಯೇ ನಗರಕ್ಕೆ ಚಿತ್ತೂರಿನಿಂದ ಬಸ್ ಹಾಗೂ ರೈಲಿನಲ್ಲಿ ಚಿತ್ತೂರು ಗ್ಯಾಂಗ್ ಬರುತ್ತಿತ್ತು. ಬಳಿಕ ವಿದ್ಯಾರ್ಥಿಗಳು ಹೆಚ್ಚಾಗಿ ನೆಲೆಸಿರುವ ಪಿಜಿಗಳ ಕಡೆ ಹಗಲು ಹೊತ್ತಿನಲ್ಲಿ ಅಡ್ಡಾಡಿ ಗುರಿ ನಿಗದಿಗೊಳಿಸುತ್ತಿದ್ದರು. ತರುವಾಯ ತಡ ರಾತ್ರಿ ಆ ಪಿಜಿಗಳಿಗೆ ತೆರಳಿ ಆರೋಪಿಗಳು ಕೈ ಚಳಕ ತೋರಿಸುತ್ತಿದ್ದರು. ಅದರಂತೆ ಕೆಲ ದಿನಗಳಿಂದ ಯಶವಂತಪುರ ವ್ಯಾಪ್ತಿಯ ಪಿಜಿಗಳಿಗೆ ಚಿತ್ತೂರ್ ಗ್ಯಾಂಗ್ ಹಾವಳಿಯಿಟ್ಟಿತ್ತು. ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಪಿಜಿಯಲ್ಲಿ ಕಳ್ಳತನ ಕೃತ್ಯದಲ್ಲಿ ಆರೋಪಿಗಳು ಸಕ್ರಿಯವಾಗಿದ್ದ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರಪ್ರದೇಶ ರಾಜ್ಯದ ಚಿತ್ತೂರಿನ ಪ್ರಭು, ಆತನ ಸಂಬಂಧಿ ಯುವರಾಜ್ ಹಾಗೂ ಈ ಕಳ್ಳರಿಂದ ಕದ್ದು ವಸ್ತುಗಳನ್ನು ಸ್ವೀಕರಿಸುತ್ತಿದ್ದ ತಮಿಳುನಾಡು ಮೂಲದ ಸೆಲ್ವರಾಜ್ ಬಂಧಿತರಾಗಿದ್ದು, ಆರೋಪಿಗಳಿಂದ ₹16 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 50 ಲ್ಯಾಪ್ಟಾಪ್ಗಳು ಹಾಗೂ 7 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ