
ಮೈಸೂರು (ಜು.13): ವಿಧವೆಯರು, ಡಿವೋರ್ಸ್ ಪಡೆದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಬರೋಬರಿ 12 ಮದುವೆಯಾಗಿ 13 ನೇ ಮದುವೆಗೆ ಸಿದ್ಧವಾಗಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದ ಖತರ್ನಾಕ್ ವಂಚಕನ ಇನ್ನಷ್ಟು ವಿಷಯಗಳು ಈಗ ಬಯಲಾಗುತ್ತಿವೆ. ಬೆಂಗಳೂರು ಮೂಲದ ಮಹೇಶ್ (35) ಎಂಬ ಈ ಖತರ್ನಾಕ್ ವಂಚಕನನ್ನು ಮೈಸೂರು ಪೊಲೀಸರು ಮಂಗಳವಾರ ಬಂಧಿಸಿದ್ದರು. ವಿಚಾರಣೆ ವೇಳೆ ಇವನ ಇನ್ನಷ್ಟು ರಾಸಲೀಲೆಗಳು ಬಹಿರಂಗಗೊಂಡಿದ್ದು, ಡೈರೆಕ್ಟರ್ ಸ್ಪೆಷಲ್ ಸಿನಿಮಾ ಮಾದರಿಯನ್ನು ಮಹೇಶ್ ಅನುಸರಿಸಿದ್ದಾನೆ. ಶಾದಿ ಡಾಟ್ ಕಾಂ ಮೂಲಕ ಮಹಿಳೆಯರ ಸಂಪರ್ಕ ಪಡೆದು ಅವರನ್ನು ಮದುವೆಯಾಗಿ, ಮಕ್ಕಳು ಮಾಡಿ, ನಗ-ನಾಣ್ಯ ದೋಚಿ ನಾಪತ್ತೆಯಾಗುತ್ತಿದ್ದ.
ಆದರೆ ಮಾರ್ಯಾದೆಗೆ ಅಂಜಿ ಇವನ ವಿರುದ್ಧ ಕಂಪ್ಲೇಂಟ್ ಕೊಡಲು ಮಹಿಳೆಯರ ಹಿಂದೇಟು ಹಾಕಿದ್ದಾರೆ. ಮಹಿಳೆಯರನ್ನು ಮದ್ವೆಯಾಗುವಾಗ ತಲಾ 5 ಸಾವಿರ ಕೊಟ್ಟು ಬಾಡಿಗೆಗೆ ತಂದೆ-ತಾಯಿ, ಬಂಧು ಬಳಗವನ್ನು ಕರೆದುಕೊಂಡು ಹೋಗುತ್ತಿದ್ದ. ಒಂದೊಂದು ಮದುವೆಗೆ ಒಂದೊಂದು ಬಳಗ ಫಿಕ್ಸ್ ಮಾಡುತ್ತಿದ್ದ. ಒಟ್ಟು 12 ಮದುವೆ ಆಗಿದ್ದಾನೆ. ಈ ಪೈಕಿ 6 ಮಹಿಳೆಯರಿಗೆ ಮಕ್ಕಳನ್ನು ನೀಡಿದ್ದಾನೆ. ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆಯನ್ನು ಛಾಳಿ ಮಾಡಿಕೊಂಡ ಇವನು ವರ್ಷಕ್ಕೆ ಸರಾಸರಿ 20 ಲಕ್ಷ ರೂ. ಹಣ ಸಂಪಾದಿಸಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಆಸ್ತಿ ಮಾಡದೇ ಶೋಕಿ ಮಾಡುತ್ತಿದ್ದ.
15 ಮಹಿಳೆಯರ ಮದುವೆಯಾಗಿ ವಂಚಿಸಿದ್ದವನ ಬಂಧನ: ವಿಧವೆ, ಮದುವೆ ಆಗದ ಮಧ್ಯ ವಯಸ್ಕರೇ ಈತನ ಟಾರ್ಗೆಟ್
ಮ್ಯಾಟ್ರಿಮೋನಿ ಪ್ರೊಫೋಲ್ ನೋಡಿ ಮದುವೆ ಮಾಡುವವರೇ ಎಚ್ಚರ: ಶಾದಿ ಡಾಟ್.ಕಾಂ, ಮ್ಯಾಟ್ರಿಮೋನಿ ಪ್ರೊಫೋಲ್ ನೋಡಿ ಮದುವೆ ಮಾಡುವವರೇ ಎಚ್ಚವಾಗಿರಿ ಎಂದು ಮೈಸೂರು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಮನವಿ ಮಾಡಿದ್ದಾರೆ. ಆನ್ಲೈನ್ನಲ್ಲಿ ಮದುವೆ ಪ್ರಸ್ತಾಪ ಬಂದಾಗ ಪೂರ್ವಾಪರ ವಿಚಾರಿಸಬೇಕು. ಆಕರ್ಷಣೆಗೆ ಒಳಗಾಗಿ ಮದುವೆಗೆ ಆತುರ ಮಾಡಬಾರದು. ಈ ಬಗ್ಗೆ ಯುವತಿಯ ಕುಟುಂಬಸ್ಥರು ಜಾಗೃತಿ ವಹಿಸಬೇಕು. ಮಹಿಳೆಯ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಮಹೇಶ್ ಮೋಸ ಮಾಡಿದ್ದಾನೆ. ಆರೋಪಿ ವಯಸ್ಸಯ 35 ವರ್ಷ.
ಈತ 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ರಿಕ್ವೆಸ್ಟ್ ಕಳುಹಿಸುತ್ತಿದ್ದ. ಜೀವನದಲ್ಲಿ ಸೆಟಲ್ ಆಗಿರುವವರು, ತುಂಬಾ ದುಡ್ಡು ಇರುವವರನ್ನು ಪುಸಲಾಯಿಸಿ ಮದುವೆ ಆಗುತ್ತಿದ್ದ. ನೋಡಲು ಚೆನ್ನಾಗಿದ್ದಾನೆ, ಒಳ್ಳೆಯ ಡ್ರೆಸ್ ಹಾಕುತ್ತಿದ್ದ. ನಾನು ಡಾಕ್ಟರ್, ದೇಶದ ತುಂಬೆಲ್ಲ ಓಡಾಡುತ್ತಿರುತ್ತೇನೆ ಅಂತೆಲ್ಲ ನಂಬಿಸುತ್ತಿದ್ದ. ಇಂತಹ ಗಂಡು ಸಿಕ್ಕಿದ್ದೇ ಪುಣ್ಯ ಅಂತ ನಂಬಿ ಮದುವೆ ಮಾಡಿಕೊಂಡುತ್ತಿದ್ದರು. ಮದುವೆ ಮಾತುಕತೆಗೆ ಬಾಡಿಗೆ ತಂದೆ- ತಾಯಿ ಕರೆದುಕೊಂಡು ಹೋಗುತ್ತಿದ್ದ. ದುಡ್ಡು ಕೊಟ್ಟು ಕೂಲಿ ಕೆಲಸದವರನ್ನು ತಂದೆ- ತಾಯಿ ರೀತಿ ನಟಿಸಲು ಕರೆದೊಯ್ಯುತ್ತಿದ್ದ.
ರಾಹುಲ್ ಗಾಂಧಿ ಅನರ್ಹತೆ: ಕಾಂಗ್ರೆಸ್ ಮೌನ ಪ್ರತಿಭಟನೆ
ಕೆಲ ಪ್ರಕರಣಗಳಲ್ಲಿ ನಾನು ಅನಾಥ. ನೀವು ಸಹಕಾರ ಕೊಟ್ಟರೆ ಮದುವೆ ಆಗುತ್ತೆ ಅಂತ ನಂಬಿಸಿ ಯಾರ್ಯಾರನ್ನೋ ತಂದೆ- ತಾಯಿಯಂತೆ ಸುಳ್ಳು ಹೇಳಲು ಒಪ್ಪಿಸಿದ್ದಾನೆ. ಮದುವೆಯಾದ ಒಂದು ವಾರದಲ್ಲೇ ಬಿಟ್ಟು ಹೋಗಿದ್ದಾನೆ. ಹಣ, ಚಿನ್ನಾಭರಣ ಕದ್ದು ಪರಾರಿ ಆಗಿದ್ದಾನೆ. ಆದರೂ ಮೋಸ ಹೋದವರು ದೂರು ಕೊಡಲು ಮುಂದೆ ಬರುತ್ತಿಲ್ಲ. ಮದುವೆಯಾದ ಮಹಿಳೆಯರು ಒಬ್ಬರಿಗೊಬ್ಬರು ಸಂಪರ್ಕ ಮಾಡದಂತೆ ಪ್ಲ್ಯಾನ್ ಮಾಡಿದ್ದಾನೆ. ಮೊಬೈಲ್ ಸಿಮ್ ಕಾರ್ಡ್ ಬದಲಿಸಿ ನಾಪತ್ತೆ ಆಗುತ್ತಿದ್ದ. ಈ ಕಾರಣಕ್ಕೆ ಬಹುತೇಕರು ಈತನನ್ನು ಹುಡುಕುವ ಗೋಜಿಗೆ ಹೋಗಿಲ್ಲ ಎಂದು ಪ್ರಕರಣ ಇಂಚಿಂಚು ಮಾಹಿತಿಯನ್ನು ಡಿಸಿಪಿ ಮುತ್ತುರಾಜ್ ಬಿಚ್ಚಿಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ